ಉಡುಪಿ, ಫೆ.20: ಕಲ್ಸಂಕ ಸಮೀಪದ ಕನಕ ಮಹಲ್ ಎಂದು ಪರಿಚಿತವಾಗಿರುವ ಪಾಳುಬಿದ್ದ ಕಟ್ಟಡದ ಬಳಿಯ ತೋಡಿದ ಕೊಳವೆಬಾವಿ ಮುಚ್ಚಳವಿಲ್ಲದೆ ಬಿಟ್ಟಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಶ್ರೀ ಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಈ ಪ್ರದೇಶದ ಮೂಲಕವೇ ಸಾಗುತ್ತದೆ.
ಈ ಪ್ರದೇಶದಲ್ಲಿ ಹೊರರಾಜ್ಯಗಳಿಂದ ವಲಸೆ ಬಂದ ಆಟಿಕೆ ಮಾರಾಟಗಾರರ ಕುಟುಂಬಗಳು ತಾತ್ಕಾಲಿಕವಾಗಿ ನೆಲೆಸಿದ್ದು, ಅವರ ಸಣ್ಣಪುಟ್ಟ ಮಕ್ಕಳು ಕೊಳವೆಬಾವಿಯ ಸುತ್ತಮುತ್ತ ಆಟವಾಡುತ್ತಿರುವುದು ಗಮನಕ್ಕೆ ಬಂದಿದೆ. ಮುಚ್ಚಳವಿಲ್ಲದೆ ತೆರೆದಿರುವ ಕೊಳವೆಬಾವಿಯಿಂದ ಯಾವುದೇ ಕ್ಷಣದಲ್ಲಿ ಅಪಘಾತ ಸಂಭವಿಸುವ ಭೀತಿ ವ್ಯಕ್ತವಾಗುತ್ತಿದೆ.
ಆದ್ದರಿಂದ ತಕ್ಷಣ ಜಿಲ್ಲಾಡಳಿತ ಹಾಗೂ ನಗರಾಡಳಿತ ಕ್ರಮ ಕೈಗೊಂಡು ಕೊಳವೆಬಾವಿಗೆ ಸುರಕ್ಷಿತ ಮುಚ್ಚಳ ಅಳವಡಿಸಬೇಕು ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಒತ್ತಾಯಿಸಿದ್ದಾರೆ.







