ಮಂಗಳೂರು, ಫೆ. 25: ಪಾಂಡೇಶ್ವರ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಕ್ಷ ಹಾಗೂ ಪ್ರಾಮಾಣಿಕ ಸಿಬ್ಬಂದಿ ಕಾರ್ತಿಕ್ ಅವರಿಗೆ 2025ನೇ ಸಾಲಿನ ಮಾನ್ಯ ಮುಖ್ಯಮಂತ್ರಿ ಅವರ ಚಿನ್ನದ ಪದಕ ಲಭಿಸಿದೆ.
ಮಂಗಳೂರು ಕುಂಪಲ ನಿವಾಸಿಯಾದ ಕಾರ್ತಿಕ್ ಅವರು 2008ರಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಸೇರ್ಪಡೆಗೊಂಡು ಬೆಂಗಳೂರಿನಲ್ಲಿ ತರಬೇತಿ ಪಡೆದಿದ್ದರು. ಬಳಿಕ ಮಡಿಕೇರಿ, ಗೋಣಿಕೊಪ್ಪ, ಉಡುಪಿ ಮತ್ತು ಬೆಳ್ತಂಗಡಿ ಸೇರಿದಂತೆ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಪಾಂಡೇಶ್ವರ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
18 ವರ್ಷಗಳ ನಿರಂತರ ಸೇವೆಯಲ್ಲಿ ಅನೇಕ ಅಪಾಯಕರ ಪರಿಸ್ಥಿತಿಗಳಲ್ಲಿ ಧೈರ್ಯ ಮತ್ತು ಸಮರ್ಪಣೆಯಿಂದ ಕಾರ್ಯನಿರ್ವಹಿಸಿರುವ ಅವರಿಗೆ ಹಲವು ನಗದು ಬಹುಮಾನಗಳು ಲಭಿಸಿವೆ. ಅವರ ದಕ್ಷತೆ, ಪ್ರಾಮಾಣಿಕತೆ ಹಾಗೂ ಕर्तವ್ಯನಿಷ್ಠೆಯನ್ನು ಗುರುತಿಸಿ 2025ನೇ ಸಾಲಿನ ಮುಖ್ಯಮಂತ್ರಿ ಅವರ ಚಿನ್ನದ ಪದಕಕ್ಕೆ ಆಯ್ಕೆ ಮಾಡಲಾಗಿದೆ.
ಕಾರ್ತಿಕ್ ಅವರ ಸಾಧನೆಗೆ ಸಹೋದ್ಯೋಗಿಗಳು ಮತ್ತು ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.







