Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಭಾರತದ ತುರ್ತು ಚಿಕಿತ್ಸಾ ಕ್ಷೇತ್ರಕ್ಕೆ ಹೊಸ ಚೈತನ್ಯ: ಹೊಸ್ಮಟ್ ಆಸ್ಪತ್ರೆಯಿಂದ ಮೊಟ್ಟಮೊದಲ ಬಾರಿಗೆ ‘ಗೋಲ್ಡನ್ ಅವರ್ ನೆಟ್‌ ವರ್ಕ್’ ಆರಂಭ

Dhrishya News by Dhrishya News
29/03/2026
in ಸುದ್ದಿಗಳು
0
ಭಾರತದ ತುರ್ತು ಚಿಕಿತ್ಸಾ ಕ್ಷೇತ್ರಕ್ಕೆ ಹೊಸ ಚೈತನ್ಯ: ಹೊಸ್ಮಟ್ ಆಸ್ಪತ್ರೆಯಿಂದ ಮೊಟ್ಟಮೊದಲ ಬಾರಿಗೆ ‘ಗೋಲ್ಡನ್ ಅವರ್ ನೆಟ್‌ ವರ್ಕ್’ ಆರಂಭ
0
SHARES
1
VIEWS
Share on FacebookShare on Twitter

ಬೆಂಗಳೂರು, ಮಾರ್ಚ್ 28, 2026:ಆರ್ಥೊಪೆಡಿಕ್ಸ್ ಮತ್ತು ಟ್ರಾಮಾ ಕೇರ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವೈದ್ಯಕೀಯ ಸಂಸ್ಥೆ ಹೊಸ್ಮಟ್ ಆಸ್ಪತ್ರೆಯು ಬೆಂಗಳೂರು ಆರ್ಥೊಪೆಡಿಕ್ ಸೊಸೈಟಿಯ ಸಹಯೋಗದೊಂದಿಗೆ ಮೊಟ್ಟಮೊದಲ ಬಾರಿಗೆ ಹಮ್ಮಿಕೊಂಡಿದ್ದ ‘ಹೊಸ್ಮಟ್ ಟ್ರಾಮಾಕಾನ್ 2026’ ಸಮಾವೇಶದಲ್ಲಿ ತನ್ನ ವಿನೂತನ ‘ಗೋಲ್ಡನ್ ಅವರ್ ನೆಟ್‌ ವರ್ಕ್’ (ಜಿಎಚ್ಎನ್) ಯೋಜನೆಗೆ ಅಧಿಕೃತ ಚಾಲನೆವಾಗಿ ನೀಡಿದೆ. ಈ ಮೂಲಕ ದೇಶದ ತುರ್ತು ಚಿಕಿತ್ಸಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ.

 

ಈ ವಿಶಿಷ್ಟ ಸಮಾವೇಶದಲ್ಲಿ ಭಾರತದ ತುರ್ತು ಚಿಕಿತ್ಸಾ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಅಭ್ಯಾಸ-ಆಧಾರಿತ ಪದ್ಧತಿಗಳ ಕುರಿತು ಸಂವಾದ ನಡೆಸಲಾಯಿತು. ಇದೇ ಸಂದರ್ಭದಲ್ಲಿ ‘ಹೊಸ್ಮಟ್ ಅಲುಮ್ನಿ ಅಸೋಸಿಯೇಷನ್’ ಅನ್ನು ಸಹ ಉದ್ಘಾಟಿಸಲಾಯಿತು.

 

ಅಪಘಾತ ಸಂಭವಿಸಿದ ಮೊದಲ ಒಂದು ಗಂಟೆ (ಗೋಲ್ಡನ್ ಅವರ್) ಜೀವ ಉಳಿಸುವಲ್ಲಿ ಅತ್ಯಂತ ನಿರ್ಣಾಯಕ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿರುವ ಗೋಲ್ಡನ್ ಅವರ್ ನೆಟ್‌ ವರ್ಕ್, ಹೊಸ್ಮಟ್ ಸಂಸ್ಥೆಯಲ್ಲಿ ತರಬೇತಿ ಪಡೆದ ಪರಿಣತ ಶಸ್ತ್ರಚಿಕಿತ್ಸಕರನ್ನು ಒಂದೇ ಸೂರಿನಡಿ ಒಗ್ಗೂಡಿಸಲಿದೆ.

