ಬೆಂಗಳೂರು, ಫೆ. 18 : ಕ.ರಾ.ರ. ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ.19, 2026ರಂದು “ಬೆಂಗಳೂರು ಚಲೋ” ಕಾರ್ಯಕ್ರಮಕ್ಕೆ ಕರೆ ನೀಡಿರುವ ಹಿನ್ನೆಲೆ, ಸಾರ್ವಜನಿಕ ಸಾರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಜಂಟಿ ಕ್ರಿಯಾ ಸಮಿತಿ, ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ 01.01.2020ರಿಂದ 28.02.2023ರವರೆಗೆ 38 ತಿಂಗಳ ವೇತನ ಹಿಂಬಾಕಿ ಪಾವತಿ ಹಾಗೂ 01.01.2024ರಿಂದ ನಾಲ್ಕು ವರ್ಷಗಳ ವೇತನ ಒಪ್ಪಂದ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದೆ.
ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸೇವೆಯನ್ನು ಕರ್ನಾಟಕ ಅಗತ್ಯ ಸೇವೆಗಳ ಕಾಯ್ದೆ–2013 (ಕರ್ನಾಟಕ ಕಾಯ್ದೆ ಸಂಖ್ಯೆ 25/2015) ಅಡಿಯಲ್ಲಿ ಒಳಪಡಿಸಿರುವುದರಿಂದ, ನೌಕರರು ಯಾವುದೇ ರೀತಿಯ ಮುಷ್ಕರ ನಡೆಸುವುದು ಕಾನೂನುಬಾಹಿರವಾಗಿದ್ದು, ಇತರರು ಪ್ರಚೋದನೆ ಅಥವಾ ಬೆಂಬಲ ನೀಡುವುದಕ್ಕೂ ಅವಕಾಶವಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಸರ್ಕಾರವು ನಿಗಮಗಳನ್ನು “ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ” ಎಂದು ಘೋಷಿಸಿರುವುದರಿಂದ ಜನಸಾಮಾನ್ಯರಿಗೆ ನಿರಂತರ ಸಾರಿಗೆ ಸೌಲಭ್ಯ ಒದಗಿಸುವುದು ಪ್ರತಿಯೊಬ್ಬ ಅಧಿಕಾರಿ ಹಾಗೂ ನೌಕರರ ಆದ್ಯ ಕರ್ತವ್ಯ ಎಂದು ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಫೆ.19ರಂದು ಯಾವುದೇ ನೌಕರರು “ಬೆಂಗಳೂರು ಚಲೋ” ಕಾರ್ಯಕ್ರಮದಲ್ಲಿ ಭಾಗವಹಿಸದೆ, ತಮ್ಮ ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಲಾಗಿದೆ.
ಮುಂಜಾಗ್ರತಾ ಸೂಚನೆಗಳು:
*ಫೆ.19ರಂದು ಅನುಸೂಚಿ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗದಂತೆ ಅಗತ್ಯ ಕ್ರಮ ಕೈಗೊಳ್ಳುವುದು.
*ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ರಜೆ ಮಂಜೂರು ಮಾಡಬಾರದು.
*ಕರ್ತವ್ಯಕ್ಕೆ ಗೈರುಹಾಜರಾದವರ ವಿರುದ್ಧ “ಕೆಲಸ ಮಾಡದಿದ್ದಾಗ ವೇತನವಿಲ್ಲ” ಎಂಬ ತತ್ವದನ್ವಯ ಕ್ರಮ ಕೈಗೊಳ್ಳುವುದು.
*ವಾರದ ರಜೆ ಹಾಗೂ ದೀರ್ಘಾವಧಿ ರಜೆಯಲ್ಲಿರುವವರಿಗೆ ಈ ಸೂಚನೆ ಅನ್ವಯಿಸುವುದಿಲ್ಲ. ಆದರೆ ಅಗತ್ಯವಿದ್ದಲ್ಲಿ ವಾರದ ರಜೆ ರದ್ದುಗೊಳಿಸಿ ಕರ್ತವ್ಯಕ್ಕೆ ನಿಯೋಜಿಸಬಹುದು.
ಗೈರುಹಾಜರಾದ ನೌಕರರ ಪಟ್ಟಿಯನ್ನು ಘಟಕವಾರು ಸಿದ್ಧಪಡಿಸಿ ಕ್ರಮ ಜರುಗಿಸುವುದು.
ಇದೇ ವೇಳೆ, ರಾಜ್ಯ ಉಚ್ಚ ನ್ಯಾಯಾಲಯದ ವಿಭಾಗೀಯ ನ್ಯಾಯಪೀಠವು 29.01.2004ರಂದು ನೀಡಿದ ತೀರ್ಪಿನ ಪ್ರಕಾರ, ಅನಧಿಕೃತ ಗೈರುಹಾಜರಿಗಾಗಿ ದಿನದ ವೇತನ ಕಡಿತಗೊಳಿಸುವುದರ ಜೊತೆಗೆ ಶಿಸ್ತಿನ ಕ್ರಮ ಕೈಗೊಳ್ಳಬಹುದೆಂದು ಉಲ್ಲೇಖಿಸಿ, ಈ ವಿಚಾರವನ್ನು ನೌಕರರ ಗಮನಕ್ಕೆ ತರಲಾಗಿದೆ.







