ಬೆಂಗಳೂರು, ಫೆ. 20: ಸಾಮಾನ್ಯವಾಗಿ ಕುಟುಂಬ ಸದಸ್ಯರ ನಡುವೆ ನಡೆಯುವ ಜೀವಂತ ಮೂತ್ರಪಿಂಡ ದಾನವನ್ನು ಮೀರಿಸಿ, ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ವೈದ್ಯೆಯೊಬ್ಬರು ಅಪರಿಚಿತ ಮಹಿಳೆಗೆ ತಮ್ಮ ಕಿಡ್ನಿ ದಾನ ಮಾಡುವ ಮೂಲಕ ಅಪೂರ್ವ ಉದಾಹರಣೆ ನಿರ್ಮಿಸಿದ್ದಾರೆ.
ಹಳೇ ಮದ್ರಾಸ್ ರಸ್ತೆಯ ಮಣಿಪಾಲ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭ್ರೂಣ ಔಷಧ ತಜ್ಞೆ ಡಾ. ತಂಕಮ್ ಸುಬ್ರಹ್ಮಣಿಯನ್ (59) ಅವರು ಆಂಧ್ರಪ್ರದೇಶದ ಸುರೇಖಾ (56) ಅವರಿಗೆ ತಮ್ಮ ಒಂದು ಜೀವಂತ ಮೂತ್ರಪಿಂಡವನ್ನು ಯಶಸ್ವಿಯಾಗಿ ದಾನ ಮಾಡಿದ್ದಾರೆ. ಫೆಬ್ರವರಿ 10ರಂದು ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ. ಕರ್ನಾಟಕದಲ್ಲಿ ಅಪರಿಚಿತರಿಗೆ ಜೀವಂತ ಕಿಡ್ನಿ ದಾನ ಮಾಡಿದ ವಿರಳ ಪ್ರಕರಣವೆಂದು ಇದು ಗಮನ ಸೆಳೆದಿದೆ.
ದಶಕದ ಸಂಕಲ್ಪ ಸಾಕಾರ
ಕಳೆದ ಹತ್ತು ವರ್ಷಗಳಿಂದಲೇ ಅಗತ್ಯವಿರುವವರಿಗೆ ಕಿಡ್ನಿ ದಾನ ಮಾಡಬೇಕೆಂಬ ಸಂಕಲ್ಪ ಹೊಂದಿದ್ದ ಡಾ. ತಂಕಮ್, 2016ರಿಂದಲೇ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿದ್ದರು. ಅಪರಿಚಿತರಿಗೆ ಅಂಗಾಂಗ ದಾನ ಮಾಡುವುದಕ್ಕೆ ಇರುವ ಕಟ್ಟುನಿಟ್ಟಿನ ನಿಯಮಗಳನ್ನು ಪೂರೈಸಿ, ಆಸ್ಪತ್ರೆಯ ಕಸಿ ಸಮಿತಿ ಹಾಗೂ ಅಂಗಾಂಗ ದಾನ ಸಮಿತಿಯ ಅನುಮೋದನೆ ಪಡೆದರು. 2025ರಲ್ಲಿ ಕರ್ನಾಟಕ ಹೈಕೋರ್ಟ್ನ ಅನುಮತಿ ಕೂಡ ಪಡೆದು ತಮ್ಮ ಸಂಕಲ್ಪವನ್ನು ಸಾಕಾರಗೊಳಿಸಿದರು.
2022ರಿಂದ ಡಯಾಲಿಸಿಸ್ಗೆ ಒಳಗಾಗಿದ್ದ ಸುರೇಖಾ
2016ರಲ್ಲಿ ದೀರ್ಘಕಾಲದ ಮೂತ್ರಪಿಂಡ ಸಮಸ್ಯೆ ಪತ್ತೆಯಾದ ಸುರೇಖಾ ಅವರು 2022ರಿಂದ ಡಯಾಲಿಸಿಸ್ಗೆ ಒಳಗಾಗುತ್ತಿದ್ದರು. ಇಸ್ಕೆಮಿಕ್ ನೆಫ್ರೋಸ್ಕ್ಲೆರೋಸಿಸ್ನಿಂದ ಬಳಲುತ್ತಿದ್ದ ಅವರು ಮೃತಪಟ್ಟವರ ಅಂಗಾಂಗಕ್ಕಾಗಿ ಕಾಯುತ್ತಿದ್ದರು. ಅಂತಿಮವಾಗಿ ಡಾ. ತಂಕಮ್ ಅವರ ಕಿಡ್ನಿ ಹೊಂದಿಕೆಯಾಗಿದ್ದು, ಯಶಸ್ವಿಯಾಗಿ ಕಸಿ ನಡೆಯಿತು. ತಮ್ಮ ತಾಯಿಯ ಜೀವ ಉಳಿಸಿದ ವೈದ್ಯೆಗೆ ಪುತ್ರ ಭರತ್ ಕೃತಜ್ಞತೆ ಸಲ್ಲಿಸಿದ್ದಾರೆ.
