ಮಣಿಪಾಲ, ಜುಲೈ 17, 2026: ತಮ್ಮ ನಿವಾಸದಲ್ಲಿ ಹಠಾತ್ ಹೃದಯ ಸ್ತಂಭನಕ್ಕೆ ಒಳಗಾಗಿ ಕುಸಿದು ಬಿದ್ದಿದ್ದ ವ್ಯಕ್ತಿಯೊಬ್ಬರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಯಾವುದೇ ನರವೈಜ್ಞಾನಿಕ ಹಾನಿಯಿಲ್ಲದೆ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಆಸ್ಪತ್ರೆಯ ಹೊರಗೆ ಸಂಭವಿಸುವ ಹೃದಯ ಸ್ತಂಭನದ ಪ್ರಕರಣಗಳಲ್ಲಿ ಭಾರತದಲ್ಲಿ ಮರಣ ಪ್ರಮಾಣ ಶೇಕಡಾ 90ಕ್ಕೂ ಹೆಚ್ಚಿದೆ. ತಕ್ಷಣವೇ ಎದೆಗೆ ಒತ್ತಡ ನೀಡುವ ವಿಧಾನ (ಸಿ ಪಿ ಆರ್) ತಿಳಿದಿರುವವರು ಜನಸಂಖ್ಯೆಯಲ್ಲಿ ಕೇವಲ ಶೇಕಡಾ ಐದರಷ್ಟು ಮಾತ್ರ ಎಂಬುದೇ ಇದಕ್ಕೆ ಪ್ರಮುಖ ಕಾರಣ.
ಅವರು ಕುಸಿದು ಬಿದ್ದ ಸಂದರ್ಭದಲ್ಲಿ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ವೈದ್ಯರು ಆಕಸ್ಮಿಕವಾಗಿ ಅದೇ ಪರಿಸರದಲ್ಲಿದ್ದರು. ಅವರು ಕ್ಷಣಾರ್ಧದಲ್ಲಿ ಸಿಪಿಆರ್ ಆರಂಭಿಸಿ, ನಿವಾಸದಲ್ಲಿಯೇ ಇಂಟ್ಯುಬೇಷನ್ ಮಾಡಿದರು. ಅವರನ್ನು ತುರ್ತು ವಿಭಾಗಕ್ಕೆ ಸ್ಥಳಾಂತರಿಸಲಾಯಿತು, ಜೊತೆಗೆ ಆಸ್ಪತ್ರೆಗೆ ಸಾಗಿಸುವ ವೇಳೆಯೂ ಎದೆಯ ಒತ್ತಡವನ್ನು (ಸಿ ಪಿ ಆರ್) ಮುಂದುವರಿಸಿದರು. ಹಲವು ಬಾರಿ ಡಿಫಿಬ್ರಿಲೇಟರ್ ಶಾಕ್ ನೀಡಿದ ಬಳಿಕ, ಸುಮಾರು ಒಂದು ಗಂಟೆಯ ಕೊನೆಗೆ ರಕ್ತ ಪರಿಚಲನೆ ಮರಳಿತು.
ಎರಡೂ ಶ್ವಾಸಕೋಶಗಳು ಪಲ್ಮನರಿ ಎಡಿಮಾದಿಂದ ತುಂಬಿಕೊಂಡಿತ್ತು ಮತ್ತು ಹೃದಯವು ರಕ್ತ ಪರಿಚಲನೆಯನ್ನು ಸ್ವತಃ ನಿಭಾಯಿಸುವ ಸ್ಥಿತಿಯಲ್ಲಿರಲಿಲ್ಲ. ಹೃದಯ ಮತ್ತು ಶ್ವಾಸಕೋಶಗಳ ಕೆಲಸವನ್ನು ತಾನೇ ನಿರ್ವಹಿಸುವ ವೀನೋ ಆರ್ಟೀರಿಯಲ್ ಎಕ್ಮೋ ವ್ಯವಸ್ಥೆಯನ್ನು 30 ನಿಮಿಷಗಳ ಒಳಗಾಗಿ ಹೃದಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಹೃದಯ ಮತ್ತು ಎದೆಗೂಡು ಶಸ್ತ್ರಚಿಕಿತ್ಸಾ ವಿಭಾಗವು ಅಳವಡಿಸಿತು. 36 ಗಂಟೆಗಳ ಬಳಿಕ ಅವರನ್ನು ಎಕ್ಮೋದಿಂದ ಹೊರತರಲಾಯಿತು, ಎಕ್ಸ್ಟ್ಯುಬೇಷನ್ ಮಾಡಲಾಯಿತು ಮತ್ತು ಯಾವುದೇ ನರವೈಜ್ಞಾನಿಕ ಹಾನಿ ಆಗದಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತು. ಇಂಪ್ಲಾಂಟಬಲ್ ಕಾರ್ಡಿಯೋವರ್ಟರ್ ಡಿಫಿಬ್ರಿಲೇಟರ್ ಅಳವಡಿಕೆಗಾಗಿ ಅವರನ್ನು ಹೃದ್ರೋಗ ವಿಭಾಗಕ್ಕೆ ವರ್ಗಾಯಿಸಲಾಯಿತು .
