ಮಣಿಪಾಲ, ಜುಲೈ 21, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು ಸೋಲಾರ್ ಡೆಕಾಥ್ಲಾನ್ ಇಂಡಿಯಾ (Solar Decathlon India – ಎಸ್ಡಿಐ) 2025–26ರ ಅಂತಿಮ ಸ್ಪರ್ಧೆಯಲ್ಲಿ ಅತ್ಯುನ್ನತ ತೀರ್ಪುಗಾರರ ಪ್ರಶಸ್ತಿ (ಗ್ರ್ಯಾಂಡ್ ಜ್ಯೂರಿ ಅವಾರ್ಡ್) ಯನ್ನು ತನ್ನದಾಗಿಸಿಕೊಂಡಿದೆ. ದೇಶದ ವಿವಿಧ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ ಭಾಗವಹಿಸಿದ್ದ 233 ತಂಡಗಳು ಹಾಗೂ ಅಂತಿಮ ಹಂತಕ್ಕೆ ಆಯ್ಕೆಯಾದ 36 ತಂಡಗಳ ಪೈಕಿ ಮಾಹೆಯ ವಿದ್ಯಾರ್ಥಿಗಳು ಒಟ್ಟಾರೆಯಾಗಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
‘ಟೀಮ್ ಆಗ್ನಿಯ’ ಹೆಸರಿನಲ್ಲಿ ಸ್ಪರ್ಧಿಸಿದ್ದ ಮಾಹೆಯ ಮಣಿಪಾಲ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆಂಡ್ ಪ್ಲಾನಿಂಗ್ (ಎಂಎಸ್ಎಪಿ-ಎಂಸ್ಯಾಪ್) ಹಾಗೂ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ವಿದ್ಯಾರ್ಥಿಗಳು, ಜಮ್ಮು-ಕಾಶ್ಮೀರದ ಡೋಡಾ ಜಿಲ್ಲೆಯ ಬ್ರೆಸ್ವಾನಾದಲ್ಲಿರುವ ಹಾಜಿ ಪಬ್ಲಿಕ್ ಸ್ಕೂಲ್ ಪುನರಭಿವೃದ್ಧಿಗಾಗಿ ‘ಪ್ರಾಜೆಕ್ಟ್ ಆಬ್ರೂ (Project Aabroo)’ ಎಂಬ ಹವಾಮಾನ-ಸ್ಪಂದನಶೀಲ (ಕ್ಲೈಮೇಟ್ ರೆಸ್ಪಾನ್ಸಿವ್) ಯೋಜನೆಯನ್ನು ರೂಪಿಸಿದ್ದರು. ಈ ಯೋಜನೆಯು ಮೊದಲು ಶೈಕ್ಷಣಿಕ ನಿರ್ಮಾಣ ವಿಭಾಗದಲ್ಲಿ (ಎಜುಕೇಶನಲ್ ಬಿಲ್ಡಿಂಗ್ ಡಿವಿಜನ್) ಪ್ರಥಮ ಸ್ಥಾನ ಪಡೆದು, ಬಳಿಕ ಗ್ರ್ಯಾಂಡ್ ಜ್ಯೂರಿ ಸುತ್ತಿಗೆ ಪ್ರವೇಶಿಸಿ ಒಟ್ಟಾರೆ ಪ್ರಶಸ್ತಿಯನ್ನು ಗಳಿಸಿತು.
