ಉಡುಪಿ : ಅಕ್ಟೋಬರ್ 29:ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ವರ್ತಮಾನದ ಅಗತ್ಯಕ್ಕೆ ತಕ್ಕಂತಿಲ್ಲ ಈ ಕಾಯ್ದೆಯನ್ನು ಅಗತ್ಯಕ್ಕೆ ತಕ್ಕಂತೆ ಪರಿಷ್ಕರಿಸುವುದು ಅಗತ್ಯ ಎಂದು ಹೈಕೋರ್ಟ್ ಹೇಳಿರುವುದು ಸ್ವಾಗತಾರ್ಹ ಮತ್ತು ಸಕಾಲಿಕ ಎಂದು ಸಹಕಾರ ಭಾರತಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ರವರು ತಿಳಿಸಿರುತ್ತಾರೆ
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ ಅವರಿಂದ ಏಕ ಸದಸ್ಯ ನ್ಯಾಯ ಪೀಠವು ಇತ್ತೀಚೆಗೆ ರೆಟ್ ಅರ್ಜಿಯೊಂದರ ವಿಚಾರಣೆಯ ಸಂದರ್ಭದಲ್ಲಿ ಕರ್ನಾಟಕ ಸಹಕಾರ ಸಂಘಗಳ ( *ಕೆಪಿಎಸ್) ಕಾಯ್ದೆ_1959″ ಹಳೇ ಓಬಿ ರಾಯರ ಕಾಲದ ಈ ಕಾಯಿದೆಗೆ ಈವರೆಗೆ ಆಡಳಿತ ನಡೆಸಿರುವ ಸರಕಾರಗಳು ಹಲವು ತಿದ್ದುಪಡಿಗಳನ್ನು ತಂದಿದ್ದರೂ, ಅಸ್ಪಷ್ಟತೆಗಳು ಇನ್ನೂ ಉಳಿದಿರುವುದನ್ನು ಪೀಠ ಗಮನಿಸಿದೆ .
ಕಾಯ್ದೆಯ ಅಡಿಯಲ್ಲಿ ಬರುವ ಸದಸ್ಯತ್ವದ ಹಕ್ಕುಗಳು, ಅನರ್ಹತೆ ,ಮತದಾರರ ಪಟ್ಟಿ ಸಿದ್ದಪಡಿಸುವುದುಕಾಲಕಾಲಕ್ಕೆ ಚುನಾವಣೆ ನಡೆಸುವುದು, ಲೆಕ್ಕಪರಿಶೋಧನೆ ಮತ್ತು ಆಡಳಿತ ಅಧಿಕಾರಿ ನೇಮಕಾತಿಗೆ ಸಂಬಂಧಿಸಿದ ಹಲವು ನಿಯಮಗಳಲ್ಲಿ ಸಂಘರ್ಷದ ಅಂಶಗಳಿವೆ
ಈ ಎಲ್ಲಾ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಪಿಎಸ್ ಕಾಯಿದೆಗೆ ತಾರ್ಕಿಕವಾಗಿ ಸಮಗ್ರ ತಿದ್ದುಪಡಿಯನ್ನು ಮಾಡಬೇಕಾಗಿದೆ ಎಂದು ಕೋರ್ಟ್ ಒತ್ತಿ ಹೇಳಿದೆ.
ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ಹಣಕಾಸು ,ನೇಕಾರಿಕೆ, ಸಕ್ಕರೆ, ವಸತಿ ವಲಯಗಳಲ್ಲಿನ ಸಹಕಾರ ಸಂಘಗಳು ಸಮಾಜದಲ್ಲಿ ಹಾಸು ಹೊಕ್ಕಾಗಿ ಅವುಗಳು ಬೀರುತ್ತಿರುವ ಪರಿಣಾಮವನ್ನು ಗಮನಿಸಿದಾಗ ಕೋರ್ಟ್ ಕಳಕಳಿ ಅರ್ಥವಾಗುತ್ತದೆ.
