ಉಡುಪಿ ಫೆ. 06:ಪ್ರಸಕ್ತ ಸಾಲಿನ ಬೇಸಗೆಯಲ್ಲಿ ನೀರಿನ ತೀವ್ರತೆ ಉಂಟಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಪಂಚಾಯತ್ವು ಈಗಾಗಲೇ ಎಲ್ಲ ಗ್ರಾಮ ಪಂಚಾಯತ್ಗಳಿಗೆ ಅಗತ್ಯ ಮಾರ್ಗಸೂಚಿಗಳನ್ನು ರವಾನಿಸಿದೆ.
2025ರ ಮುಂಗಾರು ಪೂರ್ವ ಅವಧಿಯಾದ ಎಪ್ರಿಲ್–ಮೇ ತಿಂಗಳಲ್ಲಿ ಸಮರ್ಪಕ ಮಳೆಯಾಗಿದ್ದ ಪರಿಣಾಮ, ಕಳೆದ ಬೇಸಗೆಯಲ್ಲಿ ಜಿಲ್ಲೆಯ ಯಾವುದೇ ಗ್ರಾಮ ಪಂಚಾಯತ್ಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿರಲಿಲ್ಲ. ಆದರೆ ಉಪ್ಪುನೀರು ಪ್ರವೇಶ ಇರುವ ಕೆಲವು ಗ್ರಾಮ ಪಂಚಾಯತ್ಗಳಲ್ಲಿ ಮಾತ್ರ ಎಲ್ಲ ಋತುವಿನಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ನಿರಂತರವಾಗಿ ಕಂಡುಬರುತ್ತಿರುವುದು ಗಮನಾರ್ಹವಾಗಿದೆ.
ಕೆಲವೊಂದು ಗ್ರಾಮ ಪಂಚಾಯತ್ಗಳಲ್ಲಿ ಬೇಸಗೆಯಲ್ಲಿ ನೀರಿನ ಅಭಾವ ಹೆಚ್ಚಿರುತ್ತದೆ. ಹೀಗಾಗಿ ಬೇಸಗೆಯಲ್ಲಿ ನೀರಿನ ಸಮಸ್ಯೆ ಉಂಟಾಗಬಹುದಾದ ಗ್ರಾಮಗಳ ಪಟ್ಟಿಯನ್ನು ಈಗಾಗಲೇ ಜಿಲ್ಲಾ ಪಂಚಾಯತ್ನಿಂದ ಸಿದ್ಧಪಡಿಸಿಕೊಳ್ಳಲಾಗಿದೆ. ಅದರಂತೆ ಮುಂದಿನ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವ ಆಗದಂತೆ ಈಗಿಂದಲೇ ಪರಿಪೂರ್ಣ ಕ್ರಮ ತೆಗೆದುಕೊಳ್ಳಲು ಗ್ರಾಮ ಪಂಚಾಯತ್ಗಳಿಗೆ ಸೂಚನೆ ನೀಡಲಾಗಿದೆ.
ಫೆಬ್ರವರಿ ಮೊದಲು ಅಥವಾ ಎರಡನೇ ವಾರದ ಒಳಗಾಗಿ ಗ್ರಾಮ ಪಂಚಾಯತ್ಗಳ ಜನಪ್ರತಿನಿಧಿಗಳ ಅಧಿಕಾರ ಅವಧಿ ಪೂರ್ಣಗೊಂಡು ಆಡಳಿತಾಧಿಕಾರಿಗಳ ಅಧಿಕಾರ ಆರಂಭವಾಗಲಿ. ಹೀಗಾಗಿ ಬಹುತೇಕ ಗ್ರಾಮ ಪಂಚಾಯತ್ಗಳಲ್ಲಿ ಈಗಾಗಲೇ ಜನಪ್ರತಿನಿಧಿಗಳ ಕೊನೆ ಸಾಮಾನ್ಯ ಸಭೆ ನಡೆದು ಮುಂದಿನ ಬೇಸಗೆಯಲ್ಲಿ ಎದುರಾಗ ಬಹುದಾದ ನೀರಿನ ಸಮಸ್ಯೆ ಸಹಿತ ವಿವಿಧ ರೀತಿಯ ಸಮಸ್ಯೆಗೆ ಪರಿಹಾರದಂತೆ ಅಗತ್ಯವಾಗಿರುವ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಇನ್ನೂ ಫಲ ಕೊಡದ ಜೆಜೆಎಂ
ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ಗಳಲ್ಲೂ ಜಲ್ ಜೀವನ್ ಮಿಷನ್ ಕಾಮಗಾರಿ ನಡೆದಿದೆ.ಕೆಲವು ಕಡೆಗಳಲ್ಲಿ ನಡೆಯುತ್ತಲೇ ಇದೆ. ಆದರೆ ಎಲ್ಲಿಯೂ ಪರಿಪೂರ್ಣವಾಗಿ ನೀರು ಪೂರೈಕೆ ಆಗುತ್ತಿಲ್ಲ. ಕೆಲವು ಗ್ರಾಪಂ.ಗಳಲ್ಲಿ ಮನೆ ಮನೆಗೆ ಅಳವಡಿಸಿರುವ ನಳ್ಳಿಗಳು ತುಕ್ಕು ಹಿಡಿದಿದೆ.ನಳ್ಳಿಯ ಕಟ್ಟೆ ದುರಾವಸ್ಥೆಯಾಗಿದೆ. ಕೋಟ್ಯಂತರ ರೂಪಾಯಿಗಳ ಜೆಜೆಎಂ ಕಾಮಗಾರಿ ಇನ್ನೂ ಫಲ ಕೊಟ್ಟಿಲ್ಲ.
