ಬಂಟ್ವಾಳ ಫೆ. 06: ಬಾಳ್ತಿಲ ಗ್ರಾಮದ ಕಾಂಪ್ರಬೈಲು ಪ್ರದೇಶದಲ್ಲಿ ಫೆ. 4ರ ರಾತ್ರಿ ಕಳ್ಳರು ಮನೆಯ ಹಿಂಬಾಗಿಲ ಚಿಲಕ ಮುರಿದು ಒಳನುಗ್ಗಿ, ಕೋಣೆಯ ಕಪಾಟಿನಲ್ಲಿ ಇರಿಸಿದ್ದ ಸುಮಾರು 9 ಪವನ್ ತೂಕದ ₹8 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹5 ಸಾವಿರ ನಗದನ್ನು ದೋಚಿರುವ ಘಟನೆ ನಡೆದಿದೆ.
ಕಾಂಪ್ರಬೈಲು ನಿವಾಸಿ ಸತೀಶ್ ಶೆಣೈ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಫೆ. 4ರಂದು ಸಂಜೆ 6.45ಕ್ಕೆ ಮನೆಮಂದಿ ಮನೆಗೆ ಬೀಗ ಹಾಕಿ ಸ್ಥಳೀಯ ದೇವಸ್ಥಾನದ ಜಾತ್ರೆಗೆ ಹೋಗಿದ್ದ ವೇಳೆ ಘಟನೆ ನಡೆದಿದೆ. ಅವರು ರಾತ್ರಿ 10.30ಕ್ಕೆ ಜಾತ್ರೆ ಮುಗಿಸಿ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಕಳ್ಳರು ಹಿಂಬಾಗಿಲಿನ ಚಿಲಕವನ್ನು ತುಂಡರಿಸಿ ಕಪಾಟಿನ ಬಾಗಿಲನ್ನು ಯಾವುದೋ ಸಾಧನದಿಂದ ಮೀಟಿ ಬಟ್ಟೆಗಳನ್ನು ಚೆಲ್ಲಾಪಿಲ್ಲಿಗೊಳಿಸಿ ಲಾಕರ್ ನಲ್ಲಿ ಸ್ಟೀಲ್ ಡಬ್ಬಿಯಲ್ಲಿದ್ದ 5 ಪವನ್ ತೂಕದ 1 ಹವಳದ ಮಾಲೆ, ಎರಡೂವರೆ ಪವನ್ ತೂಕದ 1 ಮುತ್ತಿನ ಸರ, 1 ಜತೆ ಬೆಂಡೋಲೆ ಹಾಗೂ ಜುಂಕಿ, ಪ್ಲಾಸ್ಟಿಕ್ ತೊಟ್ಟೆಯಲ್ಲಿದ್ದ 5 ಸಾವಿರ ರೂ. ನಗದನ್ನು ದೋಚಿದ್ದಾರೆ.
ಘಟನೆಯ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.