*ಯಾವುದೇ ಕಾಯ್ದೆ ಇರಲಿ ಕಾಲದ ಅವಶ್ಯಕತೆ ಗಳಿಗೆ ಸ್ಪಂದಿಸದೆ ಹೋದರೆ ಅದು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ ಮತ್ತು ಆ ಕಾಯ್ದೆಯನ್ನುರೂಪಿಸಿದ ಉದ್ದೇಶವು ವ್ಯರ್ಥವಾಗುತ್ತದೆ
ಸಹಕಾರಿ ಸಂಸ್ಥೆಗಳ ಸ್ವಯತ್ತತೆಯನ್ನು ಹಾಗೂ ಆ ಸಂಸ್ಥೆಗಳಲ್ಲಿ ಸಾಂವಿಧಾನಿಕ ತತ್ವಗಳೊಂದಿಗೆ ದಕ್ಷತೆ ಪಾರದರ್ಶಕತೆ ಮತ್ತು ಹೊಂದಾಣಿಕೆ ಖಾತರಿ ಪಡಿಸಿಕೊಳ್ಳಲು ಅನುಕೂಲವಾಗುವಂತೆ ಕಾಯಿದೆಗೆ ತಿದ್ದುಪಡಿ ಮಾಡಬೇಕಾಗುತ್ತದೆ.
ಹೈಕೋರ್ಟ್ನ ಅಭಿಪ್ರಾಯ ಹೊರ ಬೀಳುವ ಮೊದಲೇ ರಾಜ್ಯ ಸರಕಾರವು ಇದೇ ವರ್ಷ ” ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ಮಸೂದೆ_2025 “ನ್ನು ರೂಪಿಸಿ ಅದಕ್ಕೆ ಎರಡೂ ಸದನಗಳಿಂದ ಅಂಗೀಕಾರವನ್ನು ಪಡೆದಿದೆ .
ಆದರೆ ಈ ತಿದ್ದುಪಡಿಯಲ್ಲಿ ಮಾಡಿರುವ ಅಂಶಗಳು ಕೆಲವೇ ಕೆಲವು ವಿಷಯಗಳಿಗೆ ಸೀಮಿತವಾಗಿದೆ ಹೊರತು ಹೈಕೋರ್ಟ್ ಹೇಳಿರುವಂತೆ ಕಾಯ್ದೆಯನ್ನು ಕೂಲಂಕುಶವಾಗಿ ಪರಿಶೀಲನೆಗೆ ಒಳಪಡಿಸಿ ಸಮಗ್ರ ತಿದ್ದುಪಡಿ ತರುವ ಉದ್ದೇಶವನ್ನು ಹೊಂದಿರಲಿಲ್ಲ.
ರಾಜ್ಯ ಸರಕಾರದ ಸಹಕಾರಿ ಇಲಾಖೆಯು ಹೈಕೋರ್ಟ್ ಹೇಳಿರುವಂತೆ ಹೊಸ ಸಮಗ್ರ ಸಹಕಾರಿ ಕಾಯ್ದೆಯನ್ನು ರೂಪಿಸಲು ತಜ್ಞರ ಸಮಿತಿ ರಚಿಸಿ, ಹಿರಿಯ ಅನುಭವಿ ಸಹಕಾರಿಗಳ ಸಲಹೆಗಳನ್ನು ಪಡೆದುಕರ್ನಾಟಕ ರಾಜ್ಯದ ಸಹಕಾರಿ ಕ್ಷೇತ್ರದ ಆಮೂಲಾಗ್ರ ಬದಲಾವಣೆಗಾಗಿ ಹೊಸ ಕಾಯ್ದೆಯನ್ನು ರೂಪಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಹಕಾರಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ರವರು ರಾಜ್ಯ ಸರಕಾರವನ್ನು ಒತ್ತಾಯಿಸಿರುತ್ತಾರೆ








