ಉಡುಪಿ. ಫೆಬ್ರವರಿ.10 :- ಕಳೆದ ಮೂರುವರೆ ತಿಂಗಳ ಹಿಂದೆ ವಿಶುಶೆಟ್ಟಿ ಅಂಬಲಪಾಡಿಯವರಿಂದ ರಕ್ಷಿಸಲ್ಪಟ್ಟ ಮನೋರೋಗಿ ಜಿಲ್ಲಾಸ್ಪತ್ರೆಯ ದೀರ್ಘಕಾಲದ ಚಿಕಿತ್ಸೆಗೆ ಸ್ಪಂದಿಸಿದ್ದು, ಇದೀಗ ವ್ಯಕ್ತಿಯ ಪತ್ನಿ ದೂರದ ತಮಿಳುನಾಡಿನಿಂದ ಬಂದಿದ್ದು ಪತಿಯನ್ನು ವಶಕ್ಕೆ ಪಡೆದು ಕರೆದುಕೊಂಡು ಹೋದ ಮಾನವೀಯ ಕೆಲಸ ನಡೆದಿದೆ.
ಮನೋರೋಗಿ ರವೀಂದ್ರ (35 ವರ್ಷ ) ರಾಷ್ಟ್ರೀಯ ಹೆದ್ದಾರಿ ಬಳಿ ಮಾನಸಿಕ ಅಸ್ವಸ್ಥನಾಗಿ ಅನಾಗರಿಕ ಬದುಕಿನಲ್ಲಿ ತಿರುಗಾಡುತ್ತಿದ್ದು , ವಿಶುಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.
ಜಿಲ್ಲಾಸ್ಪತರೆಯ ಮನೋರೋಗ ತಜ್ಞ ಡಾ.ವಾಸುದೇವ, ಡಾ.ಸುನಿಲ್ ಆರೋಗ್ಯ ಸಹಾಯಕರು ಹಾಗೂ ಇ ಸಿ ಆರ್ ಸಿ ಸಿಬ್ಬಂದಿಗಳ ಚಿಕಿತ್ಸೆ, ಸಮಾಲೋಚನೆ ಹಾಗೂ ಆರೈಕೆಗೆ ನಿಧಾನವಾಗಿ ಸ್ಪಂದಿಸಿದ ರೋಗಿ ತನ್ನ ಊರಾದ ತಮಿಳು ನಾಡಿನ ಕೆಲವು ಮಾಹಿತಿ ನೀಡಿದ್ದು, ಮಾಹಿತಿಯ ಆಧಾರದಲ್ಲಿ ಡಾ. ವಾಸುದೇವ ರೋಗಿಯ ಸಂಬಂಧಿಕರನ್ನು ನಿರಂತರ ಪ್ರಯತ್ನಿಸಿದಾಗ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ತೀರಾ ಬಡ ಕುಟುಂಬದ ರೋಗಿಗೆ ಪತ್ನಿ ಹಾಗೂ ಎರಡು ಮಕ್ಕಳಿದ್ದಾರೆ. ಪತ್ನಿಯ ಮನವೊಲಿಸಿ ಉಡುಪಿಗೆ ಕರೆತರುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ಇದೀಗ ರೋಗಿಯ ಪತ್ನಿ ಹಾಗೂ ಸಂಬಂಧಿ ಮಹಿಳೆಯೊರ್ವರು ಉಡುಪಿಗೆ ಬಂದಿದ್ದು ಪತಿಯನ್ನು ನೋಡಿ ಸಂತೋಷಗೊಂಡಿದ್ದಾರೆ. ನಾಪತ್ತೆ ಆಗಿ ಆರು ವರುಷಗಳೇ ಆಗಿದೆ ಎಂದು ದುಃಖಿಸಿದರು. ಈಗಿನ ಚಿಕಿತ್ಸಾ ಸಮಯ ಕ್ಷಯರೋಗ ಇರುವುದು ಪತ್ತೆಯಾಗಿದ್ದು, ಕ್ಷಯ ರೋಗದ ಚಿಕಿತ್ಸೆಯೂ ಮುಂದುವರಿದಿದೆ.
ಆಸ್ಪತ್ರೆಯ ವೈದ್ಯರು , ಸಿಬ್ಬಂದಿಯವರು ಹಾಗೂ ವಿಶುಶೆಟ್ಟಿ ಅಂಬಲಪಾಡಿಯವರು ರೋಗಿಯನ್ನು ಪತ್ನಿಯ ವಶ ನೀಡಿದರು. ಈ ಕುಟುಂಬದ ಬಡತನದ ಬಗ್ಗೆ ಮಾಹಿತಿ ಪಡೆದ ವಿಶುಶೆಟ್ಟಿ ಪ್ರಯಾಣದ ದಾರಿ ಖರ್ಚು ರೂ. 4000 ನೀಡಿ ಸಹಕರಿಸಿದರು. ವೈದ್ಯರು, ಸಿಬ್ಬಂದಿಗಳು ಹಾಗೂ ವಿಶುಶೆಟ್ಟಿಯವರಿಗೆ ಪತ್ನಿ ಧನ್ಯವಾದ ಸಮರ್ಪಿಸಿ ಪತಿಯೊಂದಿಗೆ ತಮಿಳುನಾಡು ತೆರಳಿದರು.







