ಉಡುಪಿ : ಫೆಬ್ರವರಿ 01: ಬ್ರಹ್ಮಾವರ ತಾಲೂಕಿನ ಕೋಡಿಬೆಂಗ್ರೆಯಲ್ಲಿ ನಡೆದ ಭೀಕರ ದೋಣಿ ದುರಂತಕ್ಕೆ ಸಂಬಂಧಿಸಿದಂತೆ ಮಲ್ಪೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ದೋಣಿ ವಿಹಾರ ವೇಳೆ ಸುರಕ್ಷತಾ ನಿಯಮಗಳನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸಿದ್ದೇ ದುರಂತಕ್ಕೆ ಕಾರಣವೆಂದು ತನಿಖೆಯಿಂದ ತಿಳಿದುಬಂದಿದೆ.
ಬಂಧಿತರನ್ನು ಕೋಡಿ ಗ್ರಾಮದ ಸುಹಾಸ್ ಶ್ರೀಯಾನ್ (23), ಸುಫಿಯಾನ್ (20) ಹಾಗೂ ವಾಸು ಮೆಂಡನ್ (52) ಎಂದು ಗುರುತಿಸಲಾಗಿದೆ.
ಜನವರಿ 26ರಂದು ಬೆಳಿಗ್ಗೆ ಮೈಸೂರಿನಿಂದ ಬಂದ ಗುರುಪ್ರಸಾದ್ (34) ಸೇರಿದಂತೆ ಒಟ್ಟು 29 ಪ್ರವಾಸಿಗರು ದೋಣಿ ವಿಹಾರಕ್ಕೆ ತೆರಳಿದ್ದರು. ಪ್ರವಾಸಿಗರನ್ನು ಎರಡು ಪ್ರತ್ಯೇಕ ದೋಣಿಗಳಲ್ಲಿ ಕಳುಹಿಸಲಾಗಿತ್ತು. ಒಂದು ದೋಣಿಯಲ್ಲಿ 14 ಜನ ಮತ್ತು ಇನ್ನೊಂದರಲ್ಲಿ 15 ಜನ ಇದ್ದರು.
ಬೆಳಿಗ್ಗೆ ಸುಮಾರು 11.15ರ ವೇಳೆಗೆ ಸ್ವರ್ಣ ನದಿಯಲ್ಲಿ ವಿಹಾರ ನಡೆಸುತ್ತಿದ್ದಾಗ, ‘ದಿ ವೇವ್ ರೈಡರ್’ ಹೆಸರಿನ ದೋಣಿಯನ್ನು ನಿರ್ವಾಹಕರು ಇದ್ದಕ್ಕಿದ್ದಂತೆ ಎಡಕ್ಕೆ ತಿರುಗಿಸಿದ ಪರಿಣಾಮ ದೋಣಿ ಮಗುಚಿ ಬಿದ್ದಿದೆ. ಪರಿಣಾಮ ದೋಣಿಯಲ್ಲಿದ್ದ 14 ಜನ ನೀರಿಗೆ ಬಿದ್ದಿದ್ದಾರೆ.
ಈ ದುರಂತದಲ್ಲಿ ಶಂಕರಪ್ಪ (27), ಸಿಂಧು ಪಿ (23) ಮತ್ತು ದಿಶಾ (26) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಉಳಿದ ಪ್ರಯಾಣಿಕರನ್ನು ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ.
ಘಟನೆಯ ಕುರಿತು ದೂರುದಾರ ಗುರುಪ್ರಸಾದ್ ನೀಡಿದ ದೂರಿನ ಆಧಾರದ ಮೇಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ನ ಸೆಕ್ಷನ್ 284, 125(ಎ) ಮತ್ತು 106 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ತನಿಖೆಯ ವೇಳೆ, ಆರೋಪಿಗಳು ಪ್ರವಾಸೋದ್ಯಮ ಇಲಾಖೆಯಿಂದ ಯಾವುದೇ ಪರವಾನಗಿ ಅಥವಾ ಅನುಮತಿ ಪಡೆಯದೇ ದೋಣಿ ವಿಹಾರ ನಡೆಸುತ್ತಿದ್ದು, ಹಲವು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ ಎಂದು ಉಡುಪಿ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.