ಪರ್ಯಾಯ ಮಾರ್ಗ
ಜೆಜೆಎಂ ಕಾಮಗಾರಿ ಪೂರ್ಣಗೊಂಡಿದ್ದು ಆ ಪೈಪ್ ಲೈನ್ ಗಳ ಮೂಲಕ ನೀರು ಪೂರೈಕೆ ಆಗದೆ ಇದ್ದಲ್ಲಿ ಹಳೆಯ ಪೈಪ್ ಲೈನ್ ಸಂಪರ್ಕವನ್ನೇ ಇದಕ್ಕೆ ಒದಗಿಸಿ ನೀರು ಪೂರೈಸಲು ಜಿ.ಪಂ. ಚಿಂತನೆ ನಡೆಸಿದೆ. ಅದರಂತೆ ಬೈಂದೂರು ತಾಲೂಕಿನ 9 ಗ್ರಾ.ಪಂ.ಗಳಿಗೆ ಈ ನಿಟ್ಟಿನಲ್ಲಿ ಸೂಚನೆಯನ್ನು ರವಾನೆ ಮಾಡಲಾಗಿದೆ.
ಗ್ರಾ.ಪಂ. ಗಳಿಗೆ ವಾರಾಹಿ ನೀರು
ಉಡುಪಿ ನಗರಕ್ಕೆ ಈಗಾಗಲೇ ವಾರಾಹಿ ನೀರು ಬರುತ್ತಿದೆ. ಅದೇ ಪೈಪ್ ಲೈನ್ ಮಾರ್ಗದ ಗ್ರಾಮ ಪಂಚಾಯತ್ಗಳಿಗೆ ನೀರು ಒದಗಿಸಲು ಕ್ರಮ ತೆಗೆದು ಕೊಳ್ಳಲಾಗಿದೆ. ಅದರಂತೆ ನೀಲಾವರ, ಕೊಕ್ಕರ್ಣೆ, ಕಳತ್ತೂರು ಸಂತೆಕಟ್ಟೆ, ಯಡ್ತಾಡಿ ಸಹಿತ ಹಲವು ಗ್ರಾ.ಪಂ. ಗಳಿಗೆ ಉಡುಪಿ ನಗರದ ವಾರಾಹಿ ಪೈಪ್ ಲೈನ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
ಮುಂದಿನ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಎಲ್ಲ ಗ್ರಾ.ಪಂ.ಗಳಿಗೂ ಈಗಾಗಲೇ ಸೂಚನೆ ನೀಡಲಾಗಿದೆ. ಜೆಜೆಎಂ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿ ಸುವುದು ಹಾಗೂ ಕೆಲವು ಗ್ರಾ.ಪಂ.ಗೆ ಹಳೆ ಪೈಪ್ ಲೈನ್ ನೀರಿನ ಮೂಲಗಳನ್ನೇ ಇದಕ್ಕೆ ಬಳಸಲು ಸೂಚಿಸಲಾಗಿದೆ. ವಾರಾಹಿ ಪೈಪ್ ಲೈನ್ ಮೂಲಕ ಕೆಲವು ಗ್ರಾ.ಪಂ.ಗೆ ನೀರು ಪೂರೈಕೆ ಮಾಡುತ್ತಿದ್ದೇವೆ.
ಡಾ|
ಉದಯ ಕುಮಾರ್ಶೆಟ್ಟಿ,
ಮುಖ್ಯ ಯೋಜನಾಧಿಕಾರಿ, ಜಿ.ಪಂ. ಉಡುಪಿ