ಅದರ ಜೊತೆಗೆ ಆರಂಭಗೊಂಡಿರುವ ‘ಹೊಸ್ಮಟ್ ಅಲುಮ್ನಿ ಅಸೋಸಿಯೇಷನ್’ ಕೇವಲ ಹಳೆಯ ವಿದ್ಯಾರ್ಥಿಗಳ ಒಕ್ಕೂಟವಾಗಿರದೆ, ಗೋಲ್ಡನ್ ಅವರ್ ನೆಟ್‌ ವರ್ಕ್ (ಜಿಎಚ್ಎನ್) ನ ವೈದ್ಯಕೀಯ ಮತ್ತು ಶೈಕ್ಷಣಿಕ ಕ್ಷೇತ್ರಗಳ ಜಂಟಿ ಆಡಳಿತಾತ್ಮಕ ಜಾಲವಾಗಿ ರೂಪಿತವಾಗಿದೆ. ಇದು ಪ್ರತಿ ತಿಂಗಳು ಕ್ಲಿನಿಕಲ್ ರೌಂಡ್ಸ್, ಪ್ರತಿ ಮೂರು ತಿಂಗಳಿಗೊಮ್ಮೆ ವಿಶೇಷ ಚಿಕಿತ್ಸಾ ಪದ್ಧತಿಗಳ ಕುರಿತ ಚರ್ಚೆಗಳು ಮತ್ತು ವಾರ್ಷಿಕವಾಗಿ ‘ಟ್ರಾಮಾಕಾನ್’ ಎಂಬ ಬೃಹತ್ ಸಮಾವೇಶದಂತಹ ನಿಗದಿತ ಕಾರ್ಯಕ್ರಮಗಳನ್ನು ಆಯೋಜಿಸಲಿದೆ.

 

ಅಪಘಾತ ಅಥವಾ ಗಾಯಗೊಂಡ ನಂತರದ ಮೊದಲ ಒಂದು ಗಂಟೆ ಆ ವ್ಯಕ್ತಿಗಳ ಬದುಕುಳಿಯುವ ಸಾಧ್ಯತೆಯನ್ನು ನಿರ್ಧರಿಸುವ ನಿರ್ಣಾಯಕ “ಗೋಲ್ಡನ್ ಅವರ್” ಆಗಿದೆ. ಹಾಗಾಗಿ ಆ ಹೆಸರನ್ನೇ ಈ ನೆಟ್‌ ವರ್ಕ್‌ ಗೆ ಇಡಲಾಗಿದೆ. ಈ ನೆಟ್ ವರ್ಕ್, ತುರ್ತು ಚಿಕಿತ್ಸೆ ಎಂಬುದು ಕೇವಲ ಆಸ್ಪತ್ರೆ ಅಥವಾ ಸಂಸ್ಥೆಗಳಿಗೆ ಸೀಮಿತವಾದುದಲ್ಲ; ಬದಲಿಗೆ ಚಿಕಿತ್ಸೆ ನೀಡುವ ವೈದ್ಯರ ತುರ್ತು ಪ್ರಜ್ಞೆ, ನಿಖರತೆ ಮತ್ತು ಸಾಮೂಹಿಕ ಜವಾಬ್ದಾರಿಯ ಮೇಲೆ ನಿಂತಿದೆ ಎಂಬ ತತ್ವವನ್ನು ಸಾರುತ್ತದೆ. ಬರುವ ಆರು ತಿಂಗಳಲ್ಲಿ ಈ ನೆಟ್‌ ವರ್ಕ್ ತನ್ನ ಆಡಳಿತಾತ್ಮಕ ರಚನೆಯನ್ನು ಅಂತಿಮಗೊಳಿಸಲಿದೆ. ಹಿರಿಯ ಹಳೆಯ ವಿದ್ಯಾರ್ಥಿಗಳನ್ನು ಈ ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ ತನ್ನ ಮೊದಲ ಹಂತದ ವೈದ್ಯಕೀಯ ಚಟುವಟಿಕೆಗಳನ್ನು ಆರಂಭಿಸಲಿದೆ.

 

ಜಿಎಚ್ಎನ್ ಆರಂಭವು ಹೊಸ್ಮಟ್ ಆಸ್ಪತ್ರೆಯ ಬೆಳವಣಿಗೆ ಪಥದಲ್ಲಿ ಒಂದು ಪ್ರಮುಖ ಘಟ್ಟವಾಗಿದೆ. ಕೇವಲ ಅತಿ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುವ ಸಂಸ್ಥೆಯಾಗಿ ಉಳಿಯದೆ, ಆರ್ಥೊಪೆಡಿಕ್ಸ್ (ಮೂಳೆಚಿಕಿತ್ಸೆ) ಮತ್ತು ಟ್ರಾಮಾ ಕೇರ್ (ತುರ್ತು ಚಿಕಿತ್ಸಾ) ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಶೈಕ್ಷಣಿಕ ಶ್ರೇಷ್ಠತೆಯ ಕೇಂದ್ರವಾಗಿ ಹೊಸ್ಮಟ್ ಹೊರಹೊಮ್ಮುತ್ತಿರುವುದಕ್ಕೆ ಇದು ಪುರಾವೆಯಾಗಿದೆ.

