ಉಡುಪಿ ನವೆಂಬರ್ 11: ಆದಿ ಉಡುಪಿ ಭಾಗದ ಚತುಷ್ಪಥದ ರಸ್ತೆಯ ಎರಡೂ ಬದಿಯಲ್ಲಿ ಏಕಕಾಲದಲ್ಲಿ ಕಾಂಕ್ರೀಟಿಕರಣ ಕಾಮಗಾರಿ ಕೈಗೊಳ್ಳಲಿರುವ ಹಿನ್ನೆಲೆ, ಸಾರ್ವಜನಿಕ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ರಸ್ತೆಯ ಕಾಮಗಾರಿಯು ಸುಸೂತ್ರವಾಗಿ ನಡೆಸುವ ಸಲುವಾಗಿ ನವೆಂಬರ್ 10 ರಿಂದ 30 ರ ವರೆಗೆ ರಾಷ್ಟ್ರೀಯ ಹೆದ್ದಾರಿ 169 ಎ ರ ತೀರ್ಥಹಳ್ಳಿ- ಮಲ್ಪೆ ರಸ್ತೆಯ ಮಲ್ಪೆ ಭಾಗದಆದಿ ಉಡುಪಿ ಭಾಗದ ಚತುಷ್ಪಥ ರಸ್ತೆಯ ಎರಡೂ ಬದಿಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಿಸಿ, ಸದ್ರಿ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಈ ಕೆಳಕಂಡಂತೆ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶಿಸಿರುತ್ತಾರೆ.
ಮಲ್ಪೆಯಿಂದ ಮಂಗಳೂರು ಮತ್ತು ಕುಂದಾಪುರ ಕಡೆಗೆ ಹೋಗಲು ಭಾರೀ ವಾಹನಗಳು ಮಲ್ಪೆ-ಬಲರಾಮ ಸರ್ಕಲ್-ತೊಟ್ಟಂ-ಗುಜ್ಜರಬೆಟ್ಟು-ಹೂಡೆ-ನೇಜಾರ್-ಕಲ್ಯಾಣಪುರ ಮಾರ್ಗವಾಗಿ ಸಂತೆಕಟ್ಟೆ ತಲುಪಿ, ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸಬೇಕು.
ಮಲ್ಪೆಗೆ ಬರುವ ಭಾರಿ ವಾಹನಗಳು ಆಶೀರ್ವಾದ್ ಸರ್ಕಲ್-ಲಕ್ಷ್ಮೀ ನಗರ-ಕೊಡವೂರು ಮೂಲಕ ಮಲ್ಪೆ ಕಡೆಗೆ ಸಂಚರಿಸಬೇಕು. ಮಲ್ಪೆ ಕಡೆಗೆ ಹೋಗುವ ಮತ್ತು ಬರುವ ಲಘು ವಾಹನಗಳು ಕಲ್ಮಾಡಿ ಸರ್ಕಲ್ನಿಂದ ಅಂಬಲಪಾಡಿ ತಲುಪಿ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಸಂಚರಿಸಬೇಕು. ಕಲ್ಮಾಡಿಯಿಂದ-ಕಿದಿಯೂರು-ಕಡೇಕಾರು-ಕನ್ನರ್ಪಾಡಿ ರಾಷ್ಟ್ರೀಯ ಹೆದ್ದಾರಿ ಮೂಲಕ ಅಥವಾ ಉಡುಪಿ ಕಡೆಗೆ ಸಂಚರಿಸಬೇಕು.
ಮಲ್ಪೆಯಿಂದ ಮಂಗಳೂರು ಕಡೆಗೆ ಹೋಗುವ ಲಘು ವಾಹನಗಳು ಪಡುಕೆರೆ ತೊಟ್ಟಂ ಮುಖಾಂತರ ಬಲಾಯಿಪಾದೆಗೆ ಬಂದು ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.








