ಬೆಳ್ತಂಗಡಿ, ಫೆ. 02 : ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಪ್ರದೇಶದಲ್ಲಿ ರವಿವಾರ ಅಜಾಗರೂಕ ಚಾಲನೆಯಿಂದ ಕಾರೊಂದು ಹೆದ್ದಾರಿ ಬದಿಯಲ್ಲಿ ನಿಂತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಕ್ಕಿಂಜೆ ನಿವಾಸಿಗಳಾದ ಉಮೇಶ (49) ಹಾಗೂ ಸೀನಪ್ಪ ಪೂಜಾರಿ (60) ಗಾಯಗೊಂಡವರಾಗಿದ್ದು, ಇಬ್ಬರೂ ಪರಸ್ಪರ ಸಂಬಂಧಿಕರು ಎಂದು ತಿಳಿದುಬಂದಿದೆ. ರವಿವಾರ ಮಧ್ಯಾಹ್ನ ಸುಮಾರು 12.30ರ ವೇಳೆಗೆ ಕಕ್ಕಿಂಜೆ ಆಯಿಲ್ ಮಿಲ್ ಬಳಿ ಮನೆಗೆ ತೆರಳಲು ಆಟೋ ರಿಕ್ಷಾಕ್ಕೆ ಕಾಯುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಉಜಿರೆ ಕಡೆಯಿಂದ ಚಾರ್ಮಾಡಿ ದಿಕ್ಕಿನಲ್ಲಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ ಚಾಲಕ ಹರ್ಷನ್ ಮನೋಜ್ ಅವರು ಅತಿವೇಗ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆ ಅತೀ ಎಡಬದಿಗೆ ವಾಹನವನ್ನು ತಿರುಗಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಇಬ್ಬರು ಕೂಡ ಕಾರಿನ ಮುಂದಿನ ಗಾಜಿಗೆ ಬಿದ್ದು ಪಕ್ಕದ ಕಚ್ಚಾ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಸೀನಪ್ಪ ಅವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಮೇಶ್ ಅವರ ಎಡಕಾಲು, ತಲೆ, ಎಡಗೈಗೆ ಗುದ್ದಿದ ಗಾಯವಾಗಿದ್ದು, ಕಕ್ಕಿಂಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಮೇಶ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