ಹೃದಯ ಮತ್ತು ಎದೆಗೂಡು ಶಸ್ತ್ರಚಿಕಿತ್ಸಾ ವಿಭಾಗದ ಕನ್ಸಲ್ಟೆಂಟ್ ಡಾ. ಶ್ಯಾಮ್ ಕೆ ಅಶೋಕ್ ಅವರು , “ಇಲ್ಲಿ ಎಲ್ಲವೂ ಸಮಯದ ಮೇಲೆ ನಿಂತಿತ್ತು. ಕುಸಿದ ಕ್ಷಣಾರ್ಧದಲ್ಲಿ ಪ್ರಾರಂಭವಾದ ಎದೆಯ ಸಂಕೋಚನಗಳೇ ಈ ವ್ಯಕ್ತಿ ಇಂದು ಯಾವುದೇ ಮಿದುಳಿನ ಹಾನಿಯಿಲ್ಲದೆ ತಮ್ಮ ಕುಟುಂಬದೊಂದಿಗೆ ಇರಲು ಕಾರಣ. ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿ, ಎಕ್ಮೋ ಸರ್ಕ್ಯೂಟ್ ಮತ್ತು ತಜ್ಞ ತಂಡಗಳು ದಿನದ 24 ಗಂಟೆಯೂ ಸನ್ನದ್ಧ ಸ್ಥಿತಿಯಲ್ಲಿ ಇರುವುದರಿಂದಲೇ ನಾವು 30 ನಿಮಿಷಗಳ ಒಳಗೆ ಅವರನ್ನು ಎಕ್ಮೋಗೆ ಸೇರಿಸಲು ಸಾಧ್ಯವಾಯಿತು.” ಎಂದರು.
ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಅವರು , “ಜೀವ ಉಳಿಸುವ ಪ್ರಶ್ನೆ ಬಂದಾಗ ಇಡೀ ವ್ಯವಸ್ಥೆ ಒಂದೇ ಘಟಕವಾಗಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಸಾರ್ವಜನಿಕರು ಕನಿಷ್ಠ (ಬೇಸಿಕ್) ಸಿಪಿಆರ್ ಮಾಡುವುದನ್ನು ಕಲಿಯಬೇಕೆಂದು ನಾನು ಈ ಮೂಲಕ ಒತ್ತಾಯಿಸುತ್ತೇನೆ. ಇಲ್ಲಿ ಪಕ್ಕದಲ್ಲಿಯೇ ಇದ್ದವರು ವೈದ್ಯರಾಗಿದ್ದರು, ಆದರೆ ಮುಂದಿನ ಜೀವವನ್ನು ಉಳಿಸುವವರು ಯಾರು ಬೇಕಾದರೂ ಆಗಿರಬಹುದು ಎಂಬುದನ್ನು ಮರೆಯಬಾರದು” ಎಂದರು.
ಈ ಪ್ರಕರಣವನ್ನು ಸಿಟಿವಿಎಸ್ ವಿಭಾಗದ ಡಾ. ಶ್ಯಾಮ್ ಕೆ. ಅಶೋಕ್, ಡಾ. ವಿಜಯ್ ಕುಮಾರ್, ಡಾ. ಸಾಯಿ, ಡಾ. ಗಣೇಶ್ ಕಾಮತ್ ಮತ್ತು ಡಾ. ಶುಭಂ ಅವರು ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ನ ಪರ್ಫ್ಯೂಷನಿಸ್ಟ್ ಶ್ರೀ ಹಲೀಶ್ ಜೊತೆಗೆ ನಿರ್ವಹಿಸಿದರು.






