ಉಡುಪಿ ಮೇ.10: ಗಂಗೊಳ್ಳಿಯಲ್ಲಿ ವಿಶು ಶೆಟ್ಟಿಯವರ ನೆರವಿನಿಂದ ರಕ್ಷಿಸಲ್ಪಟ್ಟ ವೃದ್ಧರ ಸಂಬಂಧಿಕರು ಪತ್ತೆಯಾಗಿದ್ದು, ಅವರನ್ನು ಸಂಬಂಧಿಕರ ವಶಕ್ಕೆ ನೀಡಲಾಗಿದೆ.
ಮಂಗಳೂರು ಮೂಲದವರಾದ ವೃದ್ಧ ರವೀಂದ್ರನಾಥರವರು ಮರೆವು ಖಾಯಿಲೆಗೆ ತುತ್ತಾಗಿ ಗಂಗೊಳ್ಳಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಅಸಹಾಯಕರಾಗಿ ಮಲಗಿದ್ದು, ಮಾಹಿತಿ ಪಡೆದ ವಿಶು ಶೆಟ್ಟಿ ಸ್ಥಳೀಯ ಕಾರ್ಯಕರ್ತರ ಸಹಾಯದಿಂದ ರಕ್ಷಿಸಿ ಸ್ವರ್ಗ ಆಶ್ರಮಕ್ಕೆ ದಾಖಲಿಸಿದ್ದರು. ಈ ಬಗ್ಗೆ ವಿಶು ಶೆಟ್ಟಿ ವೃದ್ಧರ ಸಂಬಂಧಿಕರ ಪತ್ತೆಗೆ ವರದಿ ಬಿತ್ತರಿಸಿದ್ದರು. ಕೂಡಲೇ ಮಂಗಳೂರು ಪೊಲೀಸರು ವಿಶು ಶೆಟ್ಟಿಯವರನ್ನು ಸಂಪರ್ಕಿಸಿ ಅದೇ ವ್ಯಕ್ತಿ ನಾಪತ್ತೆ ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ನೀಡಿದರು. ಮೇ 10ರ ಬೆಳಗಿನ ಜಾವ ವೃದ್ಧರ ಮಕ್ಕಳು ಸ್ವರ್ಗ ಆಶ್ರಮಕ್ಕೆ ಬಂದು ತಂದೆಯನ್ನು ಕರೆದುಕೊಂಡು ಹೋಗಿದ್ದಾರೆ. ಸಹಕರಿಸಿದವರಿಗೆ ಧನ್ಯವಾದ ಸಮರ್ಪಿಸಿದ್ದಾರೆ.
ಆಶ್ರಯ ನೀಡಿದ ಸ್ವರ್ಗ ಆಶ್ರಮ ಹಾಗೂ ರಕ್ಷಣಾ ಕಾರ್ಯದಲ್ಲಿ ಸಹಕರಿಸಿದ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಹಾಗೂ ಗಂಗೊಳ್ಳಿ ಪೊಲೀಸರಿಗೆ ವಿಶು ಶೆಟ್ಟಿ ಧನ್ಯವಾದ ತಿಳಿಸಿದ್ದಾರೆ.