ಮಂಗಳೂರು, ಫೆ. 18: ಶಿವರಾತ್ರಿ ಮಹೋತ್ಸವದ ಅಂಗವಾಗಿ ರಥ ಬೀದಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಸುರಮಣಿ ಮಹಾಲಕ್ಷ್ಮಿ ಶೆಣೈ ಅವರ ಭಕ್ತಿರಸದ ಸಂಗೀತ ಕಾರ್ಯಕ್ರಮ ಭಕ್ತರ ಮನಸೆಳೆಯುವಂತೆ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ತಬಲಾದಲ್ಲಿ ವಿಘ್ನೇಶ್ ಪ್ರಭು (ಮೂಡಬಿದ್ರೆ), ಹಾರ್ಮೋನಿಯಂನಲ್ಲಿ ವಿಶ್ವನಾಥ್ ಭಟ್ (ಎಣ್ಣೆಹೊಳೆ) ಹಾಗೂ ತಾಳದಲ್ಲಿ ರಘುನಂದನ್ ಕಾಮತ್ ಸಹಕಾರ ನೀಡಿದರು. ಕಲಾವಿದರ ಸಮನ್ವಯದಿಂದ ಸಂಗೀತ ಸಾಯಂಕಾಲ ಭಕ್ತಿಭಾವದ ವಾತಾವರಣವನ್ನು ಮತ್ತಷ್ಟು ಗಾಢಗೊಳಿಸಿತು.

ದೇವಸ್ಥಾನದ ಆಡಳಿತ ಮೊಕ್ತೇಸರರಾದ ಭವಾನಿ ಶಂಕರ್ ಕಂಡ್ಲೂರು, ವಿನೋದ್ ಬೊಂಡಾಲ್, ಅರುಣ್ ಪಂಡಿತ್ ಸೇರಿದಂತೆ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ -ಅರುಣ್ ಭಟ್







