ಉಡುಪಿ, ಫೆ. 12: ಉದ್ಯಾವರದ ಸಂಧ್ಯಾ ಅವರು ಅಂಬಲಪಾಡಿ ನಿವಾಸಿ ಜಾನೆಟ್ ವಿರುದ್ಧ 2021ರಲ್ಲಿ 45.35 ಲಕ್ಷ ರೂ. ಹಣವನ್ನು ಮಗನಿಗೆ ವೀಸಾ ಮಾಡಿಕೊಡುವ ನೆಪದಲ್ಲಿ ಪಡೆದಿದ್ದು, ನಂತರ ವೀಸಾ ಮಾಡಿಕೊಡದೇ ಹಣ ಮರಳಿ ನೀಡಲು ಅದೇ ಮೊತ್ತದ ಚೆಕ್ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಆದರೆ ಸಲ್ಲಿಸಲಾದ ಚೆಕ್ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಸಂಬಂಧ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶೆ ಶ್ವೇತಾಕ್ಷಿ ಅವರ ಮುಂದೆ ವಿಚಾರಣೆ ನಡೆಯಿತು. ವಿಚಾರಣೆಯ ವೇಳೆ ಸಂಧ್ಯಾ ಅವರು ಹಣವನ್ನು ನಗದು ರೂಪದಲ್ಲಿ ನೀಡಿದ್ದಾಗಿ ಹೇಳಿಕೊಂಡರೂ, ಆ ಹಣ ಪಾವತಿ ಮಾಡಿರುವುದು ಹಾಗೂ ತಮ್ಮ ಬಳಿ ಅಷ್ಟು ಹಣ ಇದ್ದುದು ಕುರಿತು ದೃಢವಾದ ಸಾಕ್ಷ್ಯಗಳನ್ನು ಮಂಡಿಸಲು ವಿಫಲರಾದರು.
ಹೀಗಾಗಿ ಆರೋಪಿಗೆ ಹಣ ನೀಡಿರುವುದರ ಬಗ್ಗೆ ಸಮರ್ಪಕ ಸಾಬೀತು ಲಭ್ಯವಾಗದ ಹಿನ್ನೆಲೆ, ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿ ಆದೇಶ ನೀಡಿದೆ.
ಆರೋಪಿಗೆ ಹಣ ನೀಡಿರುವ ಬಗ್ಗೆ ಸಂಶಯ ಉಂಟಾಗಿರುವಂತೆ ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಆರೋಪಿಗಳು ಯಾವುದೇ ಕಾನೂನು ಬದ್ಧ ಬಾಧ್ಯತೆಗಾಗಿ ಚೆಕ್ ನೀಡಿಲ್ಲ ಎಂದು ಮನಗೊಂಡು ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿ ಆದೇಶಿಸಲಾಗಿದೆ.
ಆರೋಪಿಯ ಪರವಾಗಿ ವೈ.ಟಿ. ರಾಘವೇಂದ್ರ, ಕ್ಲಿಂಟನ್ ಡಿ’ಸಿಲ್ವ, ವಾಣಿಶ್ರೀ ರವಿರಾಜ್ ವಾದಿಸಿದ್ದರು.







