ಬೈಂದೂರು : ಮಾರ್ಚ್ 29: ನಾವುಂದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ದಿನಾಂಕ 28.03.2026 ರಂದು ಸಂಜೆ 5 ಗಂಟೆ ಸುಮಾರಿಗೆ ಸಂಭವಿಸಿದೆ.
ನಿಂತಿದ್ದ ಕಂಟೈನರ್ಗೆ ಎರ್ಟಿಗಾ ಕಾರು ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಮಮತಾ (36) ಹಾಗೂ ಅವರ ಮಗಳು ಧೃತಿಕಾ (14) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಕಿರಣ್, ಜಾಹ್ನವಿ, ಕಾವ್ಯ, ಚಾರ್ವಿ ಹಾಗೂ ಕಾರು ಚಾಲಕ ರಘು ಗಾಯಗೊಂಡಿದ್ದಾರೆ. ಮೂವರಿಗೆ ಕುಂದಾಪುರದ ಆದರ್ಶ ಆಸ್ಪತ್ರೆಗೆ ಹಾಗೂ ಕಿರಣ್ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರಿನ ಮೂಲದ ಈ ಕುಟುಂಬವು ಉಡುಪಿಯ ಶ್ರೀ ಕೃಷ್ಣ ಮಠ ಸೇರಿದಂತೆ ವಿವಿಧ ಪ್ರವಾಸಿ ತಾಣಗಳನ್ನು ವೀಕ್ಷಿಸಿ ಗೋಕರ್ಣ ಮತ್ತು ಮುರುಡೇಶ್ವರ ಕಡೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಘಟನೆಯ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.







