ಬ್ರಹ್ಮಾವರ: ಜೂನ್ 03: ಉಪ್ಪೂರು ಗ್ರಾಮದ ಸ್ನೇಹಾಲಯ ವೃದ್ಧಾಶ್ರಮದಲ್ಲಿ ವಾಸ್ತವ್ಯ ಹೂಡಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಶ್ಚಿಮ ಬಂಗಾಳ ಮೂಲದ ಹಾಗೂ ಸ್ನೇಹಾಲಯ ವೃದ್ಧಾಶ್ರಮದ ಸಿಬ್ಬಂದಿಯಾಗಿರುವ ಬೈಬೆಕ್ ಯೆಲ್ಲೋ (27) ಅವರು ನೀಡಿದ ದೂರಿನ ಪ್ರಕಾರ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ದೇವರಹಳ್ಳಿ ನಿವಾಸಿ ಶ್ರೀನಿವಾಸ್ (43) ಅವರು ಪತ್ನಿ ಚಂದ್ರಮ್ಮ ಅವರೊಂದಿಗೆ ಮೇ 27ರಂದು ಆಶ್ರಮಕ್ಕೆ ದಾಖಲಾಗಿದ್ದರು.
ಶ್ರೀನಿವಾಸ್ ಅವರು ಈ ಹಿಂದೆ ಮಾನಸಿಕ ಅಸ್ವಸ್ಥತೆಗೆ ಶಿವಮೊಗ್ಗದ ಮಾನಸ ಆಸ್ಪತ್ರೆ ಹಾಗೂ ನಿರ್ಮಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು, ಧೂಮಪಾನ ಮತ್ತು ಮದ್ಯಪಾನದ ಅಭ್ಯಾಸ ಹೊಂದಿದ್ದರು ಎಂದು ತಿಳಿದುಬಂದಿದೆ.
ಮೇ 28ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಸಿಬ್ಬಂದಿ ಅವರ ಯೋಗಕ್ಷೇಮ ವಿಚಾರಿಸಲು ಕೊಠಡಿಗೆ ತೆರಳಿದಾಗ ಅವರು ಅಲ್ಲಿರಲಿಲ್ಲ. ಬಳಿಕ ಆಶ್ರಮದ ಸುತ್ತಮುತ್ತ ಹಾಗೂ ಪರಿಚಿತ ಸ್ಥಳಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಪತ್ನಿಯನ್ನು ಸಂಪರ್ಕಿಸಿದಾಗ ಅವರು ಮನೆಗೂ ಅಥವಾ ಸಂಬಂಧಿಕರ ಮನೆಗೂ ಬಂದಿಲ್ಲ ಎಂದು ತಿಳಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈವರೆಗೆ ಶ್ರೀನಿವಾಸ್ ಅವರು ಮನೆಗೆ, ಸಂಬಂಧಿಕರ ಮನೆಗೆ ಅಥವಾ ಆಶ್ರಮಕ್ಕೆ ಮರಳದ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಗಂಡಸು ಕಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







