ಕೋಟ, ಫೆ. 12: ರಸ್ತೆಯಲ್ಲಿ ಪತ್ತೆಯಾದ ಚಿನ್ನದ ಬಳೆಯನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಅದರ ನಿಜವಾದ ಮಾಲೀಕರಿಗೆ ಮರಳಿಸುವಲ್ಲಿ ಸಹಕರಿಸಿದ ವ್ಯಕ್ತಿಯ ಪ್ರಾಮಾಣಿಕತೆಯನ್ನು ಕೊಂಡಾಡಿ, ಕೋಟ ಪೊಲೀಸ್ ಠಾಣೆಯಲ್ಲಿ ಫೆ.10ರಂದು ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಬ್ರಹ್ಮಾವರ ನಿವಾಸಿ, ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಸುಮಾ ಅವರು ಶಾಲೆಗೆ ತೆರಳುವ ಸಲುವಾಗಿ ಜ.13 ರಂದು ಸ್ಕೂಟರ್ನಲ್ಲಿ ಬ್ರಹ್ಮಾವರದಿಂದ ಕೋಟಕ್ಕೆ ಪ್ರಯಾಣಿಸುವ ವೇಳೆ ಸುಮಾರು 1.50 ಲಕ್ಷ ಮೌಲ್ಯದ ಎರಡು ಪವನ್ ಚಿನ್ನದ ಬಳೆಯನ್ನು ಮಾಬುಕಳ ಸೇತುವೆ ಸಮೀಪ ಕಳೆದುಕೊಂಡಿದ್ದರು. ಈ ಬಗ್ಗೆ ಅವರು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಅದೇ ದಿನ ಬನ್ನಾಡಿ ನಿವಾಸಿ, ನಿವೃತ್ತ ದೈ.ಶಿ.ಶಿಕ್ಷಕ ಪ್ರವೀಣ್ ಹೆಗ್ಡೆಯವರು ಉಡುಪಿಯಿಂದ ಕೋಟಕ್ಕೆ ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ಆಕಸ್ಮಿಕವಾಗಿ ಅವರ ಮೊಬೈಲ್ ಫೋನ್ ಮಾಬುಕಳ ಸೇತುವೆ ಬಳಿ ಬಿದ್ದಿತ್ತು. ಕೆಳಗೆ ಬಿದ್ದ ಮೊಬೈಲ್ ಎತ್ತಿಕೊಳ್ಳುವಾಗ ರಸ್ತೆ ಬದಿಯ ಮಣ್ಣಿನಲ್ಲಿ ಬಿದ್ದಿದ್ದ ಚಿನ್ನದ ಬಳೆ ಅವರ ಗಮನಕ್ಕೆ ಬಂದಿದೆ. ಅದರ ಮಾಲಕರು ಯಾರೆಂದು ತಿಳಿಯದ ಕಾರಣ ಬಳೆಯನ್ನು ಎತ್ತಿಕೊಂಡು ಮನೆಗೆ ತೆರಳಿದ್ದರು. ಅನಂತರ ಒಂದಷ್ಟು ದಿನ ಕಾದರೂ ಕಳೆದುಕೊಂಡವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಹೀಗಾಗಿ ತುರ್ತು ಕೆಲಸದ ನಿಮಿತ್ತ ಪ್ರವೀಣ್ ಅವರು ಬೆಂಗಳೂರಿಗೆ ತೆರಳಿದ್ದು, ಬಳೆಯನ್ನು ಮನೆಯಲ್ಲಿ ಸುರಕ್ಷಿತವಾಗಿ ಇಟ್ಟುಕೊಂಡಿದ್ದರು.
ಈ ನಡುವೆ ಸುಮಾ ಅವರು ಬಳೆ ಕಳೆದುಕೊಂಡ ಕುರಿತು ನೀಡಿದ ದೂರಿನ ಮಾಹಿತಿ ಬೀಟ್ ಪೊಲೀಸ್ ವಾಟ್ಸಪ್ ಗ್ರೂಪ್ನಲ್ಲಿ ನೀಡಲಾಗಿತ್ತು. ಇದನ್ನು ಗಮನಿಸಿದ ಪ್ರವೀಣ್ ಅವರು ಕೋಟ ಪೊಲೀಸ್ ಠಾಣೆಗೆ ತೆರಳಿ ಬಳೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್. ಅವರು ಸುಮಾ ಅವರನ್ನು ಠಾಣೆಗೆ ಕರೆಸಿ ಪ್ರವೀಣ್ ಹೆಗ್ಡೆಯವರ ಕೈಯಿಂದ ಬಲೆ ಹಸ್ತಾಂತರಿಸಿದರು. ಕಳೆದುಕೊಂಡ ಬಲೆ ಹಿಂದಿರುಗಿದಾಗ ಸುಮಾಳ ಸಂತೋಷಕ್ಕೆ ಪರವೇ ಇರಲಿಲ್ಲ.
ಪ್ರವೀಣ್ ಹೆಗ್ಡೆ ಅವರ ಪ್ರಾಮಾಣಿಕತೆಗೆ ಮೆಚ್ವಿ ಠಾಣಾಧಿಕಾರಿಗಳು ಅಭಿನಂದನಾ ಪತ್ರ ನೀಡಿ ಗೌರವಿಸಿದ್ದಾರೆ. ಸಂದರ್ಭದಲ್ಲಿ ಠಾಣೆಯ ಕ್ರೈಂ ವಿಭಾಗದ ಉಪನಿರೀಕ್ಷಕ ಮಾಂತೇಶ್ ಜಾಭಗೌಡ ಹಾಗೂ ಸಿಬಂದಿಗಳಿದ್ದರು.






