ಕೋಟೇಶ್ವರ, ಫೆ. 12 : ಫೆಬ್ರವರಿ 11ರ ಸಂಜೆ ಬೆಳ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಸ್ಎಲ್ಆರ್ಎಂ ಘಟಕಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಭಾರೀ ನಷ್ಟ ಸಂಭವಿಸಿದೆ. ಬೆಂಕಿಯ ತೀವ್ರತೆಗೆ ಕಟ್ಟಡ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಘಟನೆಯ ವೇಳೆ ಘಟಕದಿಂದ ದಟ್ಟ ಹೊಗೆ ಏರುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಗ್ರಾಮ ಪಂಚಾಯತ್ಗೆ ಮಾಹಿತಿ ನೀಡಿದ್ದಾರೆ.
ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಎಸ್. ಚಂದ್ರಶೇಖರ ಶೆಟ್ಟಿ ಸೂರ್ಗೋಳಿ ಹಾಗೂ ಯುವಕರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಸ್ಥಳೀಯ ಟ್ಯಾಂಕರ್ ಮೂಲಕ ನೀರು ತಂದು ಬೆಂಕಿ ನಂದಿಸಲು ಯತ್ನಿಸಿದರು.
ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು, ಕಾರ್ಕಳದಿಂದ ಅಗ್ನಿಶಾಮಕದಳದಿಂದ ಆಗಮಿಸುವುದರೊಳಗೆ ಕಟ್ಟಡ ಸಂಪೂರ್ಣವಾಗಿ ಸುಟ್ಟುಹೋಗಿದೆ. ಎಸ್ಎಲ್ಆರ್ ಎಂ ಘಟಕ ನಿರ್ಜನ ಪ್ರದೇಶದಲ್ಲಿರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ.
ಕಳೆದ 1 ವರ್ಷದಿಂದ ಎಸ್ಎಲ್ಆರ್ ಎಂ ಘಟಕದಲ್ಲಿ ಕಸ ಸಂಗ್ರಹವಾಗಿದ್ದು, ಅದರ ವಿಲೇವಾರಿ ನಡೆದಿಲ್ಲ. ಗ್ರಾ.ಪಂ. ಅನೇಕ ಬಾರಿ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರೂ, ಕಸವನ್ನು ತೆಗೆದುಕೊಂಡು ಹೋಗಲು ಜಿ.ಪಂ. ಸಹಕಾರ ನೀಡಿರಲ್ಲಿಲ್ಲ ಎಂದು ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಎಸ್. ಚಂದ್ರಶೇಖರ ಶೆಟ್ಟಿ ಅವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.







