ಕಾರ್ಕಳ:ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಅಧಿವೇಶನದಲ್ಲಿ ಮಾತನಾಡುತ್ತಾ ಗ್ಯಾರಂಟಿ ಯೋಜನೆಗಳನ್ನು ನೀಡುವುದರಿಂದ ಸರ್ಕಾರ ದಿವಾಳಿಯಾಗುತ್ತದೆ ಸಬ್ಸಿಡಿ ಸಂಸ್ಕೃತಿಯನ್ನು ನಿಲ್ಲಿಸಿ ಎಂದು ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ತಮಗಿರುವ ಅಸಮಾಧಾನವನ್ನು ಸದನದಲ್ಲಿಯೇ ಬಹಿರಂಗವಾಗಿ ತೋರ್ಪಡಿಸಿದ್ದಾರೆ. ಈಗ ಕಾರ್ಕಳ ಬಿಜೆಪಿ ಅಧ್ಯಕ್ಷರು ಕೂಡ ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗಿದೆ ಎನ್ನುವ ಅದೇ ಶಾಸಕರ ಮಾತನ್ನೇ ಪರೋಕ್ಷವಾಗಿ ಪುನರುಚ್ಚರಿಸಿದ್ದಾರೆ, ರಾಜ್ಯ ಸರ್ಕಾರವು ಬಡವರಿಗೆ ನೀಡುವ ಗ್ಯಾರಂಟಿ ಯೋಜನೆಗಳ ಮೇಲೆ ಕಾರ್ಕಳ ಶಾಸಕರು ಮತ್ತು ಬಿಜೆಪಿ ಅಧ್ಯಕ್ಷರಿಗೆ ಯಾಕೆ ಇಷ್ಟು ಹೊಟ್ಟೆ ಉರಿ..? ಅವಕಾಶ ಸಿಕ್ಕಾಗಲೆಲ್ಲ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ಇವರು ಜನರಿಗೆ ತಪ್ಪು ಮಾಹಿತಿ ನೀಡುತ್ತಾ ಟೀಕಿಸುವುದರ ಹಿಂದೆ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲು ಮಾಡುವ ಹುನ್ನಾರ ಅಡಗಿದೆ.
ಕೇಂದ್ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜನರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮನೆ ನಿರ್ಮಾಣಕ್ಕೆ, ವ್ಯಾಪಾರ ವಹಿವಾಟುವಿಗೆ ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯುತ್ತಿದ್ದರು, ಜನರ ಈ ಎಲ್ಲಾ ವ್ಯವಹಾರಗಳಿಗೆ ಯಾವುದೇ ನಿರ್ಬಂಧ ಇಲ್ಲದೆ ನಿರಾತಂಕವಾಗಿ ವ್ಯವಹಾರ ನಡೆಸುತ್ತಿದ್ದರು.
2014ರಲ್ಲಿ ಅಚ್ಚೆ ದಿನ್ ಕೊಡುತ್ತೇವೆ ಎನ್ನುವ ಸುಂದರ ಸುಳ್ಳಿನ ಕನಸನ್ನು ಜನರ ಮನಸ್ಸಿನಲ್ಲಿ ಬಿತ್ತಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರದ ಕಠಿಣ ಆರ್ಥಿಕ ನೀತಿಯಿಂದಾಗಿ ಜನ ಪ್ರತಿಯೊಂದು ಸಣ್ಣಪುಟ್ಟ ಬ್ಯಾಂಕ್ ವ್ಯವಹಾರಗಳಿಗೆ ಪಾನ್ ಕಾರ್ಡ್ ಕಡ್ಡಾಯಗೊಳಿಸಿದ ಪರಿಣಾಮವೇ ಇಂದು ಬಡ ಜನರು ಪಡೆಯುವ ಪಿಂಚಣಿ ಮುಂತಾದ ಯೋಜನೆಗಳಿಗೆ ಕೊಡಲಿಯೇಟು ಬಿದ್ದಿದೆ.
