ಕಾಪು, ಮಾ.10: ಅಲ್ಪ ಕಾರಣದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ಕಾಪು ತಾಲೂಕಿನ ಮಣಿಪುರ ಗ್ರಾಮದ ಅರಬಿ ಕೆನರಾಡಿ ಪ್ರದೇಶದಲ್ಲಿ ಮಾ.9ರ ರಾತ್ರಿ ಸಂಭವಿಸಿದೆ.
ಹತ್ಯೆಗೆ ಒಳಗಾದ ಮಹಿಳೆಯನ್ನು ಕೆನರಾಡಿ ನಿವಾಸಿ ವನಜಾ ಪೂಜಾರ್ತಿ (co) ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಸ್ಥಳೀಯರಾದ ವಲೇರಿಯನ್ ಮೆಂಡೊನ್ಸಾ ಮತ್ತು ಪ್ರವೀಣ್ ಮೆಂಡೊನ್ಸಾ ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಲೇರಿಯನ್ ಮೆಂಡೊನ್ಸಾ ಹಾಗೂ ಪ್ರವೀಣ್ ಮೆಂಡೊನ್ಸಾ ಅಣ್ಣ-ತಮ್ಮಂದಿರ ಮಕ್ಕಳಾಗಿದ್ದು, ವನಜಾ ಪೂಜಾರ್ತಿ ಅವರೊಂದಿಗೆ ಆಗಾಗ್ಗೆ ವಲೇರಿಯನ್ ಅವರ ಮನೆಯಲ್ಲಿ ಸೇರಿ ಮದ್ಯಪಾನ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಮಾ.9ರಂದು ಸಂಜೆ ವೇಳೆ ಸಣ್ಣ ವಿಚಾರಕ್ಕೆ ಉಂಟಾದ ವಾಗ್ವಾದ ಹಿನ್ನಲೆಯಲ್ಲಿ, ಇಬ್ಬರು ಆರೋಪಿಗಳು ವನಜಾ ಪೂಜಾರ್ತಿ ಮೇಲೆ ತೀಕ್ಷ್ಣವಾದ ಆಯುಧದಿಂದ ದಾಳಿ ನಡೆಸಿ ಹತ್ಯೆ ಮಾಡಿರುವುದಾಗಿ ಆರೋಪಿಸಲಾಗಿದೆ.
ಘಟನೆ ಮಾ.10ರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ, ಕಾಪು ವೃತ್ತ ಪೊಲೀಸ್ ನಿರೀಕ್ಷಕ ಅಝತ್ ಅಲಿ, ಕಾಪು ಠಾಣೆಯ ಎಸ್ಐ ತೇಜಸ್ವಿ ಹಾಗೂ ಮಣಿಪಾಲ ಕೆಎಂಸಿ ಫೋರೆನ್ಸಿಕ್ ತಜ್ಞರು, ಸೋಕೋ ತಂಡ, ಶ್ವಾನ ದಳ ಮತ್ತು ಫಿಂಗರ್ಪ್ರಿಂಟ್ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.