 

ಕಳೆದ 33ಕ್ಕೂ ಹೆಚ್ಚು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹೊಸ್ಮಟ್ ಆಸ್ಪತ್ರೆಯು ದೇಶದಲ್ಲಿ ಅತ್ಯಂತ ಗಮನಾರ್ಹ ಟ್ರಾಮಾ ಕೇರ್ ವಿಭಾಗವನ್ನು ನಿರ್ಮಿಸುತ್ತಾ ಬಂದಿದೆ. ಇಲ್ಲಿ ಪ್ರತಿದಿನ ಸರಾಸರಿ 25 ರಿಂದ 30 ತುರ್ತು ಶಸ್ತ್ರಚಿಕಿತ್ಸೆಗಳು ನಡೆಯುತ್ತಿದ್ದು, ಇದು ಭಾರತದ ಅತಿ ಹೆಚ್ಚು ಕಾರ್ಯಚಟುವಟಿಕೆ ಹೊಂದಿರುವ ತುರ್ತು ಚಿಕಿತ್ಸಾ ಕೇಂದ್ರಗಳಲ್ಲಿ ಒಂದಾಗಿದೆ. ಶೈಕ್ಷಣಿಕ ವೈದ್ಯಕೀಯ ಕ್ಷೇತ್ರಕ್ಕೂ ಸಂಸ್ಥೆಯು ಅಪಾರ ಕೊಡುಗೆ ನೀಡಿದ್ದು, ಈವರೆಗೆ 300ಕ್ಕೂ ಹೆಚ್ಚು ಸಂಶೋಧನಾ ಯೋಜನೆಗಳನ್ನು ಕೈಗೊಂಡಿದೆ. ಅಂತಾರಾಷ್ಟ್ರೀಯ ಇಂಡೆಕ್ಸ್ಡ್ ಜರ್ನಲ್‌ ಗಳಲ್ಲಿ 80ಕ್ಕೂ ಹೆಚ್ಚು ಪ್ರಬಂಧಗಳು ಪ್ರಕಟವಾಗಿದ್ದು, ಮೂಳೆಚಿಕಿತ್ಸೆ ಮತ್ತು ಟ್ರಾಮಾ ಕೇರ್‌ ನ ವೈದ್ಯಕೀಯ ಪದ್ಧತಿಗಳನ್ನು ರೂಪಿಸುವಲ್ಲಿ ಸಂಸ್ಥೆಯು ಪ್ರಮುಖ ಪಾತ್ರ ವಹಿಸಿದೆ.

 

ವೈದ್ಯಕೀಯ ಶಿಕ್ಷಣದ ಮೇಲೂ ಈ ಸಂಸ್ಥೆಯ ಪ್ರಭಾವ ಅಷ್ಟೇ ಮಹತ್ವದ್ದಾಗಿದೆ. ಆರ್ಥೊಪೆಡಿಕ್ ಸೊಸೈಟಿ ಆಫ್ ಇಂಡಿಯಾದ ಅಂದಾಜಿನ ಪ್ರಕಾರ, ಬೆಂಗಳೂರಿನ ಸುಮಾರು 10% ರಷ್ಟು ಮೂಳೆ ಶಸ್ತ್ರಚಿಕಿತ್ಸಕರು ಹೊಸ್ಮಟ್ ನಲ್ಲಿ ತರಬೇತಿ ಪಡೆದಿದ್ದಾರೆ. ಇದು ಮುಂದಿನ ಪೀಳಿಗೆಯ ತಜ್ಞ ವೈದ್ಯರನ್ನು ರೂಪಿಸುವಲ್ಲಿ ಸಂಸ್ಥೆಯು ಪ್ರಮುಖ ತರಬೇತಿ ಕೇಂದ್ರವಾಗಿರುವುದನ್ನು ಪುಷ್ಠೀಕರಿಸುತ್ತದೆ. ಕಳೆದ ದಶಕಗಳಲ್ಲಿ, ಹೊಸ್ಮಟ್ ತನ್ನ ಟ್ರಾಮಾ ಕೇರ್ ಮೂಲಕ ಬೆಂಗಳೂರಿನ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನರನ್ನು ತಲುಪಿದ್ದು, ಇದು ಸಂಸ್ಥೆಯ ವ್ಯಾಪ್ತಿ ಮತ್ತು ಜನರು ಸಂಸ್ಥೆಯ ಮೇಲಿಟ್ಟಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.

