ಕಾಸರಗೋಡು, ಫೆ. 02 : ಸಿಪಿಐಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರ ನೇತೃತ್ವದಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ‘ಅಭಿವೃದ್ಧಿ ಮುನ್ನಡೆ’ ಉತ್ತರ ವಲಯ ಜಾಥಾ, ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಕುಂಬಳೆ ಪಟ್ಟಣದಲ್ಲಿ ರವಿವಾರ ಅಧಿಕೃತವಾಗಿ ಆರಂಭಗೊಂಡಿತು. ಜಾಥೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಿಎಂ, ಕೇರಳದ ಬಗ್ಗೆ ಕೇಂದ್ರ ಸರಕಾರ ನಿರ್ಲಕ್ಷ್ಯ ವಹಿಸುತ್ತಿದ್ದು, ಕೇರಳವು ಭಾರತದ ಭೂಪಟದಲ್ಲಿ ಇದೆಯೇ ಎಂಬ ಬಗ್ಗೆ ಪ್ರಶ್ನಿಸುವಂತಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಅನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರವಾಗಿ ಟೀಕಿಸಿದ್ದಾರೆ. ರವಿವಾರ ಮಂಡಿಸಲಾದ ಕೇಂದ್ರ ಬಜೆಟ್ ಕೇಂದ್ರವು ಕೇರಳದ ಬಗ್ಗೆ ತೋರಿಸುತ್ತಿರುವ ತೀವ್ರ ತಾರತಮ್ಯ ಮತ್ತು ನಿರ್ಲಕ್ಷ್ಯವನ್ನು ಬಹಿರಂಗಪಡಿಸುವ ದಾಖಲೆಯಾಗಿದೆ. ರಾಜ್ಯ ಎದುರಿಸುತ್ತಿರುವ ಅತಿದೊಡ್ಡ ಬಿಕ್ಕಟ್ಟು ಕೇಂದ್ರ ಸರ್ಕಾರವು ಕೇರಳದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಸಿಪಿಐಎಂ ಮಂಜೇಶ್ವರ ವಲಯ ಕಾರ್ಯದರ್ಶಿ ಕೆ.ಆರ್ ಜಯಾನಂದ , ಜಿಲ್ಲಾ ಕಾರ್ಯದರ್ಶಿ ಕೆ. ಪಿ ಸತೀಶ್ಚಂದ್ರನ್, ಉದುಮ ಶಾಸಕ ಸಿ. ಎಚ್ ಕುಂಞಂಬು, ಶಾಸಕ ಇ. ಚಂದ್ರ ಶೇಖರನ್, ಮಾಜಿ ಸಂಸದ ಪಿ.ಕರುಣಾಕರನ್ , ಎಂ.ವಿ ಬಾಲಕೃಷ್ಣನ್ ನಾಯರ್, ಜಯರಾಜನ್ , ಎಂ.ರಾಜಗೋಪಾಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಕಣ್ಣೂರು, ವಯನಾಡು, ಕೋಜಿಕ್ಕೋಡ್ , ಮಲಪ್ಪುರಂ , ಪಾಲಕ್ಕಾಡ್ ಜಿಲ್ಲೆಗಳಲ್ಲಿ ಪರ್ಯಟನೆ ನಡೆಸಲಿದೆ. ನವಂಬರ್ 16 ರಂದು ಪಾಲಕ್ಕಾಡ್ ನ ತಿರೂರಿನಲ್ಲಿ ಸಮಾಪನಗೊಳ್ಳಲಿದೆ.