ಸಾಂಪ್ರದಾಯಿಕ ಕಾಶ್ಮೀರಿ ಕಾಂಗರ್ ಪರಿಕಲ್ಪನೆಯಿಂದ ಪ್ರೇರಣೆ ಹೊಂದಿ ವಿದ್ಯಾರ್ಥಿಗಳು ಪ್ರಾಜೆಕ್ಟ್ ಆಬ್ರೂ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದರು. ಕಾಶ್ಮೀರದ ಹಾಜಿ ಪಬ್ಲಿಕ್ ಶಾಲೆಯನ್ನು ಸದೃಢ ಹಾಗೂ ಸುಸ್ಥಿರ ಕಲಿಕಾ ವಾತಾವರಣವಾಗಿ ಮರುರೂಪಿಸುವ ಆಶಯವನ್ನು ಯೋಜನೆ ಹೊಂದಿದೆ. ಸರಳ ಸೌರ ವಿನ್ಯಾಸ (ಪ್ಯಾಸಿವ್ ಸೋಲಾರ್ ಡಿಸೈನ್), ಪುನರ್ ನವೀಕರಿಸಬಹುದಾದ ಇಂಧನ ವ್ಯವಸ್ಥೆ, ಸ್ಥಳೀಯವಾಗಿ ದೊರೆಯುವ ನಿರ್ಮಾಣ ಸಾಮಗ್ರಿ, ಜಲ ಸಂರಕ್ಷಣೆ, ಕೃಷಿ ಶಿಕ್ಷಣ ಹಾಗೂ ಸಮುದಾಯ-ಕೇಂದ್ರಿತ ಅವಕಾಶಗಳಿಂದ ಕೂಡಿದ ಪ್ರಾಜೆಕ್ಟ್ ಆಬ್ರೂ ಯೋಜನೆಯನ್ನು ಆ ನಿರ್ದಿಷ್ಟ ಪ್ರದೇಶದ ಅನಿರ್ಧರಿತ ಹವಾಮಾನ ಹಾಗೂ ಸೀಮಿತ ಮೂಲಸೌಕರ್ಯದಿಂದ ಉಂಟಾಗುವ ಸವಾಲುಗಳಿಗೆ ಪರಿಣಾಮಕಾರಿ ಪರಿಹಾರವಾಗಿ ಪರಿಗಣಿಸಲಾಗಿದೆ.
ಸುಮಾರು ಒಂದು ವರ್ಷದ ಅವಧಿಯಲ್ಲಿ ಈ ಯೋಜನೆ ಸಿದ್ಧಗೊಂಡಿದ್ದು 13 ವಿದ್ಯಾರ್ಥಿಗಳ ತಂಡವು ಎಂಸ್ಯಾಪ್ನ ಪ್ರಾಧ್ಯಾಪಕರಾದ ಡಾ. ದೀಪಿಕಾ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಈ ಯೋಜನೆಯನ್ನು ಅಭಿವೃದ್ಧಿಪಡಿಸಿದೆ. ಹಾಜಿ ಪಬ್ಲಿಕ್ ಸ್ಕೂಲ್ನ ನಿರ್ದೇಶಕಿ ಸಬ್ಬಾ ಹಾಜಿ ಈ ಯೋಜನೆಯ ಸಹಭಾಗಿಯಾಗಿದ್ದರೆ, ಔದ್ಯಮಿಕ ಸಹಭಾಗಿಯಾಗಿ ರುತುಜಾ ಉಲ್ಹೆ ಸಹಕರಿಸಿದ್ದಾರೆ.
ತಂಡವನ್ನು ಅಭಿನಂದಿಸಿದ ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು, ” ಟೀಮ್ ಅಗ್ನಿಯ, ಸಮಷ್ಟಿ ಚಿಂತನೆಯ ಮೂಲಕ ಸಮಾಜಪರ ಯೋಜನೆಗಳನ್ನು ರೂಪಿಸಬಹುದು ಎಂಬುದಕ್ಕೆ ಮಾದರಿಯಾಗಿದೆ. ಸೋಲಾರ್ ಡೆಕಾಥ್ಲಾನ್ ಇಂಡಿಯಾದಲ್ಲಿ ಪ್ರಶಸ್ತಿ ಪುರಸ್ಕೃತವಾದ ಈ ತಂಡದ ಸಾಧನೆಯ ಬಗ್ಗೆ ಮಾಹೆ ಅಭಿಮಾನ ಪಡುತ್ತದೆ” ಎಂದು ಹೇಳಿದರು.







