ಸುಬ್ರಹ್ಮಣ್ಯ (ದಕ್ಷಿಣ ಕನ್ನಡ), ಮಾ. 18: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿಗಾಗಿ ಪ್ರಾಧಿಕಾರ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿರುವ ಕ್ರಮಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಈ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸುವ ಉದ್ದೇಶದಿಂದ ಸುಬ್ರಹ್ಮಣ್ಯದ ಗಣ್ಯರು ಮಂಗಳವಾರ ಸಭೆ ಸೇರಿದರು. ವ್ಯಾಪಾರಿಗಳು, ಲಾಡ್ಜ್ ಮಾಲೀಕರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಾಧಿಕಾರ ರಚನೆಯಾದರೆ ಪರವಾನಗಿ ನೀಡುವ ವಿಧಾನ, ಕಟ್ಟಡ ನಿರ್ಮಾಣಕ್ಕೆ ಅನುಮತಿ ಸೇರಿದಂತೆ ಹಲವು ನಿಯಮಗಳು ಬದಲಾಗುವ ಸಾಧ್ಯತೆ ಇದ್ದು, ಕಠಿಣ ನಿಯಮಾವಳಿಗಳು ಜಾರಿಯಾಗುವ ಭೀತಿ ಇದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಈಗಾಗಲೇ ಮಾಸ್ಟರ್ ಪ್ಲ್ಯಾನ್ ಸಮಿತಿಯಡಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ಹೊಸ ಪ್ರಾಧಿಕಾರ ಅಗತ್ಯವಿಲ್ಲ ಎಂದು ಹಲವರು ಅಭಿಪ್ರಾಯಪಟ್ಟರು. ಪ್ರಾಧಿಕಾರ ಜಾರಿಯಾದಲ್ಲಿ ಮುಖ್ಯಮಂತ್ರಿ ಅಥವಾ ಸಚಿವರು ಅಧ್ಯಕ್ಷರಾಗುವ ಸಾಧ್ಯತೆ ಇದ್ದು, ಐಎಎಸ್ ಮಟ್ಟದ ಅಧಿಕಾರಿಗಳು ಆಡಳಿತ ನಡೆಸಲಿದ್ದಾರೆ. ಇದರಿಂದ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಮೇಲ್ದರ್ಜೆಯ ಅಧಿಕಾರಿಗಳನ್ನು ಸಂಪರ್ಕಿಸುವ ಅವಶ್ಯಕತೆ ಎದುರಾಗಬಹುದು ಎಂದು ತಿಳಿಸಿದ್ದಾರೆ.
ಈ ವಿಷಯದ ಕುರಿತಂತೆ ಮುಂದಿನ ಹಂತದ ಹೋರಾಟ ರೂಪುರೇಷೆ ಕುರಿತು ಚರ್ಚಿಸಲು ಮಾರ್ಚ್ 19ರಂದು ಮತ್ತೊಂದು ಸಾರ್ವಜನಿಕ ಸಭೆ ನಡೆಸಲು ನಿರ್ಧರಿಸಲಾಗಿದೆ.
ಸಭೆಯಲ್ಲಿ ಶಿವರಾಮ ರೈ, ರವೀಂದ್ರ ಕುಮಾರ್ ರುದ್ರಪಾದ, ರಾಜೇಶ್ ಎನ್.ಎಸ್., ಪವನ್ ಕುಮಾರ್ ಎಂ.ಡಿ., ಎಚ್.ಎಲ್. ವೆಂಕಟೇಶ್, ದಿನೇಶ್, ಸುಬ್ರಹ್ಮಣ್ಯ ರಾವ್, ರವೀಂದ್ರ ಸುಬ್ರಹ್ಮಣ್ಯ, ಶೇಖರ ಬಿಲದ್ವಾರ, ವೆಂಕಟೇಶ್ ಶರ್ಮ, ಭವಿಷ್ ಅಯ್ಯೆಟ್ಟಿ, ಅನಿಲ್ ಡಿಸೋಜ, ಕಾರ್ತಿಕ್ ಕಾಮತ್, ಭರತ್ ದೇವರಗದ್ದೆ, ಶೇಷಕುಮಾರ್, ದೀಪಕ್ ಹಾಗೂ ಸತೀಶ್ ಕೂಜುಗೋಡು ಉಪಸ್ಥಿತರಿದ್ದರು.






