ಬೆಂಗಳೂರು: ಜನವರಿ 19: ಪ್ರತಿಷ್ಠಿತ ಆರೋಗ್ಯ ಮತ್ತು ಜೀವನಶೈಲಿ ಸಂಸ್ಥೆ ಆಗಿರುವ ಹರ್ಬಲೈಫ್ ಇಂಡಿಯಾ ಸಂಸ್ಥೆಯು ಶಿಶು ಮಂದಿರ ಸಂಸ್ಥೆಯ ಸಹಯೋಗದೊಂದಿಗೆ ತನ್ನ ಮಹತ್ವಾಕಾಂಕ್ಷೆಯ ‘ಇಕೋ ವೀಲ್ಸ್ ಮಹಿಳಾ ಯೋಜನೆ’ಯನ್ನು ಮೈಸೂರಿನಲ್ಲಿ ಆರಂಭಿಸಿದ್ದು, ಜನವರಿ 16ರಂದು ಈ ಅಭಿಯಾನಕ್ಕೆ ಚಾಲನೆ ನೀಡಿದೆ.
ಕಾರ್ಯಕ್ರಮದಲ್ಲಿ ಮಹಿಳೆಯರು ಚಲಾಯಿಸುವ 75ಕ್ಕೂ ಹೆಚ್ಚು ಎಲೆಕ್ಟ್ರಿಕ್ ಆಟೋಗಳಿಗೆ ಹಸಿರು ನಿಶಾನೆ ತೋರಿಸಲಾಯಿತು. ಈ ಮೂಲಕ ಪರಿಸರ ಸ್ನೇಹಿ ಸಾರಿಗೆ ಕಲ್ಪಿಸುವ ಮತ್ತು ಮಹಿಳೆಯರಿದೆ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸುವ ಅವಕಾಶ ಕಲ್ಪಿಸಲಾಯಿತು. ವಿಶೇಷವಾಗಿ “ಹರ್ ರೂಟ್, ಅವರ್ ಫ್ಯೂಚರ್” ಅಭಿಯಾನ ಹಾಗೂ ವರ್ಷಪೂರ್ತಿ ನಡೆಯಲಿರುವ “ಹಸಿರು ಮೈಸೂರು, ಸ್ವಚ್ಛ ಮೈಸೂರು” ಅಭಿಯಾನಕ್ಕೂ ಚಾಲನೆ ನೀಡಲಾಯಿತು.
ಹರ್ಬಲೈಫ್ ಇಂಡಿಯಾದ ಕಾರ್ಯತಂತ್ರ ಮತ್ತು ಅನುಷ್ಠಾನ ವಿಭಾಗದ ಉಪಾಧ್ಯಕ್ಷರಾದ ಉದಯ್ ಪ್ರಕಾಶ್, ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ.ಎಸ್. ಶ್ರೀವತ್ಸ, ಶಿಶು ಮಂದಿರದ ನಿರ್ದೇಶರಾದ, ಆನಂದ್ ಸಿ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್ (ಐ.ಪಿ.ಎಸ್) ಮತ್ತು ಇತರ ಗಣ್ಯರು ಈ ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಯೋಜನೆಯು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಇ-ಆಟೋಗಳನ್ನು ಒದಗಿಸುವುದಲ್ಲದೆ, ವಾಹನ ಚಾಲನಾ ತರಬೇತಿ, ಪರವಾನಗಿ (ಲೈಸೆನ್ಸ್), ನಿರ್ವಹಣೆ, ಡಿಜಿಟಲ್ ಉಪಕರಣಗಳ ಬಳಕೆ, ಹಣಕಾಸು ಸಾಕ್ಷರತೆ, ಆತ್ಮರಕ್ಷಣೆ ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಕಲ್ಪಿಸುವ ಮೂಲಕ ಅವರಿಗೆ ನೆರವು ಒದಗಿಸಲಿದೆ.
.
