ಉಡುಪಿ: ಅಕ್ಟೋಬರ್ 16: ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬಂದೇ ಬಿಟ್ಟಿತು ದೀಪಾವಳಿ ಬಂತಂದ್ರೆ ಸಾಕು ಪಟಾಕಿ ಸಿಡಿಸಿ ಸಂಭ್ರಮಿಸುವುದೇ ಸಡಗರ ಹಾಗಾಗಿ ಹಲವು ಕಡೆಗಳಲ್ಲಿ ಪಟಾಕಿ ಸ್ಟಾಲ್ ಗಳನ್ನು ತೆರೆಯಲು ಈಗಾಗಲೇ ಅನುಮತಿಯನ್ನು ಜಿಲ್ಲಾಡಳಿತ ಕೊಟ್ಟಿದೆ,
ಆದರೆ ಇವೆಲ್ಲದರ ನಡುವೆ ದೀಪಾವಳಿಯ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಪಟಾಕಿ ಖರೀದಿ ಹಾಗೂ ಸಂಗ್ರಹ ಮಾಡುತ್ತಿರುವ ಮಾಹಿತಿ ಮೇರೆಗೆ ಉಡುಪಿ ಜಿಲ್ಲೆಯ ವಿವಿಧೆಡೆ ಅಕ್ರಮ ಹಾಗೂ ಅಪಾಯಕಾರಿಯಾಗಿ ಸಂಗ್ರಹಿಸಲಾಗಿದ್ದ ಪಟಾಕಿ ಮಳಿಗೆಗಳಿಗೆ ದಾಳಿ ನಡೆಸಿದ ಪೊಲೀಸರು ಅಪಾರ ಪ್ರಮಾಣದ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಮಿಯ್ಯಾರು, ಬ್ರಹ್ಮಾವರ ಠಾಣಾ ವ್ಯಾಪ್ತಿಯ ಕುಂಜಾಲು ಹಾಗೂ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ತೆಕ್ಕಟ್ಟೆ ಎಂಬಲ್ಲಿ ಪೊಲೀಸರು ದಾಳಿ ನಡೆಸಿ ಹೆಚ್ಚಿನ ಪ್ರಮಾಣದ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಪಟಾಕಿಗಳನ್ನು ಪರವಾನಿಗೆ ಪಡೆದು ಸುರಕ್ಷಿತವಾಗಿ ಸಂಗ್ರಹಿಸಿ ನಂತರ ನಾಶಪಡಿಸಲಾಗುವುದು ಎಂದು ಉಡುಪಿ ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಈ ಬಗ್ಗೆ ಮೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.









