ಬ್ರಹ್ಮಾವರ : ಸೆಪ್ಟೆಂಬರ್ 12: ಮದುವೆ ನಿರಾಕರಿಸಿದ ಕಾರಣಕ್ಕಾಗಿ ಕೊಕ್ಕರ್ಣೆಯಲ್ಲಿ ಪ್ರೇಮಿಯಿಂದ ಚಾಕು ಇರಿತಕ್ಕೆ ಒಳಗಾಗಿ ಗಂಭೀರ ಸ್ಥಿತಿಯಲ್ಲಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಉಡುಪಿ ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಮದುವೆ ನಿರಾಕರಿಸಿದ ಕಾರಣಕ್ಕಾಗಿ ಆರೋಪಿ ಕೊಕ್ಕರ್ಣೆ ಚೆಗರಿಬೆಟ್ಟು ನಿವಾಸಿ ಕಾರ್ತಿಕ್ ಪೂಜಾರಿ, ತನ್ನ ನೆರೆಮನೆಯ ಪ್ರೇಯಸಿ ರಕ್ಷಿತಾ ಪೂಜಾರಿ (೨೪) ಎಂಬಾಕೆಯನ್ನು ಚೂರಿಯಿಂದ ಕುತ್ತಿಗೆ ಹಾಗೂ ಎದೆಯ ಭಾಗಕ್ಕೆ ಇರಿದು ಪರಾರಿಯಾಗಿದ್ದನು. ಇದರಿಂದ ಗಂಭೀರವಾಗಿ ಗಾಯಗೊಂಡ ರಕ್ಷಿತಾ ಅವರನ್ನು ಮಣಿಪಾಲ ಆಸ್ಪತ್ರೆ ದಾಖಲಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಅಕ್ಷತಾ ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕರ್ಣೆಯ ಪುತ್ತನಕಟ್ಟೆ ಬಳಿ ಇಂದು ಬೆಳಗ್ಗೆ ಯುವತಿಗೆ ಚಾಕುವಿನಿಂದ ಇರಿದು ಕೊಲೆಗೈದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ಇದೀಗ ಕೊಲೆ ಆರೋಪಿ ಕಾರ್ತಿಕ್ ಪೂಜಾರಿ ಮೃತದೇಹ ಅಲ್ಲೇ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ. ಈತ ಕೊಲೆ ಮಾಡಿದ ಬಳಿಕ ಪರಾರಿಯಾಗಿ ಅಲ್ಲೇ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.