 

ರಿಚ್ಮಂಡ್ ರಸ್ತೆಯ ಐಟಿಸಿ ವೆಲ್ಕಮ್ ಹೋಟೆಲ್‌ ನಲ್ಲಿ ನಡೆದ ‘ಟ್ರಾಮಾಕಾನ್ 2026’ ಸಮ್ಮೇಳನದಲ್ಲಿ ಭಾರತದಾದ್ಯಂತ ಇರುವ 150ಕ್ಕೂ ಹೆಚ್ಚು ಪ್ರಮುಖ ಮೂಳೆ ಶಸ್ತ್ರಚಿಕಿತ್ಸಕರು, ಟ್ರಾಮಾ ತಜ್ಞರು ಮತ್ತು ವೈದ್ಯರು ಭಾಗವಹಿಸಿದ್ದರು. ಈ ಮೂಲಕ ವಾಸ್ತವ ಜಗತ್ತಿನ ಕಲಿಕೆ, ಶಸ್ತ್ರಚಿಕಿತ್ಸಾ ಆವಿಷ್ಕಾರಗಳು ಮತ್ತು ಸಹಯೋಗದ ಸಮಸ್ಯೆ ಪರಿಹಾರ ಕ್ರಮಗಳನ್ನು ಚರ್ಚಿಸಲು ಒಂದು ಮಹತ್ವದ ವೇದಿಕೆಯನ್ನು ನಿರ್ಮಿಸಲಾಗಿದೆ. ಈ ಕಾರ್ಯಕ್ರಮವನ್ನು ಜಾಗತಿಕವಾಗಿ ಗೌರವಿಸಲ್ಪಟ್ಟ ಮೂಳೆ ಶಸ್ತ್ರಚಿಕಿತ್ಸಕ ಮತ್ತು ಟ್ರಾಮಾ ಕೇರ್‌ ನ ಪ್ರವರ್ತಕರಾಗಿದ್ದ ದಿವಂಗತ ಡಾ. ಥಾಮಸ್ ಚಾಂಡಿ ಅವರ ಸ್ಮರಣಾರ್ಥ ಆಯೋಜಿಸಲಾಗಿತ್ತು. ಅವರು ಹಾಕಿಕೊಟ್ಟ ದಾರಿ ಇಂದಿಗೂ ಸಂಸ್ಥೆಯ ವೈದ್ಯಕೀಯ ಮತ್ತು ಶೈಕ್ಷಣಿಕ ಸಿದ್ಧಾಂತಕ್ಕೆ ಮಾರ್ಗದರ್ಶಿಯಾಗಿದೆ ಎಂಬುದು ಗಮನಾರ್ಹವಾಗಿದೆ.

 

ಭಾರತವು ಜಾಗತಿಕವಾಗಿ ಅತಿ ಹೆಚ್ಚು ಆಘಾತ ಚಿಕಿತ್ಸೆಯ ಹೊರೆ ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ವಾರ್ಷಿಕವಾಗಿ 4.8 ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಸುಮಾರು 1.7 ರಿಂದ 1.8 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಇದು ಯುವಜನರ ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಈ ಹಿನ್ನೆಲೆಯಲ್ಲಿ, ರೋಗಿಗಳ ಚಿಕಿತ್ಸಾ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರುವ ‘ಅಭ್ಯಾಸ- ಆಧಾರಿತ’ ಮತ್ತು ‘ಅನುಭವ-ಚಾಲಿತ’ ಕಲಿಕಾ ವೇದಿಕೆಯ ಅಗತ್ಯವನ್ನು ಪೂರೈಸಲು ‘ಟ್ರಾಮಾಕಾನ್ 2026’ ಅನ್ನು ರೂಪಿಸಲಾಗಿದೆ.

 

ಇಡೀ ದಿನ ನಡೆದ ಈ ಸಮಾವೇಶದಲ್ಲಿ, 25ಕ್ಕೂ ಹೆಚ್ಚು ತಜ್ಞರ ಸಾರಥ್ಯದ ಗೋಷ್ಠಿಗಳು ನಡೆದುವು. ಇದರಲ್ಲಿ ಮೇಲ್ಭಾಗದ ಅಂಗಾಂಗಗಳ ಆಘಾತ, ಸಂಕೀರ್ಣ ಕೆಳಭಾಗದ ಅಂಗಾಂಗಗಳ ಗಾಯಗಳು, ಮಕ್ಕಳ ಆಘಾತ, ಕೂಡಿಕೊಳ್ಳದ ಮೂಳೆಗಳ ಶಸ್ತ್ರಚಿಕಿತ್ಸೆ, ತೊಡಕುಗಳ ನಿರ್ವಹಣೆ, ವೈದ್ಯಕೀಯ-ಕಾನೂನು ಅಂಶಗಳು ಮತ್ತು ಮೂಳೆಚಿಕಿತ್ಸಾ ಪದ್ಧತಿಗಳ ದಕ್ಷತೆಯ ಬಗ್ಗೆ ಚರ್ಚಿಸಲಾಯಿತು. ನೈಜ ವಿದ್ಯಮಾನಗಳನ್ನು ಆಧರಿಸಿದ ಚರ್ಚೆಗಳು ಈ ಸಮಾವೇಶದ ವೈಶಿಷ್ಟ್ಯವಾಗಿದ್ದವು, ಇದು ವೈದ್ಯರಿಗೆ ಒತ್ತಡದ ಸಂದರ್ಭಗಳಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಹಕಾರಿಯಾಗಲಿದೆ.

