ಉಡುಪಿ, ಮಾ.13: ನಗರದ ಸಾರ್ವಜನಿಕ ಸ್ಥಳದಲ್ಲಿ ಉಗ್ರ ವರ್ತನೆ ತೋರಿಸಿ ಭಯದ ವಾತಾವರಣ ಸೃಷ್ಟಿಸಿದ ಅಪರಿಚಿತ ಯುವಕನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ವಶಕ್ಕೆ ಪಡೆದು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿದ ಘಟನೆ ಬುಧವಾರ ನಡೆದಿದೆ.
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಈ ಯುವಕನಿಗೆ ಆಸ್ಪತ್ರೆಯ ಮನೋರೋಗ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಾಖಲು ಪ್ರಕ್ರಿಯೆ ವೇಳೆ ಯುವಕನು ತನ್ನ ಹೆಸರು ಗೌರೀಶ (30), ತಂದೆ ಓಂಕಾರೇಶಪ್ಪ, ಮೂಲತಃ ಶಿವಮೊಗ್ಗ ನಿವಾಸಿ ಎಂದು ತಿಳಿಸಿದ್ದಾನೆ ಎಂದು ತಿಳಿದುಬಂದಿದೆ.
ಯುವಕನ ವಾರಸುದಾರರು ಅಥವಾ ಪರಿಚಿತರಾದವರು ತಕ್ಷಣವೇ ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ಸಂಪರ್ಕಿಸುವಂತೆ ಸಂಬಂಧಪಟ್ಟವರು ಮನವಿ ಮಾಡಿದ್ದಾರೆ.







