ಸುಳ್ಯ, ಮಾ. 4: ತಾಲೂಕಿನ ಅರಂತೋಡು ಗ್ರಾಮದ ಅಡ್ತಲೆಯ ನೆಕ್ಕರೆ ಪ್ರದೇಶದಲ್ಲಿ ರಾತ್ರಿ ಕಾಡಾನೆಗಳ ಹಾವಳಿ ಮತ್ತೆ ಮರುಕಳಿಸಿದೆ. ಕಾಡಾನೆಗಳು ಗ್ರಾಮಕ್ಕೆ ನುಗ್ಗಿ ಕೃಷಿ ಭೂಮಿಗೆ ಹಾನಿ ಉಂಟುಮಾಡಿದ ಘಟನೆ ವರದಿಯಾಗಿದೆ.
ಸ್ಥಳೀಯರಾದ ದಾಸಪ್ಪ ಅವರ ತೋಟಕ್ಕೆ ನುಗ್ಗಿದ ಆನೆಗಳ ಗುಂಪು ಬಾಳೆ ಹಾಗೂ ತೆಂಗಿನ ಮರಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ ಎನ್ನಲಾಗಿದೆ. ಬೆಳಿಗ್ಗೆ ತೋಟಕ್ಕೆ ತೆರಳಿದಾಗ ಬೆಳೆ ಹಾನಿ ಕಂಡು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಅಡ್ತಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಸಂಚರಣೆ ಹೆಚ್ಚಳ ಕಂಡುಬಂದಿದ್ದು, ಪದೇಪದೇ ಕೃಷಿ ಬೆಳೆಗಳಿಗೆ ಹಾನಿಯಾಗುತ್ತಿರುವುದು ರೈತರನ್ನು ಸಂಕಷ್ಟಕ್ಕೀಡಾಗಿಸಿದೆ. ಈ ಕುರಿತು ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.







