ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ 33ನೇ ಘಟಿಕೋತ್ಸವವು ಮಂಗಳೂರಿನಲ್ಲಿ ಶುಕ್ರವಾರ ಮೇ 15ರಂದು ಯಶಸ್ವಿಯಾಗಿ ಜರುಗಿತು. ಹೊಸ ಆಲೋಚನೆಗಳಿಗೆ ಬೆಂಬಲಿಸುವ, ಜವಾಬ್ದಾರಿಯುತ ವೃತ್ತಿಪರರನ್ನು ಸಜ್ಜುಗೊಳಿಸುವ ಮಾಹೆಯ ಬದ್ಧತೆಯನ್ನು ಎತ್ತಿ ಹಿಡಿಯಿತು.
ಮಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಡಾ. ಟಿ.ಎಂ.ಎ. ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಘಟಿಕೋತ್ಸವ ಸಮಾರಂಭವು ನಡೆಯಿತು. ಮಾಹೆಯ ಸಹ ಕುಲಾಧಿಪತಿ ಡಾ. ಹೆಚ್. ಎಸ್. ಬಲ್ಲಾಳ್ ಅವರು ಪದವಿ ಪ್ರದಾನ ಮಾಡಿದರು. ವಿದ್ಯಾರ್ಥಿಗಳು, ಅವರ ಕುಟುಂಬದವರು ಮತ್ತು ಅಧ್ಯಾಪಕರ ಹೆಮ್ಮೆಯ ಕ್ಷಣಗಳಿಗೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.
ಈ ವರ್ಷ ಪದವಿ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಕಾರ್ಯಕ್ರಮಗಳಲ್ಲಿ ಒಟ್ಟು 1,258 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಇವರಲ್ಲಿ 576 ವಿದ್ಯಾರ್ಥಿಗಳು ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡಿದ ಮಣಿಪಾಲದ ಎಂ.ಸಿ.ಒ.ಡಿ.ಎಸ್. ವಿದ್ಯಾರ್ಥಿ ನವಲ್ಪ್ರೀತ್ ಸಿಂಗ್ ಭಮ್ರಾ, ಮಂಗಳೂರಿನ ಎಂ.ಸಿ.ಒ.ಡಿ.ಎಸ್. ವಿದ್ಯಾರ್ಥಿನಿ ಅದೀಬಾ ಅಲಿ ಮತ್ತು ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (2021-22ರ ಎಂಬಿಬಿಎಸ್ ಬ್ಯಾಚ್) ವಿದ್ಯಾರ್ಥಿನಿ ಚೈತ್ರಾ ಶೆಣೈ ಅವರಿಗೆ ಪ್ರತಿಷ್ಠಿತ ‘ಡಾ. ಟಿ.ಎಂ.ಎ. ಪೈ ಚಿನ್ನದ ಪದಕ’ ನೀಡಿ ಗೌರವಿಸಲಾಯಿತು.

ಘಟಿಕೋತ್ಸವ ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಯಾದ ಟಾಟಾ ಮೆಮೋರಿಯಲ್ ಸೆಂಟರ್ ನಿರ್ದೇಶಕ ಪ್ರೊ. ಸುದೀಪ್ ಗುಪ್ತಾ ಅವರು, ‘ಭಾರತವು ವಿಕಸಿತ ಭಾರತದತ್ತ ವೇಗವಾಗಿ ಮುನ್ನಡೆಯುತ್ತಿದೆ. ಸ್ವಾತಂತ್ರ್ಯದ ನಂತರ ದೇಶದಲ್ಲಿ ಸರಾಸರಿ ಜೀವಿತಾವಧಿ ದುಪ್ಪಟ್ಟಾಗಿದ್ದು, ಪ್ರಸ್ತುತ 72 ವರ್ಷಗಳಿಗೆ ತಲುಪಿದೆ. 2047ರ ವೇಳೆಗೆ ಭಾರತದ ಜಿಡಿಪಿ ಮತ್ತು ತಲಾ ಆದಾಯ ನಾಲ್ಕು ಪಟ್ಟು ಹೆಚ್ಚಾಗಲಿದೆʼ ಎಂದು ಆಶಯ ವ್ಯಕ್ತಪಡಿದರು.