 

ಸಮಾವೇಶದ ಮಹತ್ವ ಮತ್ತು ಗೋಲ್ಡನ್ ಅವರ್ ನೆಟ್‌ ವರ್ಕ್ (ಜಿಎಚ್ಎನ್) ಚಾಲನೆಯ ಕುರಿತು ಮಾತನಾಡಿ ಹೊಸ್ಮಟ್ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕಿ ಅನಿಶಾ ಚಾಂಡಿ ಎಕ್ಕಾರ್ಡ್ಟ್ ಅವರು,”ಭಾರತದಲ್ಲಿ ತುರ್ತು ಚಿಕಿತ್ಸಾ (ಟ್ರಾಮಾ ಕೇರ್) ವ್ಯವಸ್ಥೆಯು ವೈದ್ಯಕೀಯ ಪರಿಣತಿಯ ಕೊರತೆಯಿಂದ ಬಳಲುತ್ತಿಲ್ಲ, ಬದಲಿಗೆ ಸಮಯೋಚಿತ ಸ್ಪಂದನೆ, ತರಬೇತಿ ಮತ್ತು ಸಮನ್ವಯದ ಕೊರತೆಯಿಂದ ಬಳಲುತ್ತಿದೆ. ಹೊಸ್ಮಟ್ ನಲ್ಲಿ ನಾವು ಈ ವಾಸ್ತವವನ್ನು ಬಹಳ ಹಿಂದೆಯೇ ಅರ್ಥಮಾಡಿಕೊಂಡಿದ್ದೇವೆ. ಪ್ರತಿಯೊಬ್ಬ ರೋಗಿಯೂ ಯಾವುದೇ ರಾಜಿ ಇಲ್ಲದೆ ಸಮಯೋಚಿತವಾದ, ನಿಖರವಾದ ಮತ್ತು ಸಹಾನುಭೂತಿಯುಳ್ಳ ಚಿಕಿತ್ಸೆಯನ್ನು ಪಡೆಯಲು ಅರ್ಹರು ಎಂಬ ದಿವಂಗತ ಡಾ. ಥಾಮಸ್ ಚಾಂಡಿ ಅವರ ಅಚಲ ನಂಬಿಕೆಯೇ ನಮಗೆ ದಾರಿದೀಪ. ಟ್ರಾಮಾಕಾನ್ 2026 ಸಮಾವೇಶದ ಮೂಲಕ, ಈ ಅಂತರಗಳನ್ನು ಸರಿಪಡಿಸಲು ನಾವು ಈ ಕ್ಷೇತ್ರದ ಅತ್ಯುತ್ತಮ ಪ್ರತಿಭೆಗಳನ್ನು ಒಂದೆಡೆ ಸೇರಿಸುತ್ತಿದ್ದೇವೆ. ಇದು ಕೇವಲ ಚರ್ಚೆಯಲ್ಲ, ಬದಲಿಗೆ ಚಿಕಿತ್ಸೆಯ ನಿರ್ಣಾಯಕ ಕ್ಷಣವಾದ ‘ಗೋಲ್ಡನ್ ಅವರ್’ನಲ್ಲಿ ರೋಗಿಯ ಪ್ರಾಣ ಉಳಿಸುವ ಫಲಿತಾಂಶಗಳನ್ನು ಒದಗಿಸುವ ಅಭ್ಯಾಸ ಆಧಾರಿತ ಬದಲಾವಣೆಯನ್ನು ತರುವ ಮಹತ್ವದ ಪ್ರಯತ್ನವಾಗಿದೆ. ಜೊತೆಗೆ, ನಾವು ಹೊಸ್ಮಟ್ ಅನ್ನು ಅತ್ಯಾಧುನಿಕ ಮೂಳೆಚಿಕಿತ್ಸೆ ಮತ್ತು ತುರ್ತು ಚಿಕಿತ್ಸಾ ಸಂಶೋಧನಾ ಸಂಸ್ಥೆಯಾಗಿ ಪರಿವರ್ತಿಸಲು ಪ್ರಜ್ಞಾಪೂರ್ವಕವಾಗಿ ಮುಂದಡಿ ಇಡುತ್ತಿದ್ದೇವೆ. ಮುಂಬರುವ ವರ್ಷಗಳಲ್ಲಿ ವೈದ್ಯಕೀಯ ಶ್ರೇಷ್ಠತೆಯ ಜೊತೆ ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನೆ ಮತ್ತು ಹೊಸ ಆವಿಷ್ಕಾರಗಳು ಒಂದೇ ಕಡೆ ಕಾಣಸಿಗುವ ದಿಸೆಯಲ್ಲಿ ನಾವು ಸಾಗಲಿದ್ದೇವೆ” ಎಂದು ಹೇಳಿದರು.

