ಪಡುಬಿದ್ರೆ :ಜನವರಿ 30:ಎರಡು ಕಾರು ಮತ್ತು ಶಾಲಾ ವಾಹನದ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಶಾಲಾ ಬಸ್ ಮಗುಚಿ ಬಿದ್ದ ಘಟನೆ ತೆಂಕ ಎರ್ಮಾಳು ರಾಷ್ಟ್ರೀಯ ಹೆದ್ದಾರಿ 66ರ ಸಂದು ದಾಂತಿ ಗರಡಿ ಎದುರು ಬುಧವಾರ ಸಂಜೆ ನಡೆದಿದೆ
ಈ ಸಂದರ್ಭದಲ್ಲಿ ಶಾಲಾ ವಾಹನದಲ್ಲಿ ವಿದ್ಯಾರ್ಥಿಗಳು ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ,ಉಡುಪಿಯಿಂದ ಮಂಗಳೂರು ಕಡೆ ಸಾಗುತ್ತಿದ್ದ ರಿಟ್ಜ್ ಕಾರೊಂದು ಸಂಜೆಯ ವೇಳೆ ರಸ್ತೆ ಬದಿ ನಡೆದು ಹೋಗುತ್ತಿದ್ದ ಬಿಜಾಪುರ ಮೂಲದ ಮಹಿಳೆ ಮಹಾದೇವಿ ಅವರಿಗೆ ಢಿಕ್ಕಿ ಹೊಡೆದಿತ್ತು. ಬಳಿಕ ಡಿವೈಡರ್ ದಾಟಿದ್ದ ಕಾರು ಮಂಗಳೂರು-ಉಡುಪಿ ಕಡೆ ಸಾಗುವ ಹೆದ್ದಾರಿ ಮಧ್ಯೆ ಪಲ್ಟಿಯಾಗಿತ್ತು.
ಇದೇ ಸಂದರ್ಭ ಶಾಲಾ ವಿದ್ಯಾರ್ಥಿಗಳನ್ನು ಮನೆಗೆ ತಲುಪಿಸಿ ಕಾಪು ಚಂದ್ರನಗರ ಕಡೆ ಸಾಗುತ್ತಿದ್ದ ಕ್ರೆಸೆಂಟ್ ಇಂಟರ್ನ್ಯಾಷನಲ್ ಶಾಲಾ ವಾಹನಕ್ಕೆ ಕಾರು ಢಿಕ್ಕಿಯಾಗಿತ್ತು. ಶಾಲಾ ವಾಹನದ ಚಾಲಕ ತತ್ಕ್ಷಣ ಬ್ರೇಕ್ ಹಾಕಿದ್ದು, ಈ ವೇಳೆಗೆ ನಿಯಂತ್ರಣ ತಪ್ಪಿದ ಶಾಲಾ ವಾಹನ ಡಿವೈಡರ್ ದಾಟಿ ಉಡುಪಿ-ಮಂಗಳೂರು ಕಡೆ ಸಾಗುವ ಹೆದ್ದಾರಿಯಲ್ಲಿ ಮುಗುಚಿದೆ. ಇದೇ ಸಂದರ್ಭ ಮಂಗಳೂರು ಕಡೆಯಿಂದ ಉಡುಪಿಯತ್ತ ಸಾಗುತ್ತಿದ್ದ ಇನ್ನೊಂದು ಹ್ಯುಂಡೈ ಅಲ್ಕಜಾರ್ ಕಾರೂ ಕೂಡಾ ಎದುರಲ್ಲಿದ್ದ ಶಾಲಾ ವಾಹನದಿಂದಾಗಿ ಅಪಘಾತಕ್ಕೀಡಾಗಿದೆ.
ಅಪಘಾತದಲ್ಲಿ ಮಹಿಳೆಯ ಕೈಗೆ ಗಾಯಗಳಾಗಿವೆ. ಅವರು ಪಡುಬಿದ್ರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ರಿಟ್ಜ್ ಕಾರಿನ ಚಾಲಕನ ಕಾಲಿಗೆ ತೀವ್ರತರ ಗಾಯವಾಗಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲಾ ವಾಹನದ ನಿರ್ವಾಹಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಪಡುಬಿದ್ರಿ ಠಾಣಾ ಎಎಸ್ಐ ಸುದೇಶ್ ಶೆಟ್ಟಿ ಘಟನ ಸ್ಥಳಕ್ಕೆ ಭೇಟಿಯಿತ್ತು ಪರಿಶೀಲಿಸಿದ್ದಾರೆ. ಸಾರ್ವಜನಿಕರು ಸುಗಮ ವಾಹನ ಸಂಚಾರಕ್ಕೆ ಪೊಲೀಸರೊಂದಿಗೆ ಸಹಕರಿಸಿದರು. ಟೋಲ್ಗೇಟ್ನಲ್ಲಿನ ಕ್ರೇನ್ ಮೂಲಕ ಬಸ್ಸನ್ನು ಮೇಲಕ್ಕೆತ್ತಲಾಗಿದೆ.