ಕುಟುಂಬದ ಆರಂಭಿಕ ಆತಂಕ
ಅಪರಿಚಿತೆಗೆ ಕಿಡ್ನಿ ದಾನ ಮಾಡುವ ನಿರ್ಧಾರವು ಆರಂಭದಲ್ಲಿ ಕುಟುಂಬದವರಲ್ಲಿ ಆತಂಕ ಹುಟ್ಟಿಸಿತು. ಆದರೆ ಡಾ. ತಂಕಮ್ ಅವರ ದೃಢ ನಿಲುವು ಹಾಗೂ ಸಾಮಾಜಿಕ ಕಳಕಳಿ ಮನಗಂಡು ಕುಟುಂಬವೂ ಬೆಂಬಲ ನೀಡಿತು. ಫೆ.7ರಂದು ತಮ್ಮ 59ನೇ ಹುಟ್ಟುಹಬ್ಬದಂದು ದಾನ ಪ್ರಕ್ರಿಯೆ ಆರಂಭಿಸಲು ಇಚ್ಛಿಸಿದ್ದರೂ, ವೈದ್ಯರ ಲಭ್ಯತೆ ಕೊರತೆಯಿಂದ ಫೆ.10ಕ್ಕೆ ಮುಂದೂಡಲಾಯಿತು.
‘ಒನ್ ಡೋನರ್ ಮೆನಿ ಲೈವ್ಸ್’ ಅಭಿಯಾನ
ಯುಕೆಯಲ್ಲಿ ಉನ್ನತ ಶಿಕ್ಷಣ ಪಡೆದಿರುವ ಡಾ. ತಂಕಮ್, 2005ರಿಂದ ಮಣಿಪಾಲ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮರಣಾನಂತರ ಅಂಗಾಂಗ ದಾನದಿಂದ ಎಂಟು ಮಂದಿಯ ಜೀವ ಉಳಿಸಬಹುದೆಂದು ಅವರು ತಿಳಿಸಿ, ಜೀವಂತವಾಗಿಯೇ ದಾನ ಮಾಡುವುದೂ ಸುರಕ್ಷಿತ ಎಂಬ ಸಂದೇಶ ಸಾರಿದ್ದಾರೆ. ತಮ್ಮ ಸಹೋದರನೊಂದಿಗೆ ‘ಒನ್ ಡೋನರ್ ಮೆನಿ ಲೈವ್ಸ್’ ಎಂಬ ವೆಬ್ಸೈಟ್ ಆರಂಭಿಸಿ, ಅಂಗಾಂಗ ದಾನ ಪ್ರತಿಜ್ಞೆಗೆ ಜನರನ್ನು ಪ್ರೇರೇಪಿಸುತ್ತಿದ್ದಾರೆ.
ಮಣಿಪಾಲ ಆಸ್ಪತ್ರೆಯ ಅಧ್ಯಕ್ಷ ಡಾ. ಎಚ್. ಸುದರ್ಶನ್ ಬಲ್ಲಾಳ್ ಅವರು ಡಾ. ತಂಕಮ್ ಅವರ ಈ ಕಾರ್ಯವನ್ನು ಶ್ಲಾಘಿಸಿ, ಯೆಮೆನ್ ಹಾಗೂ ಅಫ್ಘಾನಿಸ್ತಾನದಲ್ಲೂ ವೈದ್ಯಕೀಯ ಸೇವೆ ಸಲ್ಲಿಸಿರುವ ಅವರ ಸಮಾಜಪರ ಮನೋಭಾವ ಮಾದರಿಯಾಗಿದೆ ಎಂದು ಹೇಳಿದ್ದಾರೆ.







