ಉಡುಪಿ : ಜೂನ್ 11: ಬ್ರಹ್ಮಾವರ ಸಮೀಪದ ಹೆರಂಜೆಯಲ್ಲಿ ತೆಂಗಿನ ಮರದಿಂದ ಬಿದ್ದ ತೆಂಗಿನಕಾಯಿ ತಲೆಗೆ ಬಡಿದ ಪರಿಣಾಮ ಒಂದೂವರೆ ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ಮೃತ ಬಾಲಕನನ್ನು ದಕ್ಷ್ ಪೂಜಾರಿ (1.5) ಎಂದು ಗುರುತಿಸಲಾಗಿದೆ. ಈತ ಹೆರಂಜೆಯ ಪ್ರಶಾಂತ್ ಪೂಜಾರಿ ಹಾಗೂ ಸುಚಿತ್ರ ಪೂಜಾರಿ ದಂಪತಿಯ ಪುತ್ರನಾಗಿದ್ದಾನೆ. ದಕ್ಷ್ಗೆ ದಿಯಾ (6) ಎಂಬ ಅಕ್ಕ ಇದ್ದು, ಆಕೆ ಬ್ರಹ್ಮಾವರದ ಆಂಗ್ಲ ಮಾಧ್ಯಮ ಶಾಲೆಯ ಪ್ರಥಮ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಪ್ರಶಾಂತ್ ಪೂಜಾರಿ ಅವರು ಕಳೆದ ಸುಮಾರು 13 ವರ್ಷಗಳಿಂದ ಬ್ರಹ್ಮಾವರ ಗಾಂಧಿ ಮೈದಾನದ ಸಮೀಪ ಸಣ್ಣ ಗಾಡಿಯಲ್ಲಿ ಫಾಸ್ಟ್ ಫುಡ್ ವ್ಯಾಪಾರ ನಡೆಸುತ್ತಿದ್ದು, ಅದರಿಂದಲೇ ಕುಟುಂಬದ ಜೀವನ ನಿರ್ವಹಿಸುತ್ತಿದ್ದರು.
ಮಾಹಿತಿಗಳ ಪ್ರಕಾರ, ಮಂಗಳವಾರ ಬೆಳಿಗ್ಗೆ ಸುಮಾರು 8.15 ಗಂಟೆ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಮಗಳು ದಿಯಾಳನ್ನು ಶಾಲಾ ಬಸ್ಸಿಗೆ ಕಳುಹಿಸಲು ತಾಯಿ ಸುಚಿತ್ರ ಪೂಜಾರಿ ಅವರು ಮಗ ದಕ್ಷ್ನನ್ನು ಕಂಕುಳಲ್ಲಿ ಎತ್ತಿಕೊಂಡು ಮನೆಯಿಂದ ಹೊರಟಿದ್ದರು. ಈ ವೇಳೆ ರಸ್ತೆ ಬದಿಯಲ್ಲಿದ್ದ ಸುಮಾರು 40 ಅಡಿ ಎತ್ತರದ ತೆಂಗಿನ ಮರದಿಂದ ತೆಂಗಿನಕಾಯಿ ಕೆಳಗೆ ಬಿದ್ದು ದಕ್ಷ್ನ ತಲೆಗೆ ಬಡಿದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ತಕ್ಷಣ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ವೈದ್ಯರು ಶಸ್ತ್ರಚಿಕಿತ್ಸೆಯನ್ನೂ ನಡೆಸಿದ್ದರು. ಆದರೆ ತಲೆಯ ಮೆದುಳಿಗೆ ತೀವ್ರ ಪೆಟ್ಟಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ದಕ್ಷ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಈ ದಾರುಣ ಘಟನೆ ಹೆರಂಜೆ ಹಾಗೂ ಬ್ರಹ್ಮಾವರ ಭಾಗದ ಜನರಲ್ಲಿ ತೀವ್ರ ದುಃಖವನ್ನುಂಟು ಮಾಡಿದ್ದು, ಬಾಲಕನ ಅಕಾಲಿಕ ನಿಧನಕ್ಕೆ ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ.






