ಬ್ರಹ್ಮಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿಸಿ ಟ್ರಸ್ಟ್ (ರಿ) ಬ್ರಹ್ಮಾವರ ತಾಲೂಕು ಇದರ ವತಿಯಿಂದ ಶೌರ್ಯ ವಿಪತ್ತು ತಂಡದ ಕೋರ್ ಕಮಿಟಿ ಸಭೆಯು ಯೋಜನಾ ಕಚೇರಿಯಲ್ಲಿ ಶುಕ್ರವಾರ ಜರುಗಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಳೆಗಾಲ ಆರಂಭದಲ್ಲಿ ಶೌರ್ಯ ತಂಡದ ಸದಸ್ಯರು ಸದಾ ಎಚ್ಚರವಾಗಿರಬೇಕು. ಅನಿರೀಕ್ಷಿತವಾದ ವಿಪತ್ತು ಹಾನಿಗಳಿಗೆ ಗಳಿಗೆ ತಕ್ಷಣ ಸ್ಪಂದನೆ ನೀಡಬೇಕು. ರಾಜ್ಯದ 91 ತಾಲೂಕುಗಳಲ್ಲಿ 10,400 ಶೌರ್ಯ ಸ್ವಯಂಸೇವಕರು ಸೇವೆ ಸಲ್ಲಿಸಿ ವಿಪತ್ತು ಸೇವೆಗಳ ಜೊತೆಗೆ ಮೂರು ತಿಂಗಳಿಗೊಮ್ಮೆ ಸಾಮಾಜಿಕ ಸೇವೆ, ತಿಂಗಳಿಗೊಮ್ಮೆ ಘಟಕದ ಸಭೆ, ತಾಲೂಕಿಗೆ ಒಂದು ಶೌರ್ಯ ವನ ರಚನೆ ಮಾಡಿ ಪರಿಸರದೊಂದಿಗೆಮಾನವರ ಜೀವನ ನಡೆಸಬೇಕು ಎಂದರು.
ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ಉತ್ತಮ ಸೇವೆ ಸಲ್ಲಿಸುತ್ತಿರುವ ಶೌರ್ಯ ಘಟಕದ ಸದಸ್ಯರನ್ನು ಅಭಿನಂದಿಸಿದರು.ಜನಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಶೌರ್ಯ ಘಟಕಗಳ ನಿರ್ವಹಣೆಯ ಮಾಹಿತಿ ನೀಡಿದರು.
ಯೋಜನಾಧಿಕಾರಿ ರಮೇಶ್ ಪಿಕೆ ಸ್ವಾಗತಿಸಿ ವಂದಿಸಿದರು. ಶೌರ್ಯ ಮಾಸ್ಟರ್ ಮಂಜುನಾಥ್, ಕ್ಯಾಪ್ಟನ್ ಪುರುಷೋತ್ತಮ್, ಎಲ್ಲಾ ವಲಯಗಳ ಮೇಲ್ವಿಚಾರಕರು, ಘಟಕ ಸಂಯೋಜಕರು, ಘಟಕ ಪ್ರತಿನಿಧಿಗಳು ಉಪಸ್ಥಿತರಿದ್ದರು.