ಸಣ್ಣಪುಟ್ಟ ಹಣಕಾಸಿನ ವ್ಯವಹಾರಗಳಿಗೆ, ಲೋನ್,ಗಳಿಗೆ ಪ್ರತಿಯೊಂದು ವ್ಯವಹಾರಗಳಿಗು ಪಾನ್ ಕಾರ್ಡ್ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರದ ಕಠಿಣ ಆರ್ಥಿಕ ನೀತಿಯಿಂದಾಗಿ ಜನ ಬ್ಯಾಂಕುಗಳಲ್ಲಿ ಸಣ್ಣಪುಟ್ಟ ಸಾಲ ಪಡೆಯುಲು ಹೆಚ್ಚಿನ ಆದಾಯ ತೋರಿಸುವ ಅನಿವಾರ್ಯತೆ ಜನರಿಗೆ ಎದುರಾಗಿದೆ.
ಜನ ಸಾಲ ಪಡೆಯಲು ಹೆಚ್ಚಿನ ಆದಾಯದ ದಾಖಲೆ ತೋರಿಸಿದ ಕೂಡಲೇ ಪಾನ್ ಕಾರ್ಡ್ ಮೂಲಕ ಅದರ ಮಾಹಿತಿಯು ಸರ್ಕಾರದ ಇಲಾಖೆಗಳಿಗೆ ರವಾನೆಯಾಗುತ್ತಿರುವ ಪರಿಣಾಮದಿಂದಾಗಿ ಬಡ ಜನರ ಬಿಪಿಎಲ್ ಕಾರ್ಡ್,ಗಳು ರದ್ದಾಗುತ್ತಿವೆ. ಬಂಡವಾಳಶಾಹಿಗಳ ಪರವಾಗಿರುವ ಜನ ವಿರೋಧಿಯಾಗಿರುವ ಕೇಂದ್ರ ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆಯ ಕಠಿಣ ಆರ್ಥಿಕ ನೀತಿಯೇ ಇಂದು ಜನರಿಗೆ ಮುಳುಗಿದ್ದು ಸರ್ಕಾರಗಳು ಬಡ ಜನರಿಗೆ ನೀಡುವ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ ಮುಂತಾದ ಯೋಜನೆಗಳಿಂದ ಕೆಲವೊಂದು ಕುಟುಂಬಗಳು ವಂಚಿತವಾಗಲು ಕೇಂದ್ರ ಮೋದಿ ಸರ್ಕಾರದ ಕಠಿಣ ನಿಲುವುಗಳೇ ಕಾರಣ ಎನ್ನುವುದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು. ಮೋದಿ ಸರ್ಕಾರದ ಕಠಿಣ ಆರ್ಥಿಕ ನೀತಿಯಿಂದಾಗಿ ಜನ ಬವಣೆ ಪಡುತ್ತಿರುವುದನ್ನು ಕರ್ನಾಟಕದಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿರುವ ಬಿಜೆಪಿ ಸಂಸದರುಗಳು ಮೋದಿ ಸರ್ಕಾರಕ್ಕೆ ಮನವರಿಕೆ ಮಾಡಿಸಬೇಕು.
ಕಾರ್ಕಳ ಶಾಸಕರು ಮತ್ತು ಅವರ ಹಿಂಬಾಲಕರು ಪದೇ ಪದೇ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡುತ್ತಿದ್ದು ಮುಂದೆಯೂ ಇದನ್ನೇ ಪುನರಾವರ್ತಿಸಿದರೆ ನಾವು ನೇರವಾಗಿ ಜನರ ಬಳಿಗೆ ಹೋಗಿ ಗ್ಯಾರಂಟಿ ಯೋಜನೆಗಳ ಬಗ್ಗೆ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಬೇಕಾಗುತ್ತದೆ ಎಂದು ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.







