ಉಡುಪಿ, ಜುಲೈ 10: ಅಕ್ಷರ ದಾಸೋಹ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸ್ಕೀಂ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಜುಲೈ 13ರಂದು ಬಿಸಿಯೂಟ ಬಂದ್ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲು ನಿರ್ಧರಿಸಿದೆ.
ಜುಲೈ 10ನ್ನು ದೇಶಾದ್ಯಂತ “ಸ್ಕೀಂ ನೌಕರರ ಕರಾಳ ದಿನ” ವಾಗಿ ಆಚರಿಸಲಾಗುತ್ತಿದ್ದು, ರಾಜ್ಯವ್ಯಾಪಿ ಹೋರಾಟದ ಭಾಗವಾಗಿ ಉಡುಪಿಯಲ್ಲೂ ಪ್ರತಿಭಟನೆ ನಡೆಯಲಿದೆ. ಹೋರಾಟದಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಅಕ್ಷರ ದಾಸೋಹ ನೌಕರರ ಸಂಘದ ಗೌರವಾಧ್ಯಕ್ಷೆ ಎಸ್. ವರಲಕ್ಷ್ಮಿ ಭಾಗವಹಿಸಲಿದ್ದಾರೆ.
ಸಂಘದ ಪ್ರಕಾರ, ಅಕ್ಷರ ದಾಸೋಹ ಯೋಜನೆ ಆರಂಭವಾಗಿ 25 ವರ್ಷಗಳು ಕಳೆದರೂ, ಬೆಲೆ ಏರಿಕೆಗೆ ಅನುಗುಣವಾಗಿ ಅನುದಾನ ಹೆಚ್ಚಳವಾಗಿಲ್ಲ. 2008ರಿಂದ ಕೇಂದ್ರ ಸರ್ಕಾರ ಅಡುಗೆ ಸಿಬ್ಬಂದಿಯ ಗೌರವಧನವನ್ನು ಹೆಚ್ಚಿಸಿಲ್ಲ. ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆಯಂತೆ ಅಡುಗೆ ಸಿಬ್ಬಂದಿಯ ವೇತನವನ್ನು ₹7,000 ಹೆಚ್ಚಿಸಬೇಕು ಎಂದು ಸಂಘ ಒತ್ತಾಯಿಸಿದೆ.
ಸಂಘವು ವೇತನ ಹೆಚ್ಚಳ, ಆರು ಗಂಟೆಗಳ ಕೆಲಸಕ್ಕೆ ಸುತ್ತೋಲೆ, ಆರೋಗ್ಯ ವಿಮೆ, ನಿವೃತ್ತರಿಗೆ ₹10,000 ಪಿಂಚಣಿ, ವರ್ಷಪೂರ್ತಿ 12 ತಿಂಗಳ ಕೆಲಸ ಮತ್ತು ಕನಿಷ್ಠ ಕೂಲಿ ಜಾರಿ, ಅಕ್ಷರ ದಾಸೋಹ ಯೋಜನೆಯ ಖಾಸಗೀಕರಣ ಕೈಬಿಡುವುದು, ಬೇಸಿಗೆ ಹಾಗೂ ಇತರ ರಜೆ ಅವಧಿಯಲ್ಲೂ ವೇತನ ಪಾವತಿ, ಅಡುಗೆ ಸಿಬ್ಬಂದಿಯನ್ನು ಖಾಯಂ ಸಿಬ್ಬಂದಿಯಾಗಿ ನೇಮಕ ಸೇರಿದಂತೆ 13 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ.
ಈ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ ಶುಕ್ರವಾರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಂದ, ಜಿಲ್ಲಾ ಕಾರ್ಯದರ್ಶಿಗಳಾದ ರತ್ನ ಮತ್ತು ಮಂಜುಳ ಹಾಗೂ ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಕವಿರಾಜ್ ಎಸ್. ಕಾಂಚನ್ ಉಪಸ್ಥಿತರಿದ್ದರು.







