ಮಂಗಳೂರು, ಫೆ. 11:ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಂದ 13.72 ಲಕ್ಷ ರೂ. ವಂಚಿಸಿರುವ ಘಟನೆಗೆ ಸಂಬಂಧಿಸಿ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರು 2025ರ ಸೆಪ್ಟೆಂಬರ್ 2ರಂದು ಆನ್ಲೈನ್ ಟ್ರೇಡಿಂಗ್ ನಡೆಸುತ್ತಿದ್ದ ವೇಳೆ ‘ಬಿ-53 ವೆಲ್ತ್ ಅಕಾಡೆಮಿ’ ಎಂಬ ವಾಟ್ಸ್ಆ್ಯಪ್ ಗುಂಪಿನಲ್ಲಿ ಪ್ರವೀಣ್ ಪಟೇಲ್ ಎಂಬಾತ ಸಂಪರ್ಕ ಸಾಧಿಸಿದ್ದ. ಬಳಿಕ ಟ್ರೇಡಿಂಗ್ ಸಲಹೆ ನೀಡುವುದಾಗಿ ಹೇಳಿ ಪ್ರತಿದಿನ ಷೇರು ಮಾರುಕಟ್ಟೆ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸೆ.17ರಂದು ಶೇರು ಮಾರುಕಟ್ಟೆಯಲ್ಲಿಕ್ಯೂಐಬಿ ಮೂಲಕ ಹೂಡಿಕೆ ಮಾಡಲು ಟೆನ್ ಕೋರ್ ಎಂಬ ಸಂಸ್ಥೆಯ ಮೂಲಕ ಖಾತೆ ತೆರೆಯಬೇಕಾಗುವುದು. ಅದಕ್ಕೆ ಸಹಕರಿಸಲು ಕ್ರಿಸ್ ಹಾರ್ಪರ್ ಎನ್ನುವ ವ್ಯಕ್ತಿಯನ್ನು ಸಂಪರ್ಕಿಸಲು ಆತನ ಮೊಬೈಲ್ ನಂಬರ್ ನೀಡಿದ್ದ. 50 ಸಾವಿರ ರೂ. ಹೂಡಿಕೆಯಿಂದ ಆರಂಭಿಸುವಂತೆ ಹೇಳಿದ್ದಾನೆ. ಅದರಂತೆ ಅ.6ರಂದು 50 ಸಾವಿರ ರೂ. ವರ್ಗಾಯಿಸಿದ್ದಾರೆ. ಬಳಿಕ ಎರಡು ದಿನದಲ್ಲಿ 6,500 ರೂ. ಲಾಭ ಬಂದಿದ್ದು, ಅದರಲ್ಲಿ 1,500 ರೂ. ಒಂದು ಗಂಟೆಯಲ್ಲಿ ಖಾತೆಗೆ ಹಣ ಬಂದಿದೆ.
ಅ.19ರಂದು ಕ್ರಿಸ್ ಹಾರ್ಪರ್ ನನ್ನು ಸಂಪರ್ಕಿಸಿದ್ದು, ಆತ ಸೂಚಿಸಿದ ಖಾತೆಗೆ 1 ಲಕ್ಷ ರೂ. ವರ್ಗಾಯಿಸಿದ್ದಾರೆ. ಹೀಗೆ ಹಂತ ಹಂತವಾಗಿ ಅ.27ರ ವರೆಗೆ ಒಟ್ಟು 13,72,586 ರೂ. ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಹೂಡಿಕೆ ಮಾಡಿದ್ದಾರೆ. ಅನಂತರ ಹೂಡಿಕೆ ಮಾಡಿದ ಹಣವನ್ನು ವಾಪಾಸು ಪಡೆಯಲು ಬೇಡಿಕೆ ಇಟ್ಟಾಗ, ಶೇ.38 ತೆರಿಗೆ ಹಣ ಪಾವತಿ ಮಾಡಬೇಕು ಇಲ್ಲದಿದ್ದಲ್ಲಿ ಹಣ ವಾಪಾಸು ಪಡೆಯಲು ಆಗುವುದಿಲ್ಲಎಂದು ಕಾರಣ ನೀಡಿದ್ದಾರೆ. ಅನುಮಾನ ಬಂದು ವಿಚಾರಿಸಿದಾಗ ಮೋಸ ಹೋಗಿರುವುದು ತಿಳಿದು ಬಂದಿದೆ.
ಈ ಬಗ್ಗೆ ಸುರತ್ಕಲ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.







