ಉಡುಪಿ, ಮಾ. 04:ಶ್ರೀ ಪುತ್ತಿಗೆ ಮಠದ ಪರಮಪೂಜ್ಯ ಪೀಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಗುರುವರ್ಯರಾದ ಅಭಿನವ ಋಷ್ಯಶೃಂಗ, ಅಕ್ಷರಕೋಟಿ ಕೃಷ್ಣಮಂತ್ರೋಪಾಸಕ, ಯತಿಕುಲ ಚಕ್ರವರ್ತಿ, ತಪೋಚಕ್ರವರ್ತಿ ಮುಂತಾದ ಅನೇಕ ಬಿರುದಗಳಿಂದ ಅಲಂಕರಿಸಲ್ಪಟ್ಟ ಶತಾಯುಷಿ ಅನಂತಶ್ರೀ ವಿಭೂಷಿತ ಶ್ರೀ ಸುಧೀಂದ್ರ ತೀರ್ಥ ಮಹಾಸ್ವಾಮಿಗಳ ಆರಾಧನಾ ಮಹೋತ್ಸವವು ಭಕ್ತಿಭಾವಪೂರ್ಣವಾಗಿ ಆಚರಿಸಲಾಯಿತು.

ಈ ಪವಿತ್ರ ಸಂದರ್ಭದ ಅಂಗವಾಗಿ ಉಡುಪಿ ಶ್ರೀಕೃಷ್ಣ ಮಠದ ಸಮುಚ್ಚಯದಲ್ಲಿರುವ ಅವರ ವೃಂದಾವನದಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಶ್ರೀ ಶೀರೂರು ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿ ಗುರುಸ್ಮರಣೆಯಲ್ಲಿ ತೊಡಗಿದರು. ವೇದಘೋಷ, ಭಜನ, ಪೂಜಾ ವಿಧಿವಿಧಾನಗಳೊಂದಿಗೆ ಆರಾಧನಾ ಕಾರ್ಯಕ್ರಮವು ನೆರವೇರಿತು.

ಶ್ರೀಮದಾಚಾರ್ಯರ ಸನ್ಯಾಸಿ ಶಿಷ್ಯವರ್ಗದಲ್ಲಿ ದಿಟ್ಟ ವ್ಯಕ್ತಿತ್ವ ಮತ್ತು ಅಪಾರ ಜ್ಞಾನದಿಂದ ಖ್ಯಾತರಾದ ಶ್ರೀಮದುಪೇಂದ್ರತೀರ್ಥರ ಪೀಠವಾದ ಶ್ರೀ ಪುತ್ತಿಗೆ ಮಠದ ಯತಿಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದ ಮಹಾತಪಸ್ವಿ ಶ್ರೀ ಸುಧೀಂದ್ರ ತೀರ್ಥರು ಉಡುಪಿಯ ಅಷ್ಟಮಠಗಳ ಯತಿಸಂತತಿಯಲ್ಲಿ ಅಪೂರ್ವ ಕೀರ್ತಿಯನ್ನು ಗಳಿಸಿದ್ದರು. ಶಾಪಾನುಗ್ರಹ ಸಮರ್ಥರಾದ ಅವರು, ಶ್ರೀಕೃಷ್ಣ ದೇವರಿಗೆ ಸನಕಾದಿಮುನಿಗಳು ಪೂಜಿಸುವ ದಿವ್ಯ ದೃಶ್ಯವನ್ನು ಸಾಕ್ಷಾತ್ಕಾರವಾಗಿ ಕಂಡು, ಅವರ ಅನುಗ್ರಹದಿಂದ ಶ್ರೀಕೃಷ್ಣನ ಸಾಕ್ಷಾತ್ಕಾರವನ್ನು ಪಡೆದ ಮಹಾನುಭಾವರೆಂದು ಪರಿಗಣಿಸಲ್ಪಟ್ಟಿದ್ದಾರೆ.
ಶತಾಯುಷಿಯಾಗಿ ನಾಲ್ಕು ಬಾರಿ ಶ್ರೀಕೃಷ್ಣ ಪೂಜೆಯನ್ನು ನೆರವೇರಿಸಿದ ವಿರಳ ಮಹನೀಯರಾಗಿದ್ದ ಅವರು, ವೃಂದಾವನಸ್ಥರಾದ ಬಳಿಕವೂ ಭಕ್ತರ ಆಶೀರ್ವಾದಕರೆಂದು ನಂಬಲ್ಪಟ್ಟಿದ್ದಾರೆ. ಋಷ್ಯಶೃಂಗ ಅವತಾರವೆಂದು ಪ್ರಸಿದ್ಧರಾದ ಶ್ರೀ ಸುಧೀಂದ್ರ ತೀರ್ಥ ಶ್ರೀಪಾದರ ಆರಾಧನಾ ಪರ್ವದ ಅಂಗವಾಗಿ, ಅವರ ಅಂತರ್ಯಾಮಿಯಾದ ಪ್ರಾಣಪತಿ ಭೈಷ್ಮೀಸತ್ಯಾಸಮೇತ ವೀರವಿಠಲಾಭಿನ್ನ ರೂಪ್ಯಪೀಠಪುರಾಧೀಶನ ಚರಣಕಮಲಗಳಿಗೆ ಭಕ್ತರು ಅನಂತ ಪ್ರಣಾಮಗಳನ್ನು ಸಲ್ಲಿಸಿದರು.






