ಉಡುಪಿ, ಮಾ.9: ನಗರದ ಸಿಟಿ ಬಸ್ ನಿಲ್ದಾಣದ ಬಳಿ ದಿಕ್ಕುತೋಚದೆ ಅಸಹಾಯಕ ಸ್ಥಿತಿಯಲ್ಲಿ ತಿರುಗಾಡುತ್ತಿದ್ದ ಅಪರಿಚಿತ ವೃದ್ಧೆಯನ್ನು ರಕ್ಷಿಸಿದ ಘಟನೆ ಸೋಮವಾರ ನಡೆದಿದೆ.
ವೃದ್ಧೆಯ ಅಸಹಾಯಕ ಸ್ಥಿತಿಯನ್ನು ಗಮನಿಸಿದ ಗಣೇಶ್ ಸುವರ್ಣ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಒಳಕಾಡು ಅವರು ವೃದ್ಧೆಯನ್ನು ಸುರಕ್ಷಿತವಾಗಿ ರಕ್ಷಿಸಿ, ಉದ್ಯಾವರದಲ್ಲಿರುವ ಹಿರಿಯ ನಾಗರಿಕರ ಕನಸಿನ ಮನೆ ಆಶ್ರಮದಲ್ಲಿ ತಾತ್ಕಾಲಿಕವಾಗಿ ಪುನರ್ವಸತಿ ಕಲ್ಪಿಸಿದರು.
ಈ ಕಾರ್ಯಾಚರಣೆಗೆ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಕನಸಿನ ಮನೆಯ ಮೇಲ್ವಿಚಾರಕಿ ಅಕ್ಷತಾ ಅವರು ಸಹಕಾರ ನೀಡಿದರು.
ವೃದ್ಧೆ ತನ್ನ ಹೆಸರು ವಿಜಯ ಶೆಣೈ ಎಂದು ಮಾತ್ರ ತಿಳಿಸಿದ್ದು, ಇತರ ವಿವರಗಳನ್ನು ನೀಡಲು ಸಾಧ್ಯವಾಗಿಲ್ಲ. ಅವರ ವಾರಸುದಾರರು ಅಥವಾ ಪರಿಚಿತರು ಉದ್ಯಾವರದ ಹಿರಿಯ ನಾಗರಿಕರ ಕನಸಿನ ಮನೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.