*ಈ ಕುರಿತು ಮಾತನಾಡಿದ ಹರ್ಬಲೈಫ್ನ ಕಾರ್ಯತಂತ್ರ ಮತ್ತು ಅನುಷ್ಠಾನ ವಿಭಾಗದ ಉಪಾಧ್ಯಕ್ಷ ಉದಯ್ ಪ್ರಕಾಶ್ ಅವರು* , “ಹರ್ಬಲೈಫ್ನಲ್ಲಿ ನಾವು ‘ಎಕೋ ವೀಲ್ಸ್ ಮಹಿಳಾ ಯೋಜನೆ’ಯಿಂದ ಹೆಮ್ಮೆ ಹೊಂದಿದ್ದೇವೆ, ಇದು ಸುಸ್ಥಿರ ಪ್ರಗತಿ ಮತ್ತು ಸಮಾನ ಬೆಳವಣಿಗೆಯ ಕುರಿತು ನಮಗಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಬೆಂಗಳೂರಿನಲ್ಲಿ ದೊರೆತ ಅಭೂತಪೂರ್ವ ಯಶಸ್ಸಿನ ನಂತರ, ಮೈಸೂರಿಗೆ ಈ ಯೋಜನೆಯನ್ನು ವಿಸ್ತರಿಸುವ ಮೂಲಕ ಮಹಿಳೆಯರಿಗೆ ಅಗತ್ಯ ಕೌಶಲ ಮತ್ತು ಆತ್ಮವಿಶ್ವಾಸವನ್ನು ತುಂಬುವ ಮೂಲಕ ಅವರ ಜೀವನವನ್ನು ಬದಲಾಯಿಸುತ್ತಿದ್ದೇವೆ. ಅವರು ಕೇವಲ ಎಲೆಕ್ಟ್ರಿಕ್ ಆಟೋಗಳನ್ನು ಓಡಿಸುತ್ತಿಲ್ಲ; ಬದಲಾಗಿ ತಮ್ಮ ಕುಟುಂಬ ಮತ್ತು ಸಮಾಜವನ್ನು ಉಜ್ವಲ ಹಾಗೂ ಹಸಿರು ಭವಿಷ್ಯದತ್ತ ಮುನ್ನಡೆಸುತ್ತಿದ್ದಾರೆ” ಎಂದರು.
ಬೆಂಗಳೂರಿನಲ್ಲಿ ‘ಇಕೋ-ವೀಲ್ಸ್’ ಯೋಜನೆಯು ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಬೆಂಗಳೂರಿನಲ್ಲಿ 115 ಮಹಿಳಾ ಫಲಾನುಭವಿಗಳು ತಮ್ಮ ಮಾಸಿಕ ಆದಾಯವನ್ನು ₹10,000 ದಿಂದ ₹30,000 ಕ್ಕೆ ಹೆಚ್ಚಿಸಿಕೊಳ್ಳಲು ಈ ಯೋಜನೆ ಸಹಕಾರಿಯಾಗಿದೆ. ಅಲ್ಲದೆ, ಶೂನ್ಯ-ಹೊರಸೂಸುವಿಕೆಯ ಸಂಚಾರ ಮಾದರಿಯ ಮೂಲಕ 750ಕ್ಕೂ ಹೆಚ್ಚು ವ್ಯಕ್ತಿಗಳು ಮತ್ತು ಸಮಾಜದ ಮೇಲೆ ಇದು ಧನಾತ್ಮಕ ಪರಿಣಾಮ ಬೀರಿದೆ. ಈ ಯಶಸ್ಸಿನ ಆಧಾರದ ಮೇಲೆ, ಹರ್ಬಲೈಫ್ ಇಂಡಿಯಾ ಸಂಸ್ಥೆಯು ಶಿಶು ಮಂದಿರದ ಸಹಯೋಗದೊಂದಿಗೆ ಈಗ ಈ ಕಾರ್ಯಕ್ರಮದ ಎರಡನೇ ಹಂತವನ್ನು ಮೈಸೂರಿನಲ್ಲಿ ಆರಂಭಿಸುತ್ತಿದೆ.