ʼಮಾಹೆ ಮತ್ತು ಟಾಟಾ ಸ್ಮಾರಕ ಕೇಂದ್ರದಂತಹ ಸಂಸ್ಥೆಗಳು ಈಗ ಕೈಗೊಳ್ಳುವ ಕೆಲಸಗಳು, ಭಾರತವು 2050ರಲ್ಲಿ ಎಲ್ಲಿಗೆ ತಲುಪಲಿದೆ ಎಂಬುದನ್ನು ನಿರ್ಧರಿಸುತ್ತವೆ. ಕೇವಲ ಸಾಂಪ್ರದಾಯಿಕ ಸಂಪತ್ತಾಗಿರುವ ಚಿನ್ನದ ಮೇಲಲ್ಲದೆ ಕ್ವಾಂಟಮ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ ಹಾಗೂ ನಾವೀನ್ಯಯುತ ಆರೋಗ್ಯ ಕ್ಷೇತ್ರದ ಜ್ಞಾನದ ಆಧಾರದ ಮೇಲೆ ಹೊಸ ರಾಷ್ಟ್ರೀಯ ಸಂಪತ್ತನ್ನು ರೂಪಿಸಬೇಕಿದೆ. ಕೇವಲ ಕಾಲ್ಪನಿಕ ವಿವರಣೆಗಳನ್ನು ನೀಡುವ ಎಐ ಆಲ್ಗಾರಿದಮ್ ಗಳಿಗಿಂತ ಭಿನ್ನವಾಗಿ, ರೋಗಿಗಳ ಭಯ ಮತ್ತು ಭರವಸೆಗಳನ್ನು ಅರ್ಥಮಾಡಿಕೊಳ್ಳುವ ಮಾನವೀಯ ಅನುಕಂಪದಲ್ಲೇ ನಿಮ್ಮ ನಿಜವಾದ ಶಕ್ತಿ ಅಡಗಿದೆʼ ಎಂದು ಪದವಿಧರರಿಗೆ ನೆನಪಿಸಿದರು.

ಗೌರವ ಅತಿಥಿಯಾದ ನಿಟ್ಟೆ ಎಜುಕೇಷನ್ ಟ್ರಸ್ಟ್ ಸಹ ಕುಲಾಧಿಪತಿ ಡಾ.ಎಂ ಶಾಂತಾರಾಮ್ ಶೆಟ್ಟಿ ಅವರು, “ನೀವು ಇಲ್ಲಿಯವರೆಗೆ ಬರೆದ ಯಶಸ್ಸಿನ ಕಥೆಯೇ ಇನ್ಮುಂದೆ ನಿಮಗೆ ದಾರಿದೀಪ. ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ ಮಾಹೆಯ ಶ್ರೀಮಂತ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಿ. ವರ್ಷದಿಂದ ವರ್ಷಕ್ಕೆ ಇಂತಹ ಶ್ರೀಮಂತ ಪ್ರತಿಭೆಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡುತ್ತಿರುವ ಮಾಹೆ ಸಂಸ್ಥೆಯ ಶ್ರಮ ಶ್ಲಾಘನೀಯ. ಇದರಿಂದ ವೈಯಕ್ತಿಕವಾಗಿ ಮಾತ್ರವಲ್ಲದೆ, ಇಡೀ ಸಮಾಜಕ್ಕೆ ಅತ್ಯಾಧುನಿಕ ಜ್ಞಾನದ ಪ್ರಯೋಜನ ಸಿಗಲಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು, “ಶೈಕ್ಷಣಿಕ ಶಿಸ್ತು, ಅತ್ಯುತ್ತಮ ಸಂಶೋಧನೆ ಹಾಗೂ ನಾವೀನ್ಯತೆಯ ಬಲದೊಂದಿಗೆ ಮಾಹೆ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಇಂದಿನ ವೃತ್ತಿಪರ ಜಗತ್ತಿನ ಸವಾಲುಗಳನ್ನು ಎದುರಿಸಿ, ಭವಿಷ್ಯದ ನಾಯಕರಾಗಿ ಹೊರಹೊಮ್ಮಲು ಅಗತ್ಯವಿರುವ ಜ್ಞಾನ ಮತ್ತು ಕೌಶಲಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ” ಎಂದು ಹೇಳಿದರು.