 

ಹೊಸ್ಮಟ್ ಆಸ್ಪತ್ರೆಯ ಆರ್ಥೊಪೆಡಿಕ್ ಟ್ರಾಮಾ ವಿಭಾಗದ ಮುಖ್ಯಸ್ಥರು ಹಾಗೂ ಟ್ರಾಮಾಕಾನ್ 2026ರ ಅಧ್ಯಕ್ಷರಾದ ಡಾ. ರವಿಶಂಕರ್ ಎಂ. ಆರ್. ಅವರು ಮಾತನಾಡಿ, “ಹೊಸ್ಮಟ್ ಆಸ್ಪತ್ರೆಯಲ್ಲಿ ಟ್ರಾಮಾ ಕೇರ್ ಎಂಬುದು ಬಲಿಷ್ಠವಾದ ವೈದ್ಯಕೀಯ ಅನುಭವ, ಶೈಕ್ಷಣಿಕ ಶಿಸ್ತು ಮತ್ತು ನಿರಂತರ ಸಂಶೋಧನೆಯ ಅಡಿಪಾಯದ ಮೇಲೆ ನಿರ್ಮಿತವಾಗಿದೆ. ಪ್ರತಿದಿನ 25 ರಿಂದ 30 ತುರ್ತು ಚಿಕಿತ್ಸಾ ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸುವುದು ನಮಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ. ನಮ್ಮ ಶೈಕ್ಷಣಿಕ ಮತ್ತು ತರಬೇತಿ ಕಾರ್ಯಕ್ರಮಗಳು ಈ ಅನುಭವವನ್ನು ಜ್ಞಾನವಾಗಿ ಪರಿವರ್ತಿಸುವಂತೆ ನೋಡಿಕೊಳ್ಳುತ್ತವೆ. ಟ್ರಾಮಾಕಾನ್ ಸಮಾವೇಶವು ಇದನ್ನು ಸ್ಪಷ್ಟಪಡಿಸುತ್ತಿದ್ದು, ಇಲ್ಲಿ ವೈದ್ಯಕೀಯ ಪದ್ಧತಿ, ಸಂಶೋಧನೆ ಮತ್ತು ಸಹಯೋಗಗಳ ಮೂಲಕ ಹೆಚ್ಚು ಸ್ಥಿರವಾದ ಹಾಗೂ ಪುರಾವೆ ಆಧಾರಿತ ಟ್ರಾಮಾ ಕೇರ್ ವಿಭಾಗ ರೂಪುಗೊಳ್ಳುತ್ತಿರುವುದನ್ನು ಕಾಣಬಹುದು” ಎಂದು ಹೇಳಿದರು.

 

ಆರ್ಥೊಪೆಡಿಕ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷರಾದ ಡಾ. ಸುಬೋಧ್ ಎಂ. ಶೆಟ್ಟಿ ಅವರು ಸಂಸ್ಥೆಯ ಪರಂಪರೆಯ ಕುರಿತು ಮಾತನಾಡಿ,”ಡಾ. ಥಾಮಸ್ ಚಾಂಡಿ ಅವರು ಕೇವಲ ಒಬ್ಬ ಶಸ್ತ್ರಚಿಕಿತ್ಸಕರಾಗಿರಲಿಲ್ಲ, ಅವರು ಈ ದೇಶದ ಮೂಳೆಚಿಕಿತ್ಸೆ ಮತ್ತು ಟ್ರಾಮಾ ತಜ್ಞರ ತಲೆಮಾರುಗಳನ್ನೇ ರೂಪಿಸಿದ ಅಪೂರ್ವ ಮಾರ್ಗದರ್ಶಕರು. ಇಂದಿನ ಅನೇಕ ಪ್ರಮುಖ ಶಸ್ತ್ರಚಿಕಿತ್ಸಕರು ಅವರ ನಿಖರತೆ, ಶಿಸ್ತು ಮತ್ತು ರೋಗಿ ಪ್ರಥಮ ಎನ್ನುವ ಕಾಳಜಿಯನ್ನು ಇಟ್ಟುಕೊಂಡು ಮುಂದುವರಿಯುತ್ತಿದ್ದಾರೆ. ಇಂದು ನಾವು ಟ್ರಾಮಾಕಾನ್‌ ಸಮಾವೇಶದಲ್ಲಿ ಕಾಣುತ್ತಿರುವುದು ಅದೇ ಪರಂಪರೆಯ ಪ್ರತಿಬಿಂಬ. ನಿರಂತರ ಕಲಿಕೆ, ಜ್ಞಾನ ಹಂಚಿಕೆ ಮತ್ತು ಸುಧಾರಣೆಯ ಬದ್ಧತೆಯನ್ನು ಇಲ್ಲಿ ಕಾಣುತ್ತಿದ್ದೇವೆ. ಆ ದೃಷ್ಟಿಯಲ್ಲಿ, ಗೋಲ್ಡನ್ ಅವರ್ ನೆಟ್‌ ವರ್ಕ್ ಅವರ ದಾರ್ಶನಿಕ ಚಿಂತನೆಯ ಪ್ರಬಲ ಮುಂದುವರಿಕೆಯಾಗಿದೆ. ಇದು ದೇಶದಾದ್ಯಂತ ಇರುವ ಪರಿಣತಿಯನ್ನು ಒಗ್ಗೂಡಿಸುವ ಮತ್ತು ಅತ್ಯಂತ ನಿರ್ಣಾಯಕ ಸಂದರ್ಭಗಳಲ್ಲಿ ತುರ್ತು ಚಿಕಿತ್ಸಾ ಸ್ಪಂದನಾ ವ್ಯವಸ್ಥೆಯನ್ನು ಬಲಪಡಿಸುವ ಸಾಮರ್ಥ್ಯವನ್ನು ಹೊಂದಿದೆ” ಎಂದು ಹೇಳಿದರು.

