ಬೆಂಗಳೂರು ಫೆ. 04: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2026–27ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ದೊರೆಯುವ ಕೇಂದ್ರ ಅನುದಾನದಲ್ಲಿ ಭಾರೀ ಏರಿಕೆ ಕಂಡುಬಂದಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕೇಂದ್ರದ ಮಾಹಿತಿ ಪ್ರಕಾರ, 2026–27ನೇ ಸಾಲಿನ ಬಜೆಟ್ ಅಂದಾಜಿನಲ್ಲಿ ಕರ್ನಾಟಕಕ್ಕೆ ಒಟ್ಟು ₹63,049 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಇದಕ್ಕೆ ಹೋಲಿಕೆ ಮಾಡಿದರೆ, 2025–26ನೇ ಸಾಲಿನಲ್ಲಿ ರಾಜ್ಯಕ್ಕೆ ₹16,000 ಕೋಟಿ ಸಹಾಯಧನವನ್ನು ಮಾತ್ರ ನಿಗದಿಪಡಿಸಲಾಗಿತ್ತು.
ಅಲ್ಲದೆ, 2014ರಿಂದ 2026ರವರೆಗೆ ಕರ್ನಾಟಕಕ್ಕೆ ತೆರಿಗೆ ಹಂಚಿಕೆಯ ರೂಪದಲ್ಲಿ ₹3.89 ಲಕ್ಷ ಕೋಟಿ ರೂ. ಹಾಗೂ ವಿವಿಧ ಯೋಜನೆಗಳ ಸಹಾಯಧನವಾಗಿ ₹2.36 ಲಕ್ಷ ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ ವಿಶೇಷ ನೆರವು ಯೋಜನೆಯಡಿ, ರಾಜ್ಯ ಸರ್ಕಾರಗಳಿಗೆ 50 ವರ್ಷಗಳ ಅವಧಿಯ ಬಡ್ಡಿರಹಿತ ಸಾಲದ ರೂಪದಲ್ಲಿ ವಿಶೇಷ ನೆರವು ನೀಡಲಾಗುತ್ತದೆ. ಇದರ ಬಡ್ಡಿ ವೆಚ್ಚವನ್ನು ಕೇಂದ್ರವೇ ಸಂಪೂರ್ಣವಾಗಿ ಭರಿಸುತ್ತದೆ. ಇದು ಹಣಕಾಸು ಆಯೋಗದ ಶಿಫಾರಸುಗಳಿಗೂ ಮೀರಿದ ನೆರವಾಗಿದೆ. 2025 26 (ಜನವರಿ)ಯವರೆಗೆ 2,613 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಇದರಡ 2020ರಿಂದ 2026ರ ಅವಧಿಯಲ್ಲಿ ಒಟ್ಟು 15,945 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ತಿಳಿಸಿದೆ.
2,059 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಕಾರಿಡಾರ್ ಅಭಿವೃದ್ಧಿ:
