ಬ್ರಹ್ಮಾವರ: ಫೆಬ್ರವರಿ 13:ಅಕ್ರಮವಾಗಿ ಮರಳು ಕದ್ದು ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ಲಾರಿ ಚಾಲಕನಿಗೆ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಅಂಪಾರಿನ ದಕ್ಕೆಯಿಂದ ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಮರಳನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಲಾರಿಯ ಚಾಲಕ ವಸಂತ್ ಅವರನ್ನು ಬಂಧಿಸಿ ಉಡುಪಿಯ ಪ್ರಥಮ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಹಾಗೂ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಆರೋಪಿಯ ವಿರುದ್ಧ ಲಘು ಸಂಘಟಿತ ಅಪರಾಧ ಆರೋಪದಡಿ ಬಿ.ಎನ್.ಎಸ್.ಎಸ್ ಕಾಯ್ದೆಯ 112, 303(2) ಹಾಗೂ ಎಂಎಂಡಿಆರ್ ಕಾಯ್ದೆಯ ಸೆಕ್ಷನ್ 4(1A) ಮತ್ತು ಇತರೆ ವಿಧಿಗಳಡಿ ಜಾಮೀನು ರಹಿತ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಆರೋಪಿಯ ಪರವಾಗಿ ಉಡುಪಿಯ ನ್ಯಾಯವಾದಿ ಆರೂರು ಸುಕೇಶ್ ಶೆಟ್ಟಿ ವಾದ ಮಂಡಿಸಿದರು.