 

ಹೆಚ್ಚು ಸಂಖ್ಯೆಯ ಪಾಲ್ಗೊಳ್ಳುವಿಕೆ, ವೈದ್ಯಕೀಯ ಸಮೂಹದ ಅಭೂತಪೂರ್ವ ಆಸಕ್ತಿ ಮತ್ತು ವಿಶಿಷ್ಟ ಪ್ರಾಯೋಗಿಕ ವಿಧಾನದೊಂದಿಗೆ ಯಶಸ್ವಿಯಾಗಿ ಜರುಗಿದ ಹೊಸ್ಮಟ್ ಟ್ರಾಮಾಕಾನ್ 2026 ಹಾಗೂ ‘ಗೋಲ್ಡನ್ ಅವರ್ ನೆಟ್‌ ವರ್ಕ್’ನ ಚಾಲನಾ ಕಾರ್ಯಕ್ರಮವು ಭಾರತದಲ್ಲಿ ಹೆಚ್ಚು ಸುಸಂಘಟಿತ, ಸಹಭಾಗಿತ್ವದ ಮತ್ತು ಸಂಶೋಧನೆ ಆಧಾರಿತ ಟ್ರಾಮಾ ಕೇರ್ ಕ್ಷೇತ್ರವನ್ನು ನಿರ್ಮಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

 

ತನ್ನ ಮೊದಲ ಆವೃತ್ತಿಯ ಈ ಭರ್ಜರಿ ಯಶಸ್ಸಿನ ಬೆನ್ನಲ್ಲೇ, ಟ್ರಾಮಾಕಾನ್ ಮುಂದಿನ ದಿನಗಳಲ್ಲಿ ತುರ್ತು ಚಿಕಿತ್ಸಾ ಶಿಕ್ಷಣ, ಸಂಶೋಧನೆ ಮತ್ತು ವೈದ್ಯಕೀಯ ಸಹಯೋಗಕ್ಕಾಗಿ ಒಂದು ಬಲಿಷ್ಠ ರಾಷ್ಟ್ರೀಯ ವೇದಿಕೆಯಾಗಿ ವಿಕಸನಗೊಳ್ಳುವ ನಿರೀಕ್ಷೆಯಿದೆ. ಇದು ಭಾರತದಲ್ಲಿ ಮೂಳೆಚಿಕಿತ್ಸೆ ಮತ್ತು ಟ್ರಾಮಾ ಕೇರ್‌ ವಿಭಾಗದ ಭವಿಷ್ಯವನ್ನು ಹೊಸದಾಗಿ ರೂಪಿಸಲು ದೇಶದಾದ್ಯಂತದ ವೈದ್ಯರು, ವೈದ್ಯಕೀಯ ಸಂಸ್ಥೆಗಳು ಮತ್ತು ಹೊಸ ಆವಿಷ್ಕಾರ ಕೈಗೊಳ್ಳುವ ಆಸಕ್ತರನ್ನು ಒಂದೇ ಸೂರಿನಡಿ ತರುವ ಗುರಿಯನ್ನು ಹೊಂದಿದೆ.