2025ರ ಜೂನ್ ಅಂತ್ಯದ ಹೊತ್ತಿಗೆ ರಾಜ್ಯದಲ್ಲಿ 8191 ಕಿ.ಮೀ ಗೂ ಹೆಚ್ಚು ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ. ಭಾರತಮಾಲಾ ಪರಿಯೋಜನೆಯಡಿ ನಿರ್ಮಿಸಲಾಗುತ್ತಿರುವ ಅನೇಕ ಗ್ರೀನ್ ಫೀಲ್ಡ್ ಕಾರಿಡಾರ್ಗಳು ಕರ್ನಾಟಕದ ಮೂಲಕ ಹಾದುಹೋಗುತ್ತವೆ. ಬೆಂಗಳೂರು ಚೆನ್ನೈ ಎಕ್ಸ್ಪ್ರೆಸ್ ವೇ, ಬೆಂಗಳೂರು ವರ್ತುಲ ರಸ್ತೆ ಮತ್ತು ಸೋಲಾಪುರ ಕರ್ನೂಲ್ ಚೆನ್ನೈ ಕಾರಿಡಾರ್ಗಳು ಸೇರಿವೆ. ಭಾರತಮಾಲಾ ಯೋಜನೆ ಹಂತ 1ರ ಅಡಿಯಲ್ಲಿ ಕರ್ನಾಟಕದಲ್ಲಿ 63,304 ಕೋಟಿ ರೂ.ಗಳ ಒಟ್ಟು ಬಂಡವಾಳ ವೆಚ್ಚದೊಂದಿಗೆ 2,059 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಕಾರಿಡಾರ್ ಗಳ ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಜನವರಿ 2026ರ ಮಾಹಿತಿಯಂತೆ ರಾಜ್ಯದಲ್ಲಿ ಪಿಎಂ ಜನ ಧನ್ ಯೋಜನೆಯ 2.12 ಕೋಟಿಗೂ ಹೆಚ್ಚು ಖಾತೆಗಳು, ಪಿಎಂ ಜೀವನ ಜ್ಯೋತಿ ವಿಮಾ ಯೋಜನೆಯಡಿ 1.67 ಕೋಟಿಗೂ ಹೆಚ್ಚು ನೋಂದಾಣಿಗಳು, ಪಿಎಂ ಸುರಕ್ಷಾ ವಿಮಾ ಯೋಜನೆಯಡಿ 2.60 ಕೋಟಿಗೂ ಹೆಚ್ಚಿ ನೋಂದಣಿಗಳಿವೆ.ಪಿಎಂ ಮುದ್ರಾ ಯೋಜನೆಯಡಿ 3.39 ಲಕ್ಷ ಕೋಟಿ ರೂ ಮೊತ್ತದ ಸಾಲ ವಿತರಣೆ ಮಾಡಲಾಗಿದೆ. ಅಟಲ್ ಅಟಲ್ ಪಿಂಚಣಿ ಯೋಜನೆಗೆ 48.9 ಲಕ್ಷ ಕ್ಕೂ ಹೆಚ್ಚು ಚಂದಾದಾರರು ಇದ್ದಾರೆ. ಪಿಎಂ ಸ್ವನಿಧಿಯಡಿ 6.14 ಲಕ್ಷಕ್ಕೂ ಅರ್ಜಿಗಳ ವಿತರಿಸಲಾಗಿದೆ. 31.7 ಲಕ್ಷಗೂ ಹೆಚ್ಚು ಕೆಸಿಸಿ ಕಾರ್ಡ್ ಗಳ ವಿತರಣೆ ಮಾಡಲಾಗಿದೆ.
ಜಲಜೀವನ್ ಮಿಷನ್ ನಡಿ 87.7 ಲಕ್ಷ ಕ್ಕೂ ಹೆಚ್ಚು ಗ್ರಾಮೀಣ ಮನೆಗಳಿಗೆನಲ್ಲಿ ನೀರು ಸಂಪರ್ಕ ಒದಗಿಸಲಾಗಿದೆ. ಪಿಎಂ ಉಜ್ವಲ ಯೋಜನೆಯಡಿ 41.4 ಲಕ್ಷಕ್ಕೂ ಹೆಚ್ಚು ಎಲ್ ಪಿ ಜಿ ಸಂಪರ್ಕಗಳನ್ನು ನೀಡಲಾಗಿದೆ. 1,610 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ಕಾರ್ಯಾರಂಭ ಮಾಡಲಾಗಿದೆ. 1.89 ಕೋಟಿ ಗೂ ಹೆಚ್ಚು ಆಯುಷ್ಮಾನ್ ಕಾರ್ಡ್ ಗಳನ್ನು ಸೃಷ್ಟಿಸಲಾಗಿದೆ. ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ 402 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿದ್ದಾರೆ. ಪಿಎಂ ಕಿಸಾನ್ ನಡಿ 43.2 ಲಕ್ಷಕ್ಕೂ ಹೆಚ್ಚು ರೈತರಿಗೆ ನೆರವು ನೀಡಲಾಗಿದೆ ಎಂದು ತಿಳಿಸಲಾಗಿದೆ.






