ಬೆಂಗಳೂರು:ಮೇ 30: ಖ್ಯಾತ ಗೀತರಚನೆಕಾರ, ಕಥೆ ಮತ್ತು ಸಂಭಾಷಣಕಾರ ಎಚ್.ಎಸ್. ವೆಂಕಟೇಶ್ ಮೂರ್ತಿ ನಿಧನನಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎಚ್ ಎಸ್ ವೆಂಕಟೇಶ್ ಮೂರ್ತಿ, ಚಿಕಿತ್ಸೆ ಫಲಕಾರಿಯಾಗದೆ ಕೆಂಗೇರಿ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದು,ಇವರಿಗೆ 80ವರ್ಷ ವಯಸ್ಸಾಗಿತ್ತು ಮೃತರು ನಾಲ್ವರು ಪುತ್ರರನ್ನು ಅಗಲಿದ್ದಾರೆ.
1944ರ ಜೂನ್ 23ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿ ತಂದೆ ನಾರಾಯಣ ಭಟ್ಟರು ಮತ್ತು ತಾಯಿ ನಾಗರತ್ನಮ್ಮ ಅವರಿಗೆ ಜನಿಸಿದ ಎಚ್.ಎಸ್.ವೆಂಕಟೇಶ್ ಮೂರ್ತಿ ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಎಚ್ಎಸ್ವಿ ಎಂತಲೇ ಪ್ರಸಿದ್ದರಾಗಿದ್ದವರು.
ಭದ್ರಾವತಿಯಲ್ಲಿ ಡಿಪ್ಲೊಮೊ ಪಡೆದು ಮಲ್ಲಾಡಿ ಹಳ್ಳಿಯ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಎಚ್ಎಸ್ ವೆಂಕಟೇಶಮೂರ್ತಿ ಅವರು, 1966ರಿಂದ 1971ರ ವರೆಗೆ ಅದೇ ಶಾಲೆಯಲ್ಲಿ ಅದ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದರು. 1971 ರಿಂದ 1973ರವರೆಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಎಂ.ಎ. ಅಧ್ಯಯನ ಮಾಡಿದ ಎಚ್ಎಸ್ವಿ 1973ರಿಂದ 2000ದವರೆಗೆ ಸುಮಾರು ಮೂರು ದಶಕಗಳ ಕಾಲ ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ಬಳಿಕ ಬೆಂಗಳೂರಿನಲ್ಲಿಯೇ ವಾಸವಾಗಿದ್ದರು.
ಗ್ರಾಮೀಣ ಪರಿಸರದಲ್ಲೇ ತಮ್ಮ ಬಾಲ್ಯವನ್ನು ಕಳೆದ ಎಚ್.ಎಸ್.ವೆಂಕಟೇಶ್ ಮೂರ್ತಿ ಅವರು ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದ ಇವರು 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.
ಕಾವ್ಯಕೃತಿ, ನಾಟಕಗಳು ಮಕ್ಕಳಿಗಾಗಿ ಕವಿತೆ, ನಾಟಕ, ಕಥೆಗಳನ್ನೂ ಬರೆದಿದ್ದಾರೆ. ಇವರು ಅನುವಾದಿಸಿದ ಕಾಳಿದಾಸನ ‘ಋತುಸಂಹಾರ’ ಕಾವ್ಯಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪುರಸ್ಕಾರವನ್ನು ಪಡೆದಿದೆ.
‘ಕ್ರಿಯಾಪರ್ವ’, ‘ಎಷ್ಟೊಂದು ಮುಗಿಲು’, ‘ನದೀತೀರದಲ್ಲಿ’, ‘ಉತ್ತರಾಯಣ’ ಮೊದಲಾದವು ಇವರ ಮುಖ್ಯ ಕಾವ್ಯಕೃತಿಗಳು; ಅಗ್ನಿವರ್ಣ, ಚಿತ್ರಪಟ, ಉರಿಯ ಉಯ್ಯಾಲೆ, ಮಂಥರೆ, ಕಂಸಾಯಣ ಮೊದಲಾದುವು ಇವರ ಮುಖ್ಯ ನಾಟಕಗಳು, ‘ಈ ಮುಖೇನ’ ಇವರ ವೈಚಾರಿಕ ಪ್ರಬಂಧಗಳ ಸಂಪುಟವಾಗಿದೆ. ಹಕ್ಕಿಸಾಲು, ಅಳಿಲು ರಾಮಾಯಣ, ಅಜ್ಜೀ ಕಥೆ ಹೇಳು, ಚಿನ್ನಾರಿ ಮುತ್ತ ಎಚ್ಎಸ್ವಿ ಅವರ ಮಕ್ಕಳ ಕೃತಿಗಳಾಗಿವೆ.
ಎಚ್ಎಸ್ ವೆಂಕಟೇಶ ಮೂರ್ತಿ ಚಿತ್ರರಂಗಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ‘ಚಿನ್ನಾರಿ ಮುತ್ತ’ ಇವರದ್ದೇ ಕಥೆ. ಕಥೆ ಮಾತ್ರವಲ್ಲದೆ, ಗೀತೆ, ಸಂಭಾಷಣೆಯಲ್ಲೂ ಖ್ಯಾತರಾಗಿದ್ದ ಇವರ ಪ್ರಮುಖ ರಚನೆಗಳೆಂದರೆ ‘ಅಮೆರಿಕ ಅಮೆರಿಕ’ ಚಿತ್ರದ ‘ಬಾನಲ್ಲಿ ಓಡೋ ಮೋಡ..’ ಕೊಟ್ರೇಶಿಯ ಕನಸು, ಕ್ರೌರ್ಯ, ಕೊಟ್ಟ, ಮತದಾನ, ಕಿರಿಕ್ ಪಾರ್ಟಿ ಚಿತ್ರಗಳಿಗೆ ಗೀತ ರಚನೆಯನ್ನೂ ಮಾಡಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ – ಸಾಹಿತಿ ಎಚ್.ಎಸ್.ವೆಂಕಟೇಶ್ ಮೂರ್ತಿ ಅವರ ಸಾಹಿತ್ಯ ಕೊಡುಗೆಗಳಿಗೆ ಕೆಲವು ಮುಖ್ಯ ಗೌರವ ಪುರಸ್ಕಾರಗಳು ಲಭ್ಯವಾಗಿದೆ