ಕುಂದಾಪುರ : ಜೂನ್ 18:ಶಂಕರನಾರಾಯಣದಲ್ಲಿ ಬ್ಯಾಂಕ್ ಸಾಲದ ಒತ್ತಡದಿಂದ ಮನನೊಂದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.
ಮೃತರನ್ನು ಭಾಸ್ಕರ್ ಶೆಟ್ಟಿ (48) ಎಂದು ಗುರುತಿಸಲಾಗಿದೆ. ಜೂನ್ 17ರಂದು ಬೆಳಿಗ್ಗೆ ಮನೆ ಬಿಟ್ಟು ಹಳೆಯ ಮನೆಗೆ ಹೋಗುವುದಾಗಿ ಪತ್ನಿ ಆಶಾ ಅವರಿಗೆ ತಿಳಿಸಿ ತೆರಳಿದ್ದ ಭಾಸ್ಕರ್ ಶೆಟ್ಟಿ, ಬಳಿಕ ಮನೆಗೆ ಮರಳಿರಲಿಲ್ಲ. ಅನುಮಾನಗೊಂಡ ಪತ್ನಿ ಹಳೆಯ ಮನೆಗೆ ತೆರಳಿ ಹುಡುಕಾಟ ನಡೆಸಿದ ವೇಳೆ ಮನೆಯ ಹಿಂಬದಿ ಕಿಟಕಿಯಿಂದ ನೋಡಿದಾಗ ಭಾಸ್ಕರ್ ಶೆಟ್ಟಿ ಅವರು ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಬ್ಯಾಂಕ್ನಲ್ಲಿ ಪಡೆದಿದ್ದ ಸಾಲವನ್ನು ತೀರಿಸಲು ಸಾಧ್ಯವಾಗದೇ ಮಾನಸಿಕವಾಗಿ ನೊಂದಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.







