ಕುಂದಾಪುರ: ಜೂನ್ 04: ಆನ್ಲೈನ್ ಲೋನ್ ಹೆಸರಿನಲ್ಲಿ ಭಾರೀ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. 40 ಲಕ್ಷ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಸುಮಾರು 5.69 ಲಕ್ಷ ರೂಪಾಯಿ ಪಡೆದು ಮೋಸ ಮಾಡಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ ತಾಲೂಕಿನ ಕಸಬ ಗ್ರಾಮದ ಕೆಳ ಖಾರ್ವಿಕೇರಿ ನಿವಾಸಿ ಪ್ರಣೀತ್ (38) ಎಂಬವರು ಫೇಸ್ಬುಕ್ನಲ್ಲಿ PMGDY ಯೋಜನೆಯಡಿ ಸಾಲ ನೀಡುವ ಕುರಿತು ಜಾಹೀರಾತು ಕಂಡಿದ್ದರು. ಜಾಹೀರಾತಿನಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ, ತನ್ನನ್ನು ಶ್ರೀನಿವಾಸ್ ರಾವ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ 40 ಲಕ್ಷ ರೂಪಾಯಿ ಸಾಲ ಮಂಜೂರು ಮಾಡಿಕೊಡುವುದಾಗಿ ಭರವಸೆ ನೀಡಿದ್ದಾನೆ.
ಸಾಲ ಪಡೆಯಲು ಮೊದಲು ವಿವಿಧ ಶುಲ್ಕ ಮತ್ತು ಪ್ರಕ್ರಿಯೆಗಳ ಹೆಸರಿನಲ್ಲಿ ಹಣ ಪಾವತಿಸಬೇಕೆಂದು ಹೇಳಿದ್ದು, ಅದರಂತೆ ಪ್ರಣೀತ್ ಅವರು ಮಾರ್ಚ್ 11ರಿಂದ ಏಪ್ರಿಲ್ 13ರವರೆಗೆ ಒಟ್ಟು 5 ಲಕ್ಷ 69 ಸಾವಿರ 69 ರೂಪಾಯಿಯನ್ನು ಫೋನ್ಪೇ ಮೂಲಕ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ.
ಆದರೆ ನಂತರ ಯಾವುದೇ ಸಾಲ ಮಂಜೂರಾಗದೇ, ಹಣ ವಾಪಸ್ ಕೇಳಿದಾಗ ಮತ್ತಷ್ಟು ಹಣ ಪಾವತಿಸುವಂತೆ ಆರೋಪಿತ ಸೂಚಿಸಿದ್ದಾನೆ ಎನ್ನಲಾಗಿದೆ. ಇದರಿಂದ ತಾನು ಮೋಸ ಹೋಗಿರುವುದಾಗಿ ಅರಿತ ಪ್ರಣೀತ್ ಅವರು ಸಂಬಂಧಿಕರೊಂದಿಗೆ ಚರ್ಚಿಸಿ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
“ಆನ್ಲೈನ್ನಲ್ಲಿ ಲೋನ್ ನೀಡುವ ಆಮಿಷಗಳಿಗೆ ಬಲಿಯಾಗದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.”