ಮುಂದಿನ ಹಂತದಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ಸಾರಿಗೆ ಮಾರ್ಗಗಳ ಮೇಲೆ ಗಮನಹರಿಸಲಾಗುತ್ತಿದ್ದು, ಇದು ಸುಸ್ಥಿರ ಜೀವನೋಪಾಯವನ್ನು ಸೃಷ್ಟಿಸುವುದರ ಜೊತೆಗೆ ಪರಿಸರ ಸ್ನೇಹಿ ಸಂಚಾರ ವ್ಯವಸ್ಥೆಯ ಅಳವಡಿಕೆಯನ್ನು ವೇಗಗೊಳಿಸಲಿದೆ. ಈ ವಿಸ್ತರಣೆಯು ಐದು ವರ್ಷಗಳಲ್ಲಿ ಸುಮಾರು 1.4 ಲಕ್ಷ ಮರಗಳನ್ನು ನೆಡುವುದಕ್ಕೆ ಸಮಾನವಾದ ಪರಿಣಾಮವನ್ನು ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ ,ಇದು ಭಾರತ ಸರ್ಕಾರದ FAME-II ಉದ್ದೇಶಗಳಿಗೆ ಅನುಗುಣವಾಗಿದೆ. ಐದು ವರ್ಷಗಳ ಅವಧಿಯಲ್ಲಿ, ಮೈಸೂರಿನ ಈ ಯೋಜನೆಯು ಒಟ್ಟು ₹50 ಕೋಟಿ ರೂ. ಆದಾಯದಷ್ಟು ಪರಿಣಾಮವನ್ನು ಬೀರುವ ನಿರೀಕ್ಷೆಯಿದೆ. ಇದು ಹರ್ಬಲೈಫ್ ಇಂಡಿಯಾದ ಸಮಗ್ರ ಬೆಳವಣಿಗೆ, ಮಹಿಳಾ ಸಬಲೀಕರಣ ಮತ್ತು ಪರಿಸರ ಉಸ್ತುವಾರಿಗೆ ಬದ್ಧತೆಯನ್ನು ಬಲಪಡಿಸುತ್ತದೆ.
*ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರು ನಗರ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್ (ಐ.ಪಿ.ಎಸ್) ಅವರು* , “ಮೈಸೂರು ನಗರ ಪೊಲೀಸ್ ಆಯುಕ್ತೆಯಾಗಿ ಆರ್ಥಿಕ ಸ್ವಾತಂತ್ರ್ಯವು ಮಹಿಳೆಯರ ಜೀವನವನ್ನು ಹೇಗೆ ಬದಲಾಯಿಸುತ್ತದೆ ಮತ್ತು ನಮ್ಮ ಸಮಾಜವನ್ನು ಹೇಗೆ ಹೆಚ್ಚು ಸುರಕ್ಷಿತ ಹಾಗೂ ಸದೃಢಗೊಳಿಸುತ್ತದೆ ಎಂಬುದನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಈ ‘ಇಕೋ-ವೀಲ್ಸ್ ಮಹಿಳಾ ಯೋಜನೆ’ಯು ಮಹಿಳೆಯರು ತಮ್ಮ ಭವಿಷ್ಯದ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುವಂತೆ ಮಾಡುವಲ್ಲಿ ಮತ್ತು ಹಸಿರು ಹಾಗೂ ಸ್ವಚ್ಛ ನಗರ ಸಂಚಾರಕ್ಕೆ ಕೊಡುಗೆ ನೀಡುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಸಮಾನತೆ, ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಪ್ರಗತಿಯನ್ನು ಬೆಂಬಲಿಸುವ ಇಂತಹ ಯೋಜನೆಗಳಿಗೆ ಮೈಸೂರು ಪೊಲೀಸರು ಸದಾ ತಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತಾರೆ” ಎಂದರು.
*ಶಿಶು ಮಂದಿರದ ನಿರ್ದೇಶಕರು, ಆನಂದ್ ಸಿ ಅವರು ಮಾತನಾಡಿ* , “ಕಳೆದ ಮೂರು ದಶಕಗಳಿಂದ ಶಿಶು ಮಂದಿರವು ಆರ್ಥಿಕವಾಗಿ ಹಿಂದುಳಿದ ವರ್ಗದ ಸಮುದಾಯಗಳಿಗೆ ಗೌರವಾನ್ವಿತ ಮತ್ತು ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಲು ಶ್ರಮಿಸುತ್ತಿದೆ. ‘ಇಕೋ-ವೀಲ್ಸ್’ ಕೇವಲ ಒಂದು ಸಂಚಾರ ಯೋಜನೆಯಾಗಿ ಉಳಿಯದೆ, ಇಂದು ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯ ಚಳವಳಿಯಾಗಿ ಬೆಳೆದಿದೆ. ಮೈಸೂರಿನಲ್ಲಿ ಈ ಯೋಜನೆ ಆರಂಭಿಸುವ ಮೂಲಕ ನಾವು ಹೆಚ್ಚಿನ ಸಂಖ್ಯೆಯ ಮಹಿಳೆಯರು ಮತ್ತು ಮಂಗಳಮುಖಿಯರು ಸ್ವತಂತ್ರವಾಗಿ ಆದಾಯ ಗಳಿಸುವ ಮತ್ತು ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಮುಂದುವರಿಯುವಂತೆ ಮಾಡುತ್ತಿದ್ದೇವೆ,” ಎಂದು ಹೇಳಿದರು.