 

Previous Post

ಕುಕ್ಕುಂದೂರಿನಲ್ಲಿ ಗುಡ್ಡೆ ಗುಳಿಗ ದೈವದ ಹರಕೆಯ ನೇಮೋತ್ಸವ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಭಾರತದ ತುರ್ತು ಚಿಕಿತ್ಸಾ ಕ್ಷೇತ್ರಕ್ಕೆ ಹೊಸ ಚೈತನ್ಯ: ಹೊಸ್ಮಟ್ ಆಸ್ಪತ್ರೆಯಿಂದ ಮೊಟ್ಟಮೊದಲ ಬಾರಿಗೆ ‘ಗೋಲ್ಡನ್ ಅವರ್ ನೆಟ್‌ ವರ್ಕ್’ ಆರಂಭ

ಭಾರತದ ತುರ್ತು ಚಿಕಿತ್ಸಾ ಕ್ಷೇತ್ರಕ್ಕೆ ಹೊಸ ಚೈತನ್ಯ: ಹೊಸ್ಮಟ್ ಆಸ್ಪತ್ರೆಯಿಂದ ಮೊಟ್ಟಮೊದಲ ಬಾರಿಗೆ ‘ಗೋಲ್ಡನ್ ಅವರ್ ನೆಟ್‌ ವರ್ಕ್’ ಆರಂಭ

29/03/2026
ಕುಕ್ಕುಂದೂರಿನಲ್ಲಿ ಗುಡ್ಡೆ ಗುಳಿಗ ದೈವದ ಹರಕೆಯ ನೇಮೋತ್ಸವ..!!

ಕುಕ್ಕುಂದೂರಿನಲ್ಲಿ ಗುಡ್ಡೆ ಗುಳಿಗ ದೈವದ ಹರಕೆಯ ನೇಮೋತ್ಸವ..!!

28/03/2026
SSLC ಒಟ್ಟು ಅಂಕ 625ರಿಂದ 525ಕ್ಕೆ ಇಳಿಕೆ: ತೃತೀಯ ಭಾಷೆ ಅಂಕ ಗ್ರೇಡ್ ಮಾತ್ರ..!!

SSLC ಒಟ್ಟು ಅಂಕ 625ರಿಂದ 525ಕ್ಕೆ ಇಳಿಕೆ: ತೃತೀಯ ಭಾಷೆ ಅಂಕ ಗ್ರೇಡ್ ಮಾತ್ರ..!!

28/03/2026
ಉಡುಪಿ: ರಸ್ತೆ ಬದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧರ ರಕ್ಷಣೆ

ಉಡುಪಿ: ರಸ್ತೆ ಬದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧರ ರಕ್ಷಣೆ

28/03/2026

Recent News

ಭಾರತದ ತುರ್ತು ಚಿಕಿತ್ಸಾ ಕ್ಷೇತ್ರಕ್ಕೆ ಹೊಸ ಚೈತನ್ಯ: ಹೊಸ್ಮಟ್ ಆಸ್ಪತ್ರೆಯಿಂದ ಮೊಟ್ಟಮೊದಲ ಬಾರಿಗೆ ‘ಗೋಲ್ಡನ್ ಅವರ್ ನೆಟ್‌ ವರ್ಕ್’ ಆರಂಭ

ಭಾರತದ ತುರ್ತು ಚಿಕಿತ್ಸಾ ಕ್ಷೇತ್ರಕ್ಕೆ ಹೊಸ ಚೈತನ್ಯ: ಹೊಸ್ಮಟ್ ಆಸ್ಪತ್ರೆಯಿಂದ ಮೊಟ್ಟಮೊದಲ ಬಾರಿಗೆ ‘ಗೋಲ್ಡನ್ ಅವರ್ ನೆಟ್‌ ವರ್ಕ್’ ಆರಂಭ

29/03/2026
ಕುಕ್ಕುಂದೂರಿನಲ್ಲಿ ಗುಡ್ಡೆ ಗುಳಿಗ ದೈವದ ಹರಕೆಯ ನೇಮೋತ್ಸವ..!!

ಕುಕ್ಕುಂದೂರಿನಲ್ಲಿ ಗುಡ್ಡೆ ಗುಳಿಗ ದೈವದ ಹರಕೆಯ ನೇಮೋತ್ಸವ..!!

28/03/2026
SSLC ಒಟ್ಟು ಅಂಕ 625ರಿಂದ 525ಕ್ಕೆ ಇಳಿಕೆ: ತೃತೀಯ ಭಾಷೆ ಅಂಕ ಗ್ರೇಡ್ ಮಾತ್ರ..!!

SSLC ಒಟ್ಟು ಅಂಕ 625ರಿಂದ 525ಕ್ಕೆ ಇಳಿಕೆ: ತೃತೀಯ ಭಾಷೆ ಅಂಕ ಗ್ರೇಡ್ ಮಾತ್ರ..!!

28/03/2026
ಉಡುಪಿ: ರಸ್ತೆ ಬದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧರ ರಕ್ಷಣೆ

ಉಡುಪಿ: ರಸ್ತೆ ಬದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧರ ರಕ್ಷಣೆ

28/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved