ಕಾರ್ಕಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಒಟ್ಟಾರೆ “ಬೃಹತ್ ಶೂನ್ಯ”ವಾಗಿದೆ ಎಂದು ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಹೊಸ ಹೊಸ ಪದಪುಂಜಗಳನ್ನು ಬಳಸುವಲ್ಲಿ ಆದ್ಯತೆ ನೀಡಿದ್ದರೂ, ಹೊಸ ಯೋಜನೆಗಳನ್ನು ಸೃಷ್ಟಿಸುವಲ್ಲಿ ಆಸಕ್ತಿ ತೋರಿಸಿಲ್ಲ. ಬಜೆಟ್ ಪೂರ್ವಪೀಠಿಕೆಯಲ್ಲಿ ಈ ಬಾರಿಯ ಬಜೆಟ್ ಅನ್ನು “11G” ಮಾದರಿಯಲ್ಲಿ ರೂಪಿಸಲಾಗಿದೆ ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ. ಆದರೆ ಇಲಾಖಾವಾರು ವಿಶ್ಲೇಷಣೆ ಮಾಡಿದಾಗ ಅದು “11G” ಬಜೆಟ್ ಅಲ್ಲ, ಬದಲಾಗಿ “11 ಸುಳ್ಳುಗಳ ಬಜೆಟ್” ಎಂದು ಹೇಳಬಹುದಾಗಿದೆ ಎಂದು ಸುನಿಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಾಣದ ಮಟ್ಟಿಗೆ ಸಾಲದ ಹೊರೆ ಈ ಬಜೆಟ್ ಮೂಲಕ ಹೆಚ್ಚಾಗಿದೆ. ಬರೋಬ್ಬರಿ ₹1,32,000 ಕೋಟಿ ಸಾಲ ಮಾಡಲಾಗಿದ್ದು, ರಾಜ್ಯದ ಒಟ್ಟು ಹೊಣೆಗಾರಿಕೆ ₹8,24,389 ಕೋಟಿಗೆ ಏರಿಕೆಯಾಗಿದೆ. ಇದಲ್ಲದೆ ಬಂಡವಾಳ ವೆಚ್ಚವನ್ನು ₹74,682 ಕೋಟಿಗೆ ಇಳಿಕೆ ಮಾಡಲಾಗಿದೆ. ಈ ಅಂಶಗಳನ್ನು ಗಮನಿಸಿದರೆ ಇದು ವಿತ್ತೀಯ ಶಿಸ್ತಿನ ಪರಿಮಿತಿಯೊಳಗಿನ ಆಯವ್ಯಯ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯದ ದೂರಗಾಮಿ ಭವಿಷ್ಯವನ್ನು ಪರಿಗಣಿಸಿದರೆ, ಸಿದ್ದರಾಮಯ್ಯ ಅವರು ಕರ್ನಾಟಕವನ್ನು ತೀವ್ರ ಸಾಲದ ಮಡುವಿನಲ್ಲಿ ನೂಕುವ ದಾರಿಯಲ್ಲಿ ಸಾಗುತ್ತಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದರು.
ಕರಾವಳಿ ವಿರೋಧಿ ಬಜೆಟ್
ಬಜೆಟ್ನ ಪ್ರತಿಪುಟವನ್ನು ಪರಿಶೀಲಿಸಿದರೂ ಕರಾವಳಿ ಭಾಗದ ಅಭಿವೃದ್ಧಿಗೆ ಪೂರಕವಾದ ಯಾವುದೇ ಪ್ರಮುಖ ಯೋಜನೆಗಳು ಕಾಣುತ್ತಿಲ್ಲ. ಹೊಸ ವೈದ್ಯಕೀಯ ಕಾಲೇಜು ಬೇಡಿಕೆ ಈಡೇರಿಲ್ಲ. ಪಶ್ಚಿಮ ವಾಹಿನಿ ಯೋಜನೆಗಳಿಗೆ ಸಹ ಸಮರ್ಪಕ ಅನುದಾನ ನೀಡಿಲ್ಲ. ನಗರಾಭಿವೃದ್ಧಿ ಯೋಜನೆಗಳು ಬೆಂಗಳೂರು ನಗರವನ್ನು ಮೀರದೇ ಇರುವುದರಿಂದ “Beyond ಬೆಂಗಳೂರು ” ಎಂಬ ಸರ್ಕಾರದ ಬದ್ಧತೆ ಪ್ರಶ್ನಾರ್ಹವಾಗಿದೆ ಎಂದು ಅವರು ಹೇಳಿದರು.
ಕರಾವಳಿಯ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಕೈಗಾರಿಕಾ ಕ್ಲಸ್ಟರ್, ಪ್ರವಾಸೋದ್ಯಮಕ್ಕೆ ಉತ್ತೇಜನ, ಐಟಿ ಹೂಡಿಕೆಗಳ ಬಗ್ಗೆ ಸ್ಪಷ್ಟ ನಿರ್ಧಾರಗಳನ್ನು ನಾವು ನಿರೀಕ್ಷಿಸಿದ್ದೆವು. ಆದರೆ ಈ ಬಜೆಟ್ನಲ್ಲಿ ಅವುಗಳ ಕುರಿತು ಯಾವುದೇ ಸ್ಪಷ್ಟತೆ ಕಾಣಿಸಿಲ್ಲ. ಹೀಗಾಗಿ ಈ ಬಜೆಟ್ ಕರಾವಳಿ ವಿರೋಧಿಯೂ ಆಗಿದೆ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.
ಒಟ್ಟಾರೆಯಾಗಿ ಸಿದ್ದರಾಮಯ್ಯನವರ ಈ ಬಾರಿಯ ಬಜೆಟ್ “playing to the gallery” ಎಂಬ ಅಪ್ರೋಚ್ನಲ್ಲೇ ರೂಪಿತವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.