ʼಸುಸ್ಥಿರತೆಗೆ ಮಾಹೆ ಮೊದಲ ಆದ್ಯತೆ ನೀಡಿದೆ. ಇದಕ್ಕೆ ಪೂರಕವಾಗಿ ನವೀಕರಿಸಬಹುದಾದ ಇಂಧನ ಬಳಕೆಗೆ ಒತ್ತು ನೀಡಲಾಗಿದೆ. ನಿರಂತರ ಬಾಹ್ಯ ಧನಸಹಾಯ ಮತ್ತು ಗುಣಮಟ್ಟದ ಸಂಶೋಧನೆಗಳ ನೆರವಿನೊಂದಿಗೆ ಮಾಹೆಯು ತನ್ನ ಸಂಶೋಧನೆ ಮತ್ತು ನಾವೀನ್ಯತಾ ವ್ಯವಸ್ಥೆಯನ್ನು ನಿರಂತರವಾಗಿ ವೃದ್ಧಿಸುತ್ತಿದೆ. ವಿಶೇಷವಾಗಿ ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯಂತಹ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನಗಳತ್ತ ಗಮನ ಹರಿಸಲಾಗಿದ್ದು, ಸಮಾಜದ ಅಗತ್ಯತೆಗಳಿಗೆ ಕೊಡುಗೆ ನೀಡಲು ಮಾಹೆ ನಿರಂತರವಾಗಿ ಶ್ರಮಿಸುತ್ತಿದೆʼ ಎಂದರು.
ಕಾರ್ಯಕ್ರಮಕ್ಕೆ ಸ್ವಾಗತ ಕೋರಿ ಮಾತನಾಡಿದ ಮಾಹೆ ಮಂಗಳೂರು ಕ್ಯಾಂಪಸ್ನ ಸಹ-ಕುಲಪತಿ ಡಾ. ದಿಲೀಪ್ ನಾಯ್ಕ್, “ಘಟಿಕೋತ್ಸವ ಕೇವಲ ಶೈಕ್ಷಣಿಕ ಸಾಧನೆಗಳನ್ನು ಗುರುತಿಸುವುದಷ್ಟೇ ಅಲ್ಲ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪಯಣದಲ್ಲಿ ಗಳಿಸಿದ ಸ್ನೇಹ, ಹಂಚಿಕೊಂಡ ಅನುಭವಗಳು ಮತ್ತು ಬಾಂಧವ್ಯಗಳನ್ನು ಸಂಭ್ರಮಿಸುವ ದಿನವಾಗಿದೆ. ನಮ್ಮ ಪದವೀಧರರು ಮುಂದಿನ ಹಂತಕ್ಕೆ ಹೆಜ್ಜೆ ಇಡುತ್ತಿರುವಾಗ, ಮಾಹೆಯ ಜಾಗತಿಕ ನೆಟ್ವರ್ಕ್ನ ಶಕ್ತಿ ಮತ್ತು ತಮ್ಮ ಮಾತೃ ಸಂಸ್ಥೆಯೊಂದಿಗಿನ ಬಾಂಧವ್ಯವನ್ನು ತಮ್ಮೊಂದಿಗೆ ಕೊಂಡೊಯ್ಯಲಿದ್ದಾರೆ” ಎಂದರು.
ವೇದಿಕೆಯಲ್ಲಿ ಮಾಹೆಯ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ-ಕುಲಪತಿ ಡಾ. ನಾರಾಯಣ ಸಭಾಹಿತ್, ಕುಲಸಚಿವ ಡಾ. ಗಿರಿಧರ್ ಕಿಣಿ ಹಾಗೂ ಮೌಲ್ಯಮಾಪನ ಕುಲಸಚಿವ ಡಾ. ವಿನೋದ್ ಥಾಮಸ್ ಉಪಸ್ಥಿತರಿದ್ದರು.
ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಬಿ. ಉನ್ನಿಕೃಷ್ಣನ್ ಅವರು ಮುಖ್ಯ ಅತಿಥಿ ಹಾಗೂ ಮಣಿಪಾಲದ ಕೆಎಂಸಿ ಡೀನ್ ಡಾ. ಅನಿಲ್ ಭಟ್ ಅವರು ಗೌರವಾನ್ವಿತ ಅತಿಥಿಯನ್ನು ಪರಿಚಯಿಸಿದರು. ಮಂಗಳೂರಿನ ಎಂಕೋಡ್ಸ್ ಡೀನ್ ಡಾ. ಆಶಿತಾ ಉಪ್ಪೂರ್ ವಂದನಾರ್ಪಣೆ ಮಾಡಿದರು.







