ಬೈಂದೂರು: ಮೇ 29: ಹಳೆಯ ಕ್ರಿಕೆಟ್ ಆಟದ ಮನಸ್ತಾಪ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮನೆಗೆ ನುಗ್ಗಿ ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಿದ ಆರೋಪದಡಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಳಿಹೊಳೆ ಗ್ರಾಮದ ಶಿವರಾಜ್ ಶೆಟ್ಟಿ ಅವರು ನೀಡಿದ ದೂರಿನ ಪ್ರಕಾರ, ಒಂದು ವರ್ಷದ ಹಿಂದೆ ಕ್ರಿಕೆಟ್ ಆಟದ ವಿಚಾರದಲ್ಲಿ ಪ್ರತಾಪ್ ಶೆಟ್ಟಿ ಎಂಬಾತನೊಂದಿಗೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಬಳಿಕ ಇಬ್ಬರ ಮಧ್ಯೆ ವೈಮನಸ್ಸು ಮುಂದುವರಿದಿದ್ದು, ಆರೋಪಿ ಪದೇ ಪದೇ ಬೆದರಿಕೆ ಹಾಕುತ್ತಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೈಷಮ್ಯದ ಹಿನ್ನೆಲೆ ಮೇ 27ರ ರಾತ್ರಿ ಸುಮಾರು 11 ಗಂಟೆ 15 ನಿಮಿಷಕ್ಕೆ ಪ್ರತಾಪ್ ಶೆಟ್ಟಿ ತನ್ನ ಸಹಚರರಾದ ರಾಜು, ವಿಷ್ನೇಶ್ ಗಾಣಿಗ, ಪ್ರಸಾದ್ ಆಚಾರಿ ಹಾಗೂ ಇತರರನ್ನು ಕರೆದುಕೊಂಡು ಕಾರು ಮತ್ತು ಬೈಕ್ನಲ್ಲಿ ಶಿವರಾಜ್ ಶೆಟ್ಟಿ ಅವರ ಮನೆಗೆ ಬಂದಿದ್ದಾನೆ ಎನ್ನಲಾಗಿದೆ.
ಮನೆಯ ಕಂಪೌಂಡ್ಗೆ ಅತಿಕ್ರಮ ಪ್ರವೇಶ ಮಾಡಿ, ಕೈಯಲ್ಲಿ ಕಬ್ಬಿಣದ ರಾಡ್ ಹಾಗೂ ಇತರ ಆಯುಧಗಳನ್ನು ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







