ಉಡುಪಿ, ಫೆ. 13: ಜಿಲ್ಲೆಯಲ್ಲಿರುವ ಸುಮಾರು 700 ಸಹಕಾರಿ ಸೊಸೈಟಿ, ಬ್ಯಾಂಕ್ಗಳು ಹಾಗೂ ಹಾಲು ಉತ್ಪಾದಕರ ಸಂಘಗಳ ಕಚೇರಿಗಳಲ್ಲಿ ಸರ್ಕಾರದ ಆದೇಶದಂತೆ ಸಂವಿಧಾನದ ಪೀಠಿಕೆಯನ್ನು ಅಳವಡಿಸುವ ಕಾರ್ಯ ಆರಂಭಗೊಂಡಿದೆ ಎಂದು ನೇತಾಜಿ ಸುಭಾಸ್ ಚಂದ್ರ ಬೋಸ್ ಗ್ರಾಮೀಣ ಸೇವಾ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸಂಗೊಳ್ಳಿ ಸೋಮಣ್ಣ ತಿಳಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರಕಾರದ ನಿರ್ದೇಶನದಂತೆ ಎಲ್ಲ ಜಿಲ್ಲೆಗಳ ಸರಕಾರಿ ಸಂಸ್ಥೆ ಹಾಗೂ ಸರಕಾರಿ ಸಂಸ್ಥೆಗಳಲ್ಲಿ ಸಂವಿಧಾನ ಪೀಠಿಕೆ ಅಳವಡಿಸುವ ಗುತ್ತಿಗೆಯನ್ನು ಸರಕಾರ ನಮ್ಮ ಎನ್ಜಿಒಗೆ ನೀಡಿದೆ. ಅದರಂತೆ ಈಗಾಗಲೇ 24 ಜಿಲ್ಲೆಗಳಲ್ಲಿ ಸಂವಿಧಾನದ ಪೀಠಿಕೆ ಅಳವಡಿಸುವ ಪ್ರಕ್ರಿಯೆ ಪೂರ್ಣಗೊಳಿಸಿದ್ದೇವೆ. ಇದೀಗ ಉಡುಪಿ ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆಗಳು ಹಾಗೂ ಹಾಲು ಉತ್ಪಾದಕರ ಸಂಘಗಳ ಕಚೇರಿಯಲ್ಲಿ ಸಂವಿಧಾನ ಪೀಠಿಕೆ ಅಳವಡಿಸುವ ಪ್ರಕ್ರಿಯೆ ಶುರು ಮಾಡಲಿದ್ದೇವೆ. ಈಗಾಗಲೇ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.ಅವರು ಈ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಜಿಲ್ಲಾಡಳಿತ ನೀಡಿದ ಪಟ್ಟಿಯಂತೆ ನಾವು ಪೀಠಿಕೆ ಪೂರೈಕೆ ಮಾಡಲಿದ್ದೇವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪೀಠಿಕೆ ಯಾವ ಅಳತೆಯಲ್ಲಿ ಇರಬೇಕು ಮತ್ತು ಎಷ್ಟು ಶುಲ್ಕ ನಿಗದಿ ಮಾಡಬೇಕು ಎಂಬುದು ಸರಕಾರವೇ ನಿರ್ಧರಿಸಿದೆ. ಅದರಂತೆ ಸಂಸ್ಥೆಗಳಿಗೆ ಭೇಟಿ ನೀಡಿ, ಮಾಹಿತಿ ಒದಗಿಸಿ ಪೀಠಿಕೆ ಅಳವಡಿಸಲು ಮನವಿ ಮಾಡಲಿದ್ದೇವೆ. ಮುಂದಿನ ನಾಲೈದು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಶೀಘ್ರವೇ ದ.ಕ. ಜಿಲ್ಲೆಯಲ್ಲೂ ಈ ಪ್ರಕ್ರಿಯೆ ಆರಂಭಿಸಲಿದ್ದೇವೆ ಎಂದರು.
ಜಿಲ್ಲಾ ಸಂಯೋಜಕರಾದ ವಿದ್ಯಾಲಕ್ಷ್ಮೀ, ಪಾರ್ಥಸಾರಥಿ, ಅಶ್ವಿನಿ, ವನಿತಾ ಹಾಗೂ ಸುಮಾ ಆಚಾರ್ಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







