ಉಡುಪಿ: ಉಡುಪಿಯ ಕಾಂಗ್ರೆಸ್ ಪಕ್ಷದಲ್ಲಿ ತಮ್ಮದೇ ಪಕ್ಷದ ಬಡ ಹಿಂದೂ ಮಹಿಳಾ ಕಾರ್ಯಕರ್ತರಿಗೆ ರಕ್ಷಣೆಯೇ ಇಲ್ಲ, ತಮ್ಮ ಪಕ್ಷದ ಮುಖಂಡನ ಕಚೇರಿಯಲ್ಲಿಯೇ ಸಂಧಾನಕ್ಕೆಂದು ಕರೆಸಿ ಹಲ್ಲೆ ನಡೆಸಿರುವ ಘಟನೆ ನಡೆದಿರುವುದು ಅತ್ಯಂತ ಖಂಡನೀಯ ಎಂದು ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ನೀತಾ ಪ್ರಭು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಪ್ರಸಾದ್ ಕಾಂಚನ್ ಕಚೇರಿಯಲ್ಲಿ ಅವರ ಸಮಕ್ಷಮದಲ್ಲಿಯೇ ಇಬ್ಬರು ಹಿಂದೂ ಮಹಿಳಾ ಕಾರ್ಯಕರ್ತರ ಮೇಲೆ ಓರ್ವ ಅಲ್ಪಸಂಖ್ಯಾತ ಮಹಿಳೆ ಹಲ್ಲೆ ನಡೆಸಿರುವ ಘಟನೆ ಕಾಂಗ್ರೆಸ್ ಪಕ್ಷದಲ್ಲಿ ಹಿಂದೂ ಮಹಿಳೆಯರಿಗೆ ಎಷ್ಟು ಗೌರವ, ರಕ್ಷಣೆ ನೀಡುತ್ತದೆ ಎಂಬುದು ಈ ಘಟನೆಯಿಂದ ಬಯಲಾಗಿದೆ.
ರಾಜಕೀಯ ಒತ್ತಡ ಬಳಸಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯರನ್ನು ಡಿಸ್ಚಾರ್ಜ್ ಮಾಡಿಸಿ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡದಂತೆ ಒತ್ತಡ ಹೇರಿರುವ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿದ್ದು, ಮಹಿಳೆಯರ ರಕ್ಷಣೆ ಬಗ್ಗೆ ಭಾಷಣ ಬಿಗಿಯುವ ಕಾಂಗ್ರೆಸ್ ಮುಖಂಡರು ಇದೀಗ ಜಾಣ ಮೌನ ವಹಿಸಿದ್ದಾರೆ.
ಕಳೆದ ಬಾರಿ ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಹೊಡೆದಾಡಿಕೊಂಡ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು, ಇದೀಗ ಮಹಿಳಾ ಕಾರ್ಯಕರ್ತರ ಹಲ್ಲೆ ಘಟನೆಗಳು ಕಾಂಗ್ರೆಸ್ ಪಕ್ಷದಲ್ಲಿ ತಮ್ಮದೇ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎಂದು ಪದೇ ಪದೇ ಸಾಬೀತಾಗಿದೆ.
ಕಾಂಗ್ರೆಸ್ ಪಕ್ಷದ ಇಂತಹ ಘಟನೆಗಳಿಂದ ಉಡುಪಿಯ ಜನತೆ ಆಕ್ರೋಶಗೊಂಡಿದ್ದು, ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ನೀತಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







