ಮಣಿಪಾಲ, ಜುಲೈ 16, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿಸಲಾಗಿರುವ ಉತ್ಕೃಷ್ಟ ಸಂಸ್ಥೆಯು ಮೂರು ವಾರಗಳ ಪರ್ಯಂತ ಆಯೋಜಿಸುತ್ತಿರುವ ‘ಆಟಿದ ತುಳು ಪರ್ಬ’ ಎಂಬ ಬಹುಮುಖಿ ಚಟುವಟಿಕೆಗಳ ಉತ್ಸವಕ್ಕೆ ಪ್ರಾದೇಶಿಕ ಸಂಸ್ಕೃತಿ ಉತ್ಸವಕ್ಕೆ ಗುರುವಾರ [ಜುಲೈ 16, 2026) ಚಾಲನೆ ನೀಡಲಾಯಿತು.
ಮಾಹೆಯ ಸಹಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್ ಮತ್ತು ಕುಲಪತಿಗಳಾದ ಡಾ. ಶರತ್ ಕೆ. ರಾವ್ ಅವರು ನಿಸರ್ಗದ ಫಲವಂತಿಕೆಯನ್ನು ಬಿಂಬಿಸುವ ಸಾಂಕೇತಿಕ ಪ್ರಕ್ರಿಯೆಯಾದ ತೆಂಗಿನ ಸಿರಿಯನ್ನು ಅರಳಿಸುವ ಮೂಲಕ ಉದ್ಘಾಟಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ. ಎಚ್. ಎಸ್. ಬಲ್ಲಾಳ್ ಅವರು, “ಮಾಹೆಯಲ್ಲಿ ಆಟಿದ ತುಳು ಪರ್ಬವನ್ನು ಆಯೋಜಿಸುವ ಮೂಲಕ ಉನ್ನತ ಶಿಕ್ಷಣ ಸಂಸ್ಥೆಯೊಂದು ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸುತ್ತಿದೆ. ನಾವು ವಿಶ್ವಮಟ್ಟಕ್ಕೆ ಹೆಮ್ಮರವಾಗಿ ಬೆಳೆದರೂ ನಮ್ಮ ಬೇರುಗಳನ್ನು ಮರೆಯಲಾರೆವು ಎಂಬುದಕ್ಕೆ ಈ ಕಾರ್ಯಕ್ರಮ ದೃಷ್ಟಾಂತವಾಗಿದೆ. ಈ ಪ್ರದೇಶದ ಉನ್ನತ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ‘ಆಟಿದ ತುಳು ಪರ್ಬ’ ಎಂಬ ಉಪಕ್ರಮವು ಭಾರತೀಯ ಜ್ಞಾನಪರಂಪರೆಯ ಸ್ಥಳೀಯ ವಿಭಾಗದ ಮಹತ್ವವನ್ನು ಎತ್ತಿಹಿಡಿಯುತ್ತದೆ ” ಎಂದು ಹೇಳಿದರು.
ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತ, “ಆಟಿದ ತುಳು ಪರ್ಬವನ್ನು ಆಯೋಜಿಸುವ ಮೂಲಕ ಮಾಹೆಯು ಕೇವಲ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲ, ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶ್ವವೇ ಗಮನಿಸುವ ಕೆಲಸ ಮಾಡುತ್ತಿದೆ. ಈ ವಿಶಿಷ್ಟ ಕಾರ್ಯಕ್ರಮದಲ್ಲಿ ತುಳುವರ ಜೊತೆಗೆ ಕರ್ನಾಟಕದ ಮತ್ತು ಭಾರತದ ಅನ್ಯಾನ್ಯ ಭಾಷಿಗರು, ವಿದೇಶದ ವಿದ್ಯಾರ್ಥಿಗಳು ಕೂಡ ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮವು ತುಳುವರಿಗೆ ತಮ್ಮ ಶ್ರೀಮಂತ ಭಾಷೆ-ಸಂಸ್ಕೃತಿಗಳನ್ನು ನೆನಪಿಸುವ ಕೆಲಸ ಮಾಡಿದರೆ, ತುಳುವೇತರರಿಗೆ ತುಳು ಸಂಸ್ಕೃತಿಯ ಮಹತ್ತ್ವವನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ. ಮಾಹೆಯು ತುಳುವರು ಮತ್ತು ತುಳುವೇತರರ ನಡುವೆ ಒಂದು ರೀತಿಯ ಸಾಂಸ್ಕೃತಿಕ ರಾಯಭಾರಿತ್ವದ ಕೆಲಸ ಮಾಡುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಈ ಆಟಿದ ತುಳು ಪರ್ಬದಲ್ಲಿ ಎಲ್ಲರೂ ಕಲೆಯೋಣ, ಮನಸ್ಸು-ಮನಸ್ಸುಗಳ ನಡುವೆ ಇದು ಸೇತುವಾಗಲಿ’ ಎಂದು ಹೇಳಿದರು.
ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್, ಸಹಕುಲಪತಿ, ಆರೋಗ್ಯ ವಿಜ್ಞಾನ ವಿಭಾಗ, ಡಾ. ಕರುಣಾಕರ ಎ. ಕೋಟೆಗಾರ್, ಸಹಕುಲಪತಿ, ತಂತ್ರಜ್ಞಾನ ಹಾಗೂ ವಿಜ್ಞಾನ ವಿಭಾಗ, ಡಾ. ದಿಲೀಪ್ ಜಿ. ನಾಯಕ್, ಸಹಕುಲಪತಿ, ಮಂಗಳೂರು ಮಾಹೆ ಕ್ಯಾಂಪಸ್, ಕರ್ನಲ್ (ಡಾ.) ಸುಧೀಂದ್ರ, ಸಹಕುಲಪತಿ, ಮಾಹೆ-ದುಬೈಕ್ಯಾಂಪಸ್, ಡಾ. ಗಿರಿಧರ ಕಿಣಿ, ಕುಲಸಚಿವರು, ಡಾ. ಆನಂದ ವೇಣುಗೋಪಾಲ್, ಮಾಹೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಮಾಹೆಯ ಘಟಕ ಸಂಸ್ಥೆಗಳ ಮುಖ್ಯಸ್ಥರು, ಬೋಧಕ ವರ್ಗ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಸಾಂಸ್ಕೃತಿಕ ಸಂಯೋಜನಾ ಸಮಿತಿ, ಮಾಹೆ ಇದರ ಸಂಯೋಜಕರಾದ ಡಾ. ಶೋಭಾ ಕಾಮತ್ ಅವರು ಸ್ವಾಗತಿಸಿದರು, ಅಂತರ್ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದ [ಸಿಐಎಸ್ಡಿ] ಕೇಂದ್ರ ಸಂಯೋಜಕರಾದ ಪ್ರೊ. ಪ್ರವೀಣ್ ಶೆಟ್ಟಿ ಪ್ರಸ್ತಾವನಾ ಮಾತುಗಳನ್ನಾಡಿದರು. ಸತೀಶ್ ಪೈ, ನಿರ್ದೇಶಕರು, ಮಾನವಸಂಪನ್ಮೂಲ ವಿಭಾಗ, ಹಾಗೂ ಭರತ್ ಕುಮಾರ್ ಎಚ್, ನಿರ್ದೇಶಕರು, ಸಾರ್ವಜನಿಕ ಸಂಪರ್ಕ ವಿಭಾಗ ಇವರಿಗೆ ಡಾ. ಎಚ್. ಎಸ್. ಬಲ್ಲಾಳ್ ಅವರು ಸಾಂಪ್ರದಾಯಿಕ ಪದ್ಧತಿಯಲ್ಲಿ ‘ಆಟಿದ ಪರ್ಬ’ ದ ವೀಳ್ಯವನ್ನು ನೀಡುವ ಕಾರ್ಯಕ್ರಮ ಸರಣಿಯನ್ನು ಮುನ್ನಡೆಸುವ ಹೊಣೆವಹಿಸಿದರು. ನಿತೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
‘ಆಟಿದ ತುಳು ಪರ್ಬ’ವನ್ನು ಕಳೆದ ಕೆಲವು ವರ್ಷಗಳಿಂದ ಮಾಹೆಯಲ್ಲಿ ಆಚರಿಸುತ್ತ ಬರುತ್ತಿದ್ದು ಈ ಸಲ ಕೆಲವು ವಿಶೇಷ ಕಾರ್ಯಕ್ರಮಗಳನ್ನು ಜುಲೈ 16ರಿಂದ ಆಗಸ್ಟ್ 8, 2026ರವರೆಗೆ ಆಯೋಜಿಸಲಾಗಿದೆ. ಮಣಿಪಾಲ ಕ್ಯಾಂಪಸ್ ಮಾತ್ರವಲ್ಲದೆ, ಮಂಗಳೂರು ಮಾಹೆ ಕ್ಯಾಂಪಸ್ ಮತ್ತು ಕಟೀಲು ಸೇರಿದಂತೆ ವಿವಿಧ ಪಟ್ಟಣಗಳಲ್ಲಿರುವ ಮಾಹೆ ಘಟಕ ಸಂಸ್ಥೆಗಳಲ್ಲಿ ಈ ಉತ್ಸವವನ್ನು ನಡೆಸಲಾಗುತ್ತಿದೆ. ಪ್ರಧಾನವಾಗಿ ತುಳುನಾಡಿನ ಸಮೃದ್ಧ ಸಾಂಸ್ಕೃತಿಕ ಪರಂಪರೆ, ಸಂಪ್ರದಾಯ ಹಾಗೂ ಜೀವನಶೈಲಿಯನ್ನು ನೆನಪಿಸುವುದು ಈ ಕಾರ್ಯಕ್ರಮ ಸರಣಿಯ ಉದ್ದೇಶವಾಗಿದೆ. ಮಾಹೆಯ ಮಣಿಪಾಲ ಕ್ಯಾಪಸ್ಸಿನ ವಿವಿಧ ವಿಭಾಗಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಬೋಧಕರು, ಬೋಧಕೇತರ ಸಿಬಂದಿಗಳು, ದೇಶ-ವಿದೇಶದ ವಿದ್ಯಾರ್ಥಿಗಳು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳು, ಕಲಾಪ್ರದರ್ಶನಗಳು, ವಿಚಾರ ಸಂಕಿರಣಗಳು, ಆಚರಣೆಗಳ ಪರಿಚಯಾತ್ಮಕ ಗೋಷ್ಠಿಗಳು, ಸ್ಥಳೀಯ ಆಹಾರ ಪದ್ಧತಿಯ ಕುರಿತ ಕಲಾಪಗಳು, ತುಳು ಚಲನಚಿತ್ರ ಪ್ರದರ್ಶನ, ತುಳು ಯಕ್ಷಗಾನ ಪ್ರದರ್ಶನ, ತುಳು ನಾಟಕ ಪ್ರದರ್ಶನಗಳು ವಿವಿಧ ದಿನಗಳಲ್ಲಿ ವಿವಿಧ ಕಡೆಗಳಲ್ಲಿ ಆಯೋಜನೆಗೊಂಡಿವೆ.







