ಕುಂದಾಪುರ, ಮಾ. 26 :ಆನ್ಲೈನ್ ಹೂಡಿಕೆ ಹೆಸರಿನಲ್ಲಿ ಭಾರೀ ವಂಚನೆ ನಡೆದ ಘಟನೆ ಕುಂದಾಪುರದಲ್ಲಿ ಬೆಳಕಿಗೆ ಬಂದಿದೆ. ಹಾಲಾಡಿ ಗ್ರಾಮದ 43 ವರ್ಷದ ಯಶೋಧ ಅವರು ನೀಡಿದ ದೂರಿನ ಪ್ರಕಾರ, ಅಂಕದಕಟ್ಟೆಯ ಚಂದ್ರಿಕಾ (38) ಮತ್ತು ಶಿವಮೊಗ್ಗದ ಭಾಸ್ಕರ (45) ಇವರಿಬ್ಬರು ಬಿಟ್ಕಾಯಿನ್ ಹೂಡಿಕೆ ಮೂಲಕ ಹಣವನ್ನು ದ್ವಿಗುಣಗೊಳಿಸುವುದಾಗಿ ನಂಬಿಕೆ ಮೂಡಿಸಿದ್ದರು. ಬೈಂದೂರಿನ ಪ್ರದೀಪ್ ಶೆಟ್ಟಿ ಮೂಲಕ ಸಂಪರ್ಕ ಸಾಧಿಸಿ, ಕೋಟೇಶ್ವರ ಗ್ರಾಮದ ಅಂಕದಕಟ್ಟೆ ಸಹನಾ ಹಾಲ್ ಸಮೀಪ ಇರುವ ಕಚೇರಿಗೆ ಹಣ ತರಲು ಸೂಚಿಸಿದ್ದರು.
ದೂರಿನ ಪ್ರಕಾರ, ಕಚೇರಿಗೆ ಹೋದ ಯಶೋಧ ಅವರಿಗೆ ವ್ಯವಹಾರ ಕಾನೂನುಬದ್ದವಾಗಿದೆ, ಲೈಸೆನ್ಸ್ ಹೊಂದಿದೆ ಎಂದು ಹೇಳಿ ನಕಲಿ ದಾಖಲೆಗಳನ್ನು ತೋರಿಸಿ ನಂಬಿಸಿದ್ದರು. 2024 ಡಿಸೆಂಬರ್ 11 ರಂದು ಮೊದಲಿಗೆ ₹3.80 ಲಕ್ಷ ಪಡೆದುಕೊಂಡಿದ್ದು, ನಂತರ ಹಂತ ಹಂತವಾಗಿ ಒಟ್ಟು ₹17 ಲಕ್ಷ ಹೂಡಿಕೆ ಮಾಡಿಸಿಕೊಂಡಿದ್ದಾರೆ. ಆದರೆ, ಹೂಡಿಕೆಯ ದೃಢೀಕರಣಕ್ಕಾಗಿ ಬಾಂಡ್ ನೀಡದೇ ಸಮಯ ಕಳೆಯುತ್ತ ಬಂದಿದ್ದಾರೆ ಎನ್ನಲಾಗಿದೆ.
2026 ಮಾರ್ಚ್ 16 ರಂದು ಸಂಜೆ 5 ಗಂಟೆಗೆ ಕಚೇರಿಗೆ ತೆರಳಿ ಹಣದ ಬಾಂಡ್ ಕೇಳಿದಾಗ, ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದೇ ರೀತಿ ದೂರಿದಾರರ ಬಂಧುಗಳು ಮತ್ತು ಪರಿಚಿತರನ್ನೂ ನಂಬಿಸಿ ಹಣ ಪಡೆದಿರುವ ಆರೋಪವೂ ಕೇಳಿಬಂದಿದೆ.
ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.







