ಮಲ್ಪೆ: ಅನಧಿಕೃತ ಕಾರ್ಡ್ ಬಳಸಿ ಎಟಿಎಂನಲ್ಲಿ ಹಣ ಪಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಎಟಿಎಂ ಡಿಸ್ಪ್ಲೇಗೆ ಹಾನಿ ಮಾಡಿದ ಘಟನೆ ಹೂಡೆಯಲ್ಲಿ ನಡೆದಿದೆ.
ಕೆನರಾ ಬ್ಯಾಂಕ್ ಹೂಡೆ ಶಾಖೆಯ ಮ್ಯಾನೇಜರ್ ಕೆ. ರವಿಕುಮಾರ್ (35) ನೀಡಿದ ದೂರಿನಂತೆ, ಆಗಸ್ಟ್ 30ರಂದು ರಾತ್ರಿ ಸುಮಾರು 9.52ರ ವೇಳೆಗೆ ಹೂಡೆ ಶಾಖೆ ಆವರಣದಲ್ಲಿರುವ ಎಟಿಎಂಗೆ ವ್ಯಕ್ತಿಯೊಬ್ಬರು ಹಣ ಪಡೆಯಲು ಬಂದಿದ್ದರು.
ಅನಧಿಕೃತ ಕಾರ್ಡ್ ಬಳಕೆಯಿಂದ ವ್ಯವಹಾರ ನಿರಾಕರಿಸಿದ ಬಳಿಕ ಅವರು ಬೈಕ್ ಕೀಯನ್ನು ಬಳಸಿ ಎಟಿಎಂ ಡಿಸ್ಪ್ಲೇಗೆ ಹಾನಿ ಮಾಡಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ನಂತರ ಎಟಿಎಂ ಆವರಣದಲ್ಲಿ ಇರಿಸಲಾಗಿದ್ದ ಅಗ್ನಿಶಾಮಕ ಸಾಧನವನ್ನು ತೆಗೆದುಕೊಂಡು ಡಿಸ್ಪ್ಲೇಗೆ ಎರಡು ಬಾರಿ ಹೊಡೆದ ಪರಿಣಾಮ ಅದು ಮುರಿದು ಹಾನಿಯಾಗಿದೆ. ಇದರಿಂದ ಬ್ಯಾಂಕಿನ ಆಸ್ತಿಗೆ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಎಟಿಎಂಗೆ ಹಾನಿ ಮಾಡಿದ ವ್ಯಕ್ತಿಯನ್ನು ಇಸ್ಮಾಯಿಲ್ ಬಿಜಾಪುರಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